ಭಟ್ಕಳ: ೨೦ ಲಕ್ಷ ರೂ ಹಣ ಕೊಡದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ ಇಬ್ಬರ ಬಂಧನ
ಭಟ್ಕಳ: ಕಳೆ ಒಂದು ತಿಂಗಳಿಂದ ೨೦ ಲಕ್ಷ ರೂ. ಕೊಡುವುವಂತೆ ಒತ್ತಡ ಹಾಕುತ್ತಿದ್ದು ಹಣ ಕೊಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ ಇಬ್ಬರನ್ನು ಭಟ್ಕಳ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಕೊಲೆ ಬೆದರಿಕೆ ಹಾಗೂ ಹಣದ ಬೇಡಿಕೆ ಇಟ್ಟು ಈಗ ಪೊಲೀಸರ ಅತಿಥಿಯಾಗಿರುವ ಆರೋಪಿಗಳನ್ನು ಇಲ್ಲಿನ ಮೋಸಾ ನಗರದ ಅಮ್ಜದ್ ಲಂಗ್ಡಾ ಹಾಗೂ ಸಲೀಮ್ ಕಾಲಿಯಾ ಎಂದು ಗುರುತಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ತಲೆಮರೆಸಿಕೊಂಡಿದ್ದು ಅವರನ್ನು ಸಾಜಿದ್ ಗೋಬ್ರೋ, ಇಮ್ರಾನ್ ಜುಷದಿ, ಅಮ್ಮಾರ್ ಅಬುಮುಹಮ್ಮದ್, ಫವ್ವಾಝ್ ಶಾಹುಲ್ಹಮೀದ್ ಎಂದು ತಿಳಿದುಬಂದಿದ್ದ ಅವರನ್ನು ಹಿಡಿಯಲು ಪೊಲೀಸರು ಬಲೆ ಬೀಸಿದ್ದಾರೆ.
ಘಟನೆ ವಿವರ: ಇಲ್ಲಿನ ಫಾರೂಖಿ ಮೊಹಲ್ಲಾದ ನಿವಾಸಿ ಸೈಯ್ಯದ್ ಮೋಹಸಿನ್ ಸೈಯ್ಯದ್ ಜಲಾಲುದ್ದೀನ್ ಎನ್ನುವವರು ಸೌದಿ ಅರೇಬಿಯಾದ ಜಿದ್ದಾ ದಲ್ಲಿ ಉದ್ಯೋಗಿಯಾಗಿದ್ದು ಉತ್ತಮ ಸ್ಥಿತಿವಂತರಾಗಿದ್ದಾರೆ. ಜೂಲೈ ೭ ರಂದು ಮದ್ಯಾಹ್ನ ೨.೩೦ಕ್ಕೆ ಬಿಳಿ ಸ್ವಿಫ್ಟ್ ಕಾರಿನಲ್ಲಿ ಬಂದ ಆರು ಜನರ ತಂಡ ಮನೆಯಲ್ಲಿ ನನ್ನ ಮಡದಿ ಮಕ್ಕಳ ಮುಂದೆಯೆ ೨೦ಲಕ್ಷ ನೀಡಿ ಇಲ್ಲವೇ ನಿನ್ನನ್ನು ಮುಗಿಸುತ್ತೇವೆ ಎಂದು ಧಮಕಿ ಹಾಕಿ ಹೋಗಿದ್ದು ನಂತರ ಜುಲೈ ೯ರಂದು ಮತ್ತೇ ಇದೇ ಆರು ಮಂದಿ ಬಂದು ನನಗೆ ೨೦ಲಕ್ಷ ರೂ ಕೊಡುವಂತೆ ಒತ್ತಡ ಹಾಕಿ ಹಲ್ಲೆ ಮಾಡಲು ಮುಂದಾಗಿದ್ದಾರೆ ಎಂದು ಮೊಹಸಿನ್ ನಗರಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಪ್ರಕರಣ ದಾಖಲಿಸಲು ಪೊಲೀಸರ ಹಿಂದೇಟು: ಕೊಲೆ ಬೆದರಿಕೆ ಹಾಗೂ ಹಣದ ಬೇಡಿಕೆ ಮಾಡುತ್ತಿರುವ ಆರು ಮಂದಿಯ ವಿರುದ್ಧ ಮೊಹಸಿನ್ ಎಂಬುವವರು ಪ್ರಕರಣ ದಾಖಲಿಸುವಂತೆ ನಗರ ಪೊಲೀಸ್ ಠಾಣೆಗೆ ಹೋದಾಗ ಅಲ್ಲಿನ ಪಿ.ಎಸ್.ಐ ಪ್ರಕರಣ ದಾಖಲಿಸಿಕೊಳ್ಳು ನಿರಾಕರಿಸಿದ್ದಾರೆ ಎಂದು ಮೊಹಸಿನ್ ಆರೋಪಿಸಿದ್ದಾರೆ. ತಮ್ಮ ದೂರನ್ನು ದಾಖಲಿಸಿಕೊಳ್ಳಲು ನಗರಠಾಣಾ ಅಧಿಕಾರಿಗಳು ನಿರಾಕರಿಸಿದಾಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯವರಿಗೆ ನೇರವಾಗಿ ದೂರನ್ನು ನೀಡಲು ಮುಂದಾಗಿದ್ದು ಎಸ್.ಪಿ ಯವರ ಆದೇಶದ ಮೇರೆಗೆ ಭಟ್ಕಳ ಎ.ಎಸ್.ಪಿ ದೂರನ್ನು ದಾಖಲಿಸಿಕೊಂಡು ಕ್ರಮ ಜರಗಿಸಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.