ಸಾವಿರಾರು ಜನಸಾಗರದ ಮಧ್ಯೆ ವಾಸು ನಾಯ್ಕ ಅಂತಿಮ ನಮನ.
ಭಟ್ಕಳ ತಾಲೂಕಿನಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಕರಾಟೆ ತರಬೇತಿಯನ್ನು ನೀಡಿ ಕರಾಟೆ ಕಲೆಯನ್ನು ಪ್ರಖ್ಯಾತಿಗೊಳಿಸುವ ಮೂಲಕ ಕರಾಟೆ ವಾಸು ಎಂದೇ ಪ್ರಖ್ಯಾತರಾಗಿದ್ದ ತಾಲೂಕಿನ ಮುಂಡಳ್ಳಿ ನಿವಾಸಿ ವಾಸು ಎನ್. ನಾಯ್ಕ (42) ಮಂಗಳವಾರದಂದು ವಿಧಿವಶರಾಗಿದ್ದಾರೆ.
ತಾಲೂಕಿನಲ್ಲಷ್ಟೇ ಅಲ್ಲದೇ ಉತ್ತರ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳಿಗೆ ಕರಾಟೆ ತರಬೇತಿಯನ್ನು ನೀಡುತ್ತಿದ್ದ ತಾಲೂಕಿನಲ್ಲಿ ಕರಾಟೆ ವಾಸು ಎಂಬ ನಾಮಾಕಿತರಾದ ವಾಸು ಎನ್. ನಾಯ್ಕ ಮಂಗಳವಾರದಂದು ಬೆಂಗಳುರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇವರು ಕಳೆದ 2 ತಿಂಗಳುಗಳಿಂದ ಮೆದುಳು ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚಿಗಷ್ಟೇ ಯಶಸ್ವಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಅವರು ಸಂಪೂರ್ಣ ಗುಣಮುಖರಾಗಿ ಸದ್ಯದಲ್ಲಿಯೇ ಆಸ್ಪತ್ರೆಯಿಂದ ಬಿಡುಗಡೆಯಾಗುವ ವಿಶ್ವಾಸವನ್ನು ಆಪ್ತರ ಬಳಿ ವ್ಯಕ್ತಪಡಿಸಿದ್ದರು. ಮೃತರು ಹೆಂಡತಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಬುಧವಾರದಂದು ಬೆಳಿಗ್ಗೆ ಮೃತ ನಿವಾಸಿಯ ಮನೆಗೆ ಶವವನ್ನು ಭಟ್ಕಳಕ್ಕೆ ಕರೆ ತಂದಿದ್ದು, ಮನೆಮುಂದೆ ಜನಸಾಗರವೇ ಹರಿದುಬಂದಿರುವ ಚಿತ್ರಣ ಕಂಡು ಬಂತು. ಮಂಗಳವಾರದಂದು ವಾಸು ನಾಯ್ಕರ ಮೃತ ಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ತಾಲೂಕಿನಾದ್ಯಂತ ನಿರವ ಮೌನ ಆವರಿಸಿತ್ತು. ತಾಲೂಕಿನಾದ್ಯಂತ ಒಳ್ಳೆಯ ಹೆಸರು ಪಡೆದಿರುವ ಮೃತ ವಾಸು ಸಮಾಜದ ಉನ್ನತ ಕ್ಷೇತ್ರದ ಜನರ ಜೊತೆ ಒಡನಾಟ ಹೊಂದಿದವರಾಗಿದ್ದರು. ಮೃತ ವಾಸು ಅವರ ಮರಣ ಕುಟುಂಬಕ್ಕೆ ಹಾಗೂ ಅವರ ಆಪ್ತ ವಲಯಕ್ಕೆ ತೀರಾ ನಷ್ಟವಾಗಿದ್ದು ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿರುವುದು ದುಃಖದಾಯಕ. ಮೃತ ವಾಸು ನಾಯ್ಕರ ಅಂತ್ಯಕ್ರಿಯೆಯ ಮುನ್ನ ಇಂಟರ್ ನ್ಯಾಶನಲ್ ಯಿನ್ ಯಾಂಗ್ ಶಾಟಕನ್ ಕರಾಟೆ ಸ್ಕೂಲ್ನಿಂದ ಮೃತ ವಾಸು ನಾಯ್ಕರ ದೇಹದ ಮೇಲೆ ಕರಾಟೆ ವಸ್ತ್ರ, ಹಾಗೂ ಬೇಲ್ಟ್ ಇಟ್ಟು 2 ನಿಮಿಷ ಮೌನಾಚರಣೆಯ ಹಾಲಿ ಹಾಗೂ ಹಳೆಯ ಕರಾಟೆ ವಿದ್ಯಾರ್ಥಿಗಳಿಂದ ಅಂತಿಮ ಗೌರವವನ್ನು ಸಲ್ಲಿಸಲಾಯಿತು. ಪ್ರಾಮಾಣಿಕ ಹಾಗೂ ಕಷ್ಟಜೀವಿಯಾಗಿದ ವಾಸು ನಾಯ್ಕ ಇವರು ಅದೆಷ್ಟೋ ಕರಾಟೆ ಶಿಬಿರವನ್ನು ತಮ್ಮ ಸ್ವಂತ ಖರ್ಚಿನಿಂದ ನಡೆಸಿಕೊಂಡು ಸಾವಿರಾರು ವಿದ್ಯಾರ್ಥಿಗಳಿಗೆ ಕರಾಟೆ ಕಲೆಯನ್ನು ನೀಡಿದ್ದಾರೆ. ಮೃತ ವಾಸು ಕುಟುಂಬಕ್ಕೆ ಹಲವು ಗಣ್ಯರು ನಿಧನಕ್ಕೆ ತೀವೃ ಸಂತಾಪ ವ್ಯಕ್ತಪಡಿಸಿದ್ದಾರೆ.