ಬಾಗಲಕೋಟೆ: ಯೋಗ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಯೋಗ ಕಾರ್ಯಕ್ರಮದಲ್ಲಿ ಯೋಗ ಮಾಡುತ್ತಿದ್ದ ವೇಳೆ ಹೃದಯಾಘಾತವಾಗಿ ಶಿಕ್ಷಕರೊಬ್ಬರು ಮೃತಪಟ್ಟ ಘಟನೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ತೇರದಾಳದಲ್ಲಿ ಸಂಭವಿಸಿದೆ.
ಮೃತ ಶಿಕ್ಷಕರನ್ನು ವಿಶ್ವನಾಥ್ ಬಿರಾದಾರ(50) ಎಂದು ಗುರುತಿಸಲಾಗಿದೆ. ಶಿಕ್ಷಕ ವಿಶ್ವನಾಥ್ ಅವರು ತೇರದಾಳ ಪಟ್ಟಣದ ಜೆ.ವಿ.ಮಂಡಲ ಸಂಸ್ಥೆಯ ಗುರುಕುಲ ಕ್ಯಾಂಪಸ್ನಲ್ಲಿ ಹಮ್ಮಿಕೊಂಡಿದ್ದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಎಂದು ಹೇಳಲಾಗಿದೆ.
ಯೋಗಾಸನ ಮಾಡುತ್ತಿದ್ದ ವೇಳೆಯೇ ವಿಶ್ವನಾಥ್ ಬಿರಾದಾರ ಅವರಿಗೆ ಹೃದಯಾಘಾತವಾಗಿದ್ದು, ಅಸ್ವಸ್ಥರಾಗಿದ್ದಾರೆ. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಶಿಕ್ಷಕ ವಿಶ್ವನಾಥ್ ಬಿರಾದಾರ್ ಅವರು ಎಸ್.ಜೆ.ಹೆಣ್ಣು ಮಕ್ಕಳ ಪ್ರೌಢಶಾಲೆಯಲ್ಲಿ ಗಣಿತ ಶಿಕ್ಷಕರಾಗಿದ್ದು, ಮೊದಲಿಂದಲೂ ಅವರು ಯೋಗ ಅಭ್ಯಾಸ ಮಾಡುತ್ತಿದ್ದರು. ಈ ಸಂಬಂಧ ತೇರದಾಳ ಪಟ್ಟಣ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.