ಕೋಲಾರ : ಹಾಸ್ಯ ಜೀವನದ ಅವಿಭಾಜ್ಯ ಅಂಗ, ಪ್ರತಿ ಮನುಷ್ಯನು ತಮ್ಮ ಜೀವನದ ಉಲ್ಲಾಸವನ್ನು ಅನುಭವಿಸಬೇಕಾದರೆ ಹಾಸ್ಯ ತನ್ನದೇ ಆದ ಪ್ರಭಾವ ಬೀರುತ್ತದೆ. ಈ ದೆಸೆಯಲ್ಲಿ ಜೀವನ ರಸಪೂರ್ಣವಾಗಬೇಕಾದರೆ ಹಾಸ್ಯ ಬಹಳ ಪೂರಕವಾಗಿದೆ. ಮತ್ತು ಹಾಸ್ಯ ಪ್ರಜ್ಞೆ ಪ್ರತಿಯೊಬ್ಬರಲ್ಲೂ ಉಂಟಾದಾಗ ಬದುಕಿನಲ್ಲಿ ಲಾಲಿತ್ಯ ಕಾಣಬಹುದು ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸ್ವಾಮಿ ತಿಳಿಸಿದರು.
ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ನಗರದ ನೂತನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಚುಟುಕು ಹಾಸ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ವಿದ್ಯಾರ್ಥಿಗಳು ಫಲಿತಾಂಶ ಕೊಡುವುದರ ಜೊತೆಗೆ ಸತ್ಪ್ರಜೆಗಳಾಗಿ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಬೇಕು. ಕನ್ನಡ ಪರಿಷತ್ತುಗಳು ಕನ್ನಡ ಸಂಘಗಳು ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸುವತ್ತ ಚಿಂತನ ಮಂಥನ ನಡೆಸಬೇಕಾಗಿದೆ. ಕನ್ನಡ ಭಾಷೆ ಬೋಧಕರು ಕನ್ನಡವನ್ನು ಕಟ್ಟುವ ಕಾಯಕದಲ್ಲಿ ತೊಡಗಿರುವುದು ಶ್ಲಾಘನೀಯ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ರಘುನಾಥರೆಡ್ಡಿ ಮಾತನಾಡಿ ಇಂದು ಲಾಫಿಂಗ್ ಕ್ಲಬ್ಗಳು ಸ್ಥಾಪನೆಯಾಗುತ್ತಿರುವುದು ನಗು ಸಹಜತೆಯಿಂದ ದೂರವಾಗುತ್ತಿದೆ ಎಂಬುದಕ್ಕೆ ಸಾಕ್ಷಿಗಳಾಗಿ ಸ್ಥಾಪನೆಯಾಗುತ್ತಿವೆ. ಡಿ.ವಿ.ಜಿ. ಹೇಳುವಂತೆ ನಗು ಸಹಜ ಧರ್ಮ ಎಂಬುದನ್ನು ಕಾಣಬೇಕಾಗಿದೆ ಎಂದರು.
ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಬಾಲಾಜಿ ಮಾತನಾಡಿ ಶಿಕ್ಷಕರ ನಿರಂತರ ಪರಿಶ್ರಮವೇ ಫಲಿತಾಂಶವಾಗಿರುತ್ತದೆ. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಕರ ಬದ್ಧತೆ ಬಹಳ ಮುಖ್ಯ. ಹಿಂದಿನ ವರ್ಷಕ್ಕಿಂತ ಹೆಚ್ಚಿನ ಫಲಿತಾಂಶವನ್ನು ವಿದ್ಯಾರ್ಥಿಗಳಿಂದ ನಾವು ನಿರೀಕ್ಷಿಸುತ್ತೇವೆ. ಇದಕ್ಕೆ ಅಧ್ಯಯನಶೀಲತೆಯನ್ನು ಮೈಗೂಡಿಸಿಕೊಳ್ಳಬೇಕು ಜೊತೆಗೆ ಸಾಂಸ್ಕøತಿಕ, ಹಾಸ್ಯ, ಬರಹಗಳ ಮೂಲಕ ಜ್ಞಾನವನ್ನು ಸಂಪಾದಿಸಬೇಕು.
ಜಿಲ್ಲಾ ಕನ್ನಡ ಉಪನ್ಯಾಸಕರ ವೇದಿಕೆಯ ಅಧ್ಯಕ್ಷ ಜೆ.ಜಿ. ನಾಗರಾಜ್ ಮಾತನಾಡಿ ಮನುಷ್ಯ ನಗುನಗುತ್ತಾ ಬದುಕುವುದನ್ನು ಮರೆತು ಇತರರನ್ನು ನೋಡಿ ನಗುವ ವೈಷಮ್ಯವನ್ನು ರೂಢಿಸಿಕೊಳ್ಳುತ್ತಿರುವುದು ಅಪಾಯಕಾರಿ ಸೂಚನೆಯಾಗಿದೆ. ಉತ್ತರ ಕೊರಿಯ ಮತ್ತು ಅಮೇರಿಕಾ ದೇಶಗಳ ದ್ವೇಶಮಯ ವ್ಯಕ್ತಿ –ವ್ಯಕ್ತಿಯ ನಡುವೆ ಗಂಭೀರತೆಯನ್ನು ಪಡೆದುಕೊಳ್ಳುತ್ತಿರುವುದು ಅಪಾಯಕಾರಿ ದ್ಯೋತಕವಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ. ಶ್ರೀನಿವಾಸ್ ಮಾತನಾಡಿ ಸಾಹಿತ್ಯವನ್ನು ಬೆಳೆಸುವುದರ ಜೊತೆಗೆ ಹಾಸ್ಯ ಕಲಾವಿದರನ್ನು ಬೆಳೆಸಿದರೆ ಸಮಾಜ ಆರೋಗ್ಯವಾಗಿರುತ್ತದೆ. ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಹಾಸ್ಯ ಕಲಾವಿದ ಚಿಟ್ನಹಳ್ಳಿ ರಾಮಚಂದ್ರ, ನಾರಾಯಣಸ್ವಾಮಿ ಮತ್ತಿತರರು ಹಾಸ್ಯದ ನಗೆ ಗಡಲಲ್ಲಿ ವಿದ್ಯಾರ್ಥಿಗಳನ್ನು ತೇಲಿಸಿದ ಸಮಾರಂಭದಲ್ಲಿ ನೂತನ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪ ಪ್ರಾಂಶುಪಾಲ ರುದ್ರಪ್ಪ, ಶಿಕ್ಷಣ ಸಂಯೋಜಕ ಆರ್. ಶ್ರೀನಿವಾಸನ್, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಶಂಕರಪ್ಪ, ಜಾನಪದ ಗಾಯಕ ಜನ್ನಘಟ್ಟ ಕೃಷ್ಣಮೂರ್ತಿ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಪಿ. ನಾರಾಯಣಪ್ಪ, ಮುಖಂಡರಾದ ಅಪ್ಪಿ ನಾರಾಯಣಸ್ವಾಮಿ, ಸ್ಕೌಟ್ ಬಾಬು, ಟಿ.ಸುಬ್ಬರಾಮಯ್ಯ, ಸಂಗೀತ್ ವೆಂಕಟೇಶ್ ಮತ್ತು ಶಿಕ್ಷಕ ಸಿಬ್ಬಂದಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.