ಭಟ್ಕಳ: ಎರಡು ಎತ್ತುಗಳ ನಡುವೆ ನಡೆದ ಕಾದಾಟದಲ್ಲಿ ಸಿಲುಕಿದ ಸ್ಕೂಟರ್ ಸವಾರ ಗಂಭೀರವಾಗಿ ಗಾಯಗೊಂಡು ಮಂಗಳೂರು ಆಸ್ಪತ್ರೆ ಸೇರಿದ ಘಟನೆ ರಾ.ಹೆ.66ರಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಎತ್ತುಗಳ ಕಾದಾಟದಲ್ಲಿ ಗಾಯಗೊಂಡಿರುವ ವ್ಯಕ್ತಿಯನ್ನು ಸೈಯ್ಯದ್ ಅಬ್ದುಲ್ ಕಾದಿರ್(46) ಎಂದು ಗುರುತಿಸಲಾಗಿದೆ.
ಶುಕ್ರವಾರದ ಸಾಮೂಹಿಕ ಪ್ರಾರ್ಥನೆಗಾಗಿ ಮದೀನಾ ಕಾಲೋನಿಯಿಂದ ಬಸ್ ನಿಲ್ದಾಣ ಬಳಿಯ ನೂರ್ ಮಸೀದಿಗೆ ತೆರಳುತ್ತಿದ್ದಾಗ ಶಿಫಾ ಕ್ರಾಸ್ ಬಳಿಯ ರಾ.ಹೆ.66ರಲ್ಲಿ ಎರಡು ಎತ್ತುಗಳು ಪರಸ್ಪರ ಕಾದಾಟ ನಡೆಸುತ್ತ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದ ಸ್ಕೂಟರ್ ಗೆ ಡಿಕ್ಕಿ ಹೊಡೆಯಿತು ಎನ್ನಲಾಗಿದ್ದು ಎತ್ತುಗಳ ರಭಸದ ಬಡಿತಕ್ಕೆ ಸ್ಕೂಟರ್ ನಲ್ಲಿ ಚಾಲಕ ಸೈಯ್ಯದ್ ಅಬ್ದುಲ್ ಕಾದಿರ್ ಎಂಬುವವರು ನಿಯಂತ್ರಣ ತಪ್ಪಿ ರಸ್ತೆ ಮೇಲೆ ಬಿದ್ದಿದ್ದು ಇದರಿಂದಾಗಿ ಅವರ ಕೈ ಹಾಗೂ ಕಾಲು ಮುರಿದಿದೆ. ಅವರ ಹೆಗಲ ಮೇಲೂ ಗಂಭೀರ ಗಾಯಗಳಾಗಿದ್ದು ಕೂಡಲೇ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನಿಸಲಾಗಿದೆ.
ಜನರು ಸಾಕು ಪ್ರಾಣಿಗಳನ್ನು ಬಿಡಾಡಿ ದನಗಳನ್ನಾಗಿ ಮಾಡಿಕೊಂಡಿದ್ದು ಅವುಗಳ ಸರಿಯಾದ ನಿರ್ವಾಹಣೆ ಮಾಡದೆ ರಸ್ತೆ ಮೇಲೆ ಬಿಡುತ್ತಾರೆ. ಇದರಿಂದಾಗಿ ಪ್ರಯಾಣಿಕರಿಗೆ, ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುವವರಿಗೆ ತೊಂದರೆಯುಂಟಾಗುತ್ತಿದೆ. ಪುರಸಭೆಯವರು ಈ ಕುರಿತಂತೆ ಯಾವುದೇ ಕ್ರಮ ಜರಗಿಸದೆ ಇರುವುದು ಆಶ್ಚರ್ಯ ತರುವಂತೆ ಮಾಡಿದೆ ಎಂದು ಮದೀನ ಕಾಲೋನಿ ಅಬ್ದುಲ್ ಕಾದಿರ್ ಎಂಬುವವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಎತ್ತುಗಳ ಹೊಡೆದಾಟಕ್ಕೆ ಸಿಲುಕಿ ಕೈಕಾಲು ಮುರಿದುಕೊಳ್ಳುವವರು ಯಾರ ಬಳಿ ದೂರಬೇಕು ಎಂದೂ ಅವರು ಪ್ರಶ್ನಿಸಿದ್ದಾರೆ.