ಹುಬ್ಬಳ್ಳಿ, ಆ ೨೯: ಪಾಕಿಸ್ತಾನದ ಪ್ರಧಾನಿಯವರನ್ನು ಪ್ರಧಾನಿ ಮೋದಿ ಭೇಟಿಯಾದರೆ ತಪ್ಪಿಲ್ಲ, ಆದರೆ ನಟಿ ರಮ್ಯಾ ಪಾಕಿಸ್ತಾನದ ಜನರ ಆತಿಥ್ಯವನ್ನು ಸ್ವೀಕರಿಸಿ ಜನರು ಒಳ್ಳೆಯವರು ಎಂದರೆ ತಪ್ಪೇ ಎಂದು ಕೇಳಿದವರು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು.
ಕೊಪ್ಪಳದಲ್ಲಿ ಗಣಿಗೇರಾಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅವರು ಈ ವಿಷಯ ತಿಳಿಸಿದರು. ಪಾಕಿಸ್ತಾನದಲ್ಲಿ ಸಾರ್ಕ್ ಸಮ್ಮೇಳನದಲ್ಲಿ ತಾವು ಅತಿಥಿಗಳಾಗಿದ್ದ ಸಮಯದಲ್ಲಿ ತಮಗೆ ದೊರಕಿದ ಸತ್ಕಾರ ಮತ್ತು ಆತಿಥ್ಯದ ಬಗ್ಗೆ ರಮ್ಯಾ ಹೇಳಿರುವುದರಲ್ಲಿ ಏನೂ ತಪ್ಪಿಲ್ಲ. ಆದರೆ ಈ ಚಿಕ್ಕ ವಿಷಯವನ್ನೇ ಆರೆಸ್ಸೆಸ್ ಮತ್ತು ಬಿಜಿಪೆಯವರು ಮಹಾ ಅಪರಾಧವೆಂಬಂತೆ ರಮ್ಯಾ ವಿರುದ್ಧ ಎಬಿವಿಪಿಯನ್ನು ಎತ್ತಿ ಕಟ್ಟುತ್ತಿವೆ ಎಂದು ಗಂಭೀರವಾದ ಆರೋಪ ಹೊರಿಸಿದರು.
ಹಿಂದೆ ಎಲ್ ಕೆ ಅಡ್ವಾಣಿಯವರು ಸಹಾ ಜಿನ್ನಾರವರನ್ನು ಸೆಕ್ಯುಲರ್ ಎಂದು ಕರೆದಿದ್ದಾಗ ಚಕಾರ ಎತ್ತದಿದ್ದ ಬಿಜೆಪಿ ಅಥವಾ ಸಂಘಪರಿವಾರ ಈಗ ರಮ್ಯಾ ನೀಡಿರುವ ತನ್ನ ಅಭಿಪ್ರಾಯವನ್ನು ರಾಷ್ಟ್ರದ್ರೋಹವೆಂಬಂತೆ ಬಿಂಬಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.