ಹೊನ್ನಾವರ ; ಅಕ್ರಮ ಜಾನುವಾರು ಸಾಗಾಟ ಆರೋಪ; ಇಬ್ಬರು ಯುವಕರ ಮೇಲೆ ಮಾರಣಾಂತಿಕ ಹಲ್ಲೆ; ನಾಲ್ವರ ಬಂಧನ
ಹೊನ್ನಾವರ: ಅಂಕೋಲದಿಂದ ಭಟ್ಕಳಕ್ಕೆ ಬುಲೇರೊ ವಾಹನದಲ್ಲಿ 2ಎಮ್ಮೆ ಹಾಗೂ 1 ಎತ್ತನ್ನು ಸಾಗಾಟ ಮಾಡುತ್ತಿದ್ದಾಗ ಹೆದ್ದಾರಿಯಲ್ಲಿ ವಾಹನವನ್ನು ತಡೆದ ನೂರಕ್ಕೂ ಅಧಿಕ ಸಂಘಪರಿವಾರಕ್ಕೆ ಸೇರಿದ ಕಾರ್ಯಕರ್ತರೆನ್ನಲಾದವರು ಹೊನ್ನಾವರ ತಾಲೂಕಿನ ಕರ್ಕಿಯಲ್ಲಿ ಹೆದ್ದಾರಿಯನ್ನು ತಡೆದು ಭಟ್ಕಳದ ಇಬ್ಬರು ಯುವಕರ ಮೇಲೆ ಮಾರಣಾಂತಿಕ ಹಲ್ಲೆ ನಡೆದ ಘಟನೆ ಬುಧವಾರ ತಡರಾತ್ರಿ ನಡೆದಿದೆ.
ಹಲ್ಲೆಗೊಳಗಾದ ಯುವಕರನ್ನು ಭಟ್ಕಳದ ಮಗ್ದೂಮ್ ಕಾಲೋನಿಯ ನೂರುಲ್ ಅಮೀನ್(40) ಹಾಗೂ ಮುಗಳೀಹೊಂಡದ ಗುಫ್ರಾನ್ ಪೋತೆ(35) ಎಂದು ಗುರುತಿಸಲಾಗಿದೆ. ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಉತ್ತರಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ್ ಪಾಟೀಲ್ ಮಾಹಿತಿ ನೀಡಿದ್ದಾರೆ.ಅಲ್ಲದೆ ನೂರಕ್ಕೂ ಹೆಚ್ಚು ಮಂದಿಯ ವಿರುದ್ಧ ಕಾನೂನು ಕೈಗೆತ್ತಿಗೊಂಡಿರುವ ಪ್ರಕರಣವನ್ನು ದಾಖಲಿಸಲಾಗಿದೆ. ಗಾಯಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಭಟ್ಕಳದಲ್ಲಿ ತ್ವೇಷಮಯ ವಾತವರಣ ನಿರ್ಮಾಣಗೊಂಡಿದ್ದು ಪೊಲೀಸರು ಕಟ್ಟೆಚ್ಚರದ ಕ್ರಮ ಜರುಗಿಸಿದ್ಧಾರೆ.
ಘಟನೆಯ ವಿವರ: ಬುಧವಾರ ರಾತ್ರಿ ಅಂಕೋಲದಿಂದ ಎರಡು ಎಮ್ಮೆ ಹಾಗೂ ಒಂದು ಎತ್ತನ್ನು ತಮ್ಮ ಬುಲೆರೋ ವಾಹನದಲ್ಲಿ ಸಾಗಿಸಿಕೊಂಡು ಬರುತ್ತಿದ್ದ ವಿಷಯವನ್ನು ಮೊದಲೇ ಅರಿತುಕೊಂಡಿದ್ದ ಹೊನ್ನಾವರದ ನೂರಾರು ಮಂದಿ ಸಂಘಪರಿವಾರದ ಕಾರ್ಯಕರ್ತರು ರಾ.ಹೆ. ಯಲ್ಲಿ ತಡರಾತ್ರಿ ವಾಹನವನ್ನು ತಡೆದು ಅವರ ಮೇಲೆ ರಾಡು, ಬಾಂಬು ಹಾಗೂ ಸಲಾಕೆಗಳಿಂದ ಹಲ್ಲೆ ಮಾಡಿದ್ದಾರೆ. ವಾಹನವನ್ನು ಸಂಪೂರ್ಣವಾಗಿ ನುಜ್ಜುಗುಜ್ಜಾಗಿ ಜಖಂಗೊಳಿಸಿದ್ದಾರೆ. ಘಟನೆಯನ್ನು ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಹಲ್ಲೆಕೋರರಿಂದ ಇಬ್ಬರ ಪ್ರಾಣವನ್ನು ರಕ್ಷಿಸಿದ್ದು ಗಾಯಾಳುಗಳನ್ನು ಭಟ್ಕಳಕ್ಕೆ ಸಾಗಿಸಿದರೆ ಅಲ್ಲಿ ಪರಿಸ್ಥಿತಿ ಹದಗಡೆಬಹುದು ಎನ್ನುವ ಉದ್ದೇಶದಿಂದ ಕಾರವಾರ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಅಲ್ಲಿ ಅವರನ್ನು ಚಿಕಿತ್ಸೆ ನೀಡಿದ್ದಾರೆ. ಅಲ್ಲದೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿದ್ದು ನೂರಕ್ಕೂ ಅಧಿಕ ಮಂದಿಯ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗುರುವಾರ ಗಾಯಳುಗಳ ಸಂಬಂಧಿಕರು ಕಾರವಾರ ಆಸ್ಪತ್ರೆಗೆ ಭೇಟಿ ನೀಡಿದ್ದು ಅವರ ಸ್ಥಿತಿಯನ್ನು ಕಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಮುಂದಾಗಿದ್ದು ಅಂಬುಲನ್ಸ್ ನಲ್ಲಿ ಅವರನ್ನು ಕರೆದುಕೊಂಡು ಹೋಗುತ್ತಿರಬೇಕಾದರೆ ಭಟ್ಕಳದ ಸರ್ಕಲ್ ಬಳಿ ನೂರಾರು ಮಂದಿ ಸೇರಿದ್ದು ಪ್ರತಿಭಟನೆ ನಡೆಸಲು ಮುಂದಾದಾಗ ಪೊಲೀಸರು ಮಧ್ಯಸ್ಥಿಕೆಯನ್ನು ವಹಿಸಿ ವಾತವರಣ ತಿಳಿಗೊಳಿಸಿದ್ದಾರೆ. ಅಲ್ಲದೆ ಗಾಯಾಳುಗಳನ್ನು ಭೇಟಿಯಾಗಲು ಯಾರಿಗೂ ಅವಕಾಶ ಮಾಡಿಕೊಡದೆ ಮಣಿಪಾಲ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸಾಗಿಸಲಾಗಿದೆ.
ಆರೋಪಿಗಳು ಕಾನೂನು ಕೈಗೆತ್ತಿಕೊಂಡಿದ್ದು ಹೊಡೆಯುವಂತಹ ಹಕ್ಕನ್ನು ಅವರಿಗೆ ನೀಡಿದ್ದು ಯಾರು ಎನ್ನುವ ಪ್ರತಿರೋಧದ ಮಾತುಗಳು ಎಲ್ಲೆಡೆ ಕೇಳಿಬರುತ್ತಿದ್ದು ಅರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಕೂಗು ಕೇಳಿಬರುತ್ತಿದೆ.