ಭಟ್ಕಳ: ಜ.21 ರಂದು ಕಾರವಾರ ಸಮೀಪದ ಕೂರ್ಮಗಡ ಜಾತ್ರೆಗೆಂದು ತೆರಳಿದ್ದ 35ಮಂದಿ ಇದ್ದ ದೋಣಿ ಮುಳುಗಿ 16ಮಂದಿ ಜಲಸಮಾಧಿಯಾಗಿದ್ದು ಅದರಲ್ಲಿ 15ಜನರ ಮೃತದೇಹಗಳು ಈಗಾಗಲೇ ಪತ್ತೆಯಾಗಿದ್ದು ಓರ್ವ ಬಾಲಕನ ಮೃತದೇಹ ಮಾತ್ರ 8ದಿನಗಳ ಬಳಿಕ ಭಟ್ಕಳಕ್ಕೆ ಸಮೀಪ ಅಳ್ವೆಕೋಡಿ ಎಂಬಲ್ಲಿ ಸೋಮವಾರ ಪತ್ತೆಯಾಗಿದೆ.
ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಹೊಸೂರಿನ ಸಂದೀಪ (10) ಪತ್ತೆಯಾದ ಬಾಲಕ. ನೇತ್ರಾಣಿ ದ್ವೀಪದ ಬಳಿ ನಿನ್ನೆ ಮೀನುಗಾರರಿಗೆ ಕಂಡಿರುವ ಬಗ್ಗೆ ಕರಾವಳಿ ಕಾವಲು ಪೊಲೀಸರಿಗೆ ತಿಳಿಸಿದ್ದರು. ತಕ್ಷಣ ಅಲ್ಲಿಗೆ ತೆರಳಿದಾಗ ದೇಹ ಪತ್ತೆಯಾಗಿರಲಿಲ್ಲ. ಕೊನೆಗೆ ಭಟ್ಕಳದ ಕಡೆ ನೀರಿನ ಸೆಳವು ಇರುವುದರಿಂದ ಆ ಕಡೆ ತೆರಳಿರುವ ಬಗ್ಗೆ ಹಲವು ಮೀನುಗಾರರು ಅನುಮಾನ ವ್ಯಕ್ತಪಡಿಸಿದ್ದರು. ಅದರಂತೆ ಸತತ ಹುಡುಕಾಟದಿಂದಾಗಿ ಇಂದು ಮೃತದೇಹ ಪತ್ತೆಯಾಗಿದೆ.
ನೀರು ಕುಡಿದಿದ್ದರಿಂದ ಬಾಲಕನ ದೇಹ ಊದಿಕೊಂಡಿದ್ದು, ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತದೇಹವನ್ನು ಕಾವಲು ಪಡೆ ಪೊಲೀಸರು ಭಟ್ಕಳದ ಅಳ್ವೆಕೋಡಿ ಬಳಿ ತಂದು ಕಾರವಾರದ ಜಿಲ್ಲಾ ಆಸ್ಪತ್ರೆಗೆ ಸಾಗಿಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹ ಕುಟುಂಬಸ್ಥರಿಗೆ ಹಸ್ತಾತಂರಿಸುವ ಬಗ್ಗೆ ಅಧಿಕಾರಿಗಳು ತಿಳಿಸಿದ್ದಾರೆ.
8 ದಿನಗಳ ಸತತ ಕಾರ್ಯಾಚರಣೆ: ಜ. 21 ರಂದು ಸಮುದ್ರ ಮಧ್ಯದ ಕೂರ್ಮಗಡ ಜಾತ್ರೆ ವೇಳೆ ನಡೆದ ದೋಣಿ ದುರಂತದಲ್ಲಿ ಒಟ್ಟು 16 ಜನರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. ಅದರಲ್ಲಿ 8 ಜನರ ದೇಹ ಅಂದೇ ಪತ್ತೆಯಾಗಿತ್ತು. ಆದರೆ ಉಳಿದ 8 ಜನರಲ್ಲಿ 6 ಮೃತದೇಹ ಮಾರನೆ ದಿನ ಮತ್ತು ಓರ್ವ ಬಾಲಕಿ ಶವ ಮೂರನೇ ದಿನ ಪತ್ತೆಯಾಗಿತ್ತು. ಆದರೆ ಎಷ್ಟೆ ಹುಡುಕಿದರು ಬಾಲಕ ಸಂದೀಪನ ಶವ ಪತ್ತೆಯಾಗಿರಲಿಲ್ಲ.
ಈತನಿಗಾಗಿ ಕಳೆದ ಏಂಟು ದಿನಗಳಿಂದ ಕರಾವಳಿ ಕಾವಲು ಪೊಲೀಸ್, ನೌಕಾನೆಲೆ ಹಾಗೂ ತಟರಕ್ಷಕ ದಳದ ಸಿಬ್ಬಂದಿ ಕಡಲತೀರದುದ್ದಕ್ಕೂ ತೀವ್ರ ಹುಡುಕಾಟ ನಡೆಸಿದ್ದರು. 10 ಬೋಟ್ ಹಾಗೂ 2 ಹೆಲಿಕಾಪ್ಟರ್ ಸತತ ಕಾರ್ಯಾಚರಣೆ ನಡೆಸಿದ್ದರು. ಪೊಲೀಸ್ ಮತ್ತು ಲೈಪ್ ಗಾರ್ಡ್ ಸಿಬ್ಬಂದಿಗಳ ಮೂಲಕವೂ ಜಿಲ್ಲಾಡಳಿತ ನಾಪತ್ತೆಯಾದ ಬಾಲಕನ ಪತ್ತೆಗೆ ಮುಂದಾಗಿತ್ತು. ಆದರೆ ಏಂಟು ದಿನಗಳ ಬಳಿಕ ಇದೀಗ ಪತ್ತೆಯಾಗಿದ್ದು, ನಾಪತ್ತೆಯಾದ ಎಲ್ಲರು ಪತ್ತೆಯಾದಂತಾಗಿದೆ.
ಈ ಸಂದರ್ಭದಲ್ಲಿ ಭಟ್ಕಳ ಉಪವಿಭಾಗದ ಸಹಾಯಕ ಆಯುಕ್ತ ಸಾಜಿದ್ ಆಹ್ಮದ್ ಮುಲ್ಲಾ, ಸಿಪಿಐ ಗಣೇಶ ತಹಸಿಲದ್ದಾರ್ ವಿ.ಎನ್.ಬಾಡ್ಕರ್ ಸ್ಥಳದಲ್ಲಿ ಹಾಜರಿದ್ದರು. ತಾಲೂಕಾಡಳಿತದಿಂದ ಬಾಲಕನ ಮೃತದೇಹವನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆಯನ್ನು ಮಾಡಲಾಯಿತು.