ರಾಜ್ಯೋತ್ಸವ ನಮ್ಮ ಅಭಿಮಾನದ ಹಬ್ಬ-ಗಂಗಾಧರ್ ನಾಯ್ಕ
ಭಟ್ಕಳ:ರಾಜ್ಯೋತ್ಸವ ನಮ್ಮ ಅಭಿಮಾನದ ಹಬ್ಬವಾಗಿದ್ದು, ನಾಡ ನುಡಿಯ ಸ್ಮರಣೆಯೊಂದಿಗೆ ಕನ್ನಡ ನಾಡು ನುಡಿಯನ್ನು ಮತ್ತಷ್ಟು ಶ್ರೀಮಂತಗೊಳಿಸುವುದು ಹೇಗೆ?, ಈ ನಾಡಿನ ಸವಾಲು ಸಮಸ್ಯೆಗಳೇನು? ಅದಕ್ಕಾಗಿ ನಾವೇನು ಮಾಡಬೇಕೆಂದು ಭಟ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉಪನ್ಯಾಸಕ ಗಂಗಾಧರ್ ನಾಯ್ಕ ಹೇಳಿದರು.
ಅವರು ಗುರುವಾರ ನವಾಯತ್ ಕಾಲೋನಿಯ ಕ್ರೀಡಾಂಗಣದಲ್ಲಿ ಆದ್ದೂರಿಯಾಗಿ ಜರಗಿದ 63ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಕನ್ನಡ ನಾಡು ನುಡಿಯ ಕುರಿತಂತೆ ಉಪನ್ಯಾಸ ನೀಡಿದರು.
ಕನ್ನಡ ನಾಡು ನುಡಿಯ ಕುರಿತಂತೆ ಗಂಭೀರ ಚರ್ಚೆ ನಡೆಯಬೇಕು ಎಂದ ಅವರು, ಶಾಲಾ ಶಿಕ್ಷಕರಿಗೆ ಪಾಠಬೋಧನೆಯ ಹೊರತಾದ ಕಾರ್ಯಗಳಿಗೆ ಮುಕ್ತಿ ನೀಡಿ ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಾಕ ಶಿಕ್ಷಣ ಹೆಚ್ಚಿಸುವ ಕೆಲಸವಾಗಬೇಕು ಎಂದು ಅವರು ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಭಟ್ಕಳ-ಹನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಸುನಿಲ್ ನಾಯ್ಕ, ಎಲ್ಲ ಭಾಷೆ, ಸಮುದಾಯವನ್ನು ಒಪ್ಪಿಕೊಂಡ ಏಕೈಕ ರಾಜ್ಯ ಕರ್ನಾಟಕವಾಗಿದೆ ಎಲ್ಲೆ ಇರು ಹೇಗೆ ಇರು ಕನ್ನಡ ನಾಡಿನ ಮಣ್ಣಿನ ಋಣವನ್ನು ನೀ ತೀರಿಸು ಎಂದು ಕನ್ನಡಿಗರಿಗೆ ಕರೆ ನೀಡಿ ಕನ್ನಡದ ಕೆಲಸ ಕಾರ್ಯಗಳಲ್ಲಿ ಸದಾ ತಮ್ಮ ಬೆಂಬಲವಿದೆ ಎಂದರು.
ಸಹಾಯಕ ಆಯುಕ್ತ ಸಾಜಿದ್ ಮುಲ್ಲಾ ಮಾತನಾಡಿ ಕನ್ನಡ ಏಕಿಕರಣ ಹೋರಾಟದ ಫಲವಾಗಿ ಇಂದು ಎಲ್ಲ ಕಚೇರಿಗಳಲ್ಲಿ ಕನ್ನಡ ಕಾಣುವಂತಾಗಿದೆ ಎಂದರು.
ವೇದಿಕೆಯಲ್ಲಿ ಭಟ್ಕಳ ಪುರಸಭೆ ಉಪಾಧ್ಯಕ್ಷ ಆಶ್ಫಾಖ್ ಕೆ.ಎಂ, ಕೆ.ಡಿ.ಪಿ ಸದಸ್ಯ ಎಸ್.ಎಂ.ಸೈಯ್ಯದ್ ಅಬ್ದುಲ್ ಅಝೀಂ ಅಂಬಾರಿ, ತಾ.ಪಂ.ಸದಸ್ಯ ಹನುಮಂತ ನಾಯ್ಕ, ಡಿ.ವೈ.ಎಸ್.ಪಿ ವೆಲೆಂಟನ್ ಡಿ’ಸೋಜಾ, ತಾ.ಪಂ. ಕಾರ್ಯನಿರ್ವಾಣಾದಿಕಾರಿ ಜೆ.ಡಿ. ಮುರುಗೋಡು, ಎಸಿಎಫ್ ಬಾಲಚಂದ್ರ, ಜಾಲಿ ಪಟ್ಟಣ ಪಂಚಾಯತ್ ಅಧ್ಯಕ್ಷ ಆದಂ ಪಣಂಬೂರು ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಾಹಿತಿ ಪೂರ್ಣಿಮಾ ನಾಯ್ಕ, ಕೇಶವ ಆಚಾರ್ಯ(ಯಕ್ಷಗಾನ), ನಾರಾಯಣ ನಾಯ್ಕ(ಹರಿಸೇವಾ ಕಾರ್ಯ), ಪಲ್ಲವಿ ನಾಯಕ(ಸಂಗೀತ), ಎಂ.ಕೆ.ನಾಯ್ಕ( ಆಡಳಿತದಲ್ಲಿ ಕನ್ನಡ), ಸುರಶ್ ಶಂಕರ್ ಜೋಗಿ(ಜಾನಪದ ಕಲೆ), ವೀರೇಂದ್ರ ಶಾನುಭಾಗ(ವಿಶೇಷ ಸನ್ಮಾನ) ರನ್ನು ತಾಲೂಕು ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ತಹಸಿಲ್ದಾರ್ ವಿ.ಎನ್. ಬಾಡ್ಕರ್, ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್.ಮುಂಜಿ ಧನ್ಯವಾದ ಅರ್ಪಿಸಿದರು. ಶಿಕ್ಷಕ ಶ್ರೀಧರ್ ಶೇಟ್ ಕಾರ್ಯಕ್ರಮ ನಿರೂಪಿಸಿದರು.