ಕಾರವಾರ: ಬ್ರಹ್ಮಶ್ರೀ ನಾರಾಯಣ ಗುರು ಧರ್ಮಪರಿಪಾಲನಾ ಸಂಘ (ಬಿಎಸ್ಎನ್ಡಿಪಿ) ಕೊಡಮಾಡುವ ರಾಜ್ಯ ಮಟ್ಟದ ‘ಪರಿವರ್ತನಾ ಶ್ರೀ’ ಪ್ರಶಸ್ತಿಗೆ ಮಾದರಿ ಯುವ ಕೃಷಿಕ ವೀರೇಶ್ ನಾಯ್ಕ ಭಾಜನರಾಗಿದ್ದಾರೆ.
ರಾಜ್ಯದಲ್ಲಿ 8 ಮಂದಿಗೆ ಈ ಪ್ರಶಸ್ತಿ ದೊರೆತಿದ್ದು, ಅದರಲ್ಲಿ ಧಾರವಾಡ ವ್ಯಾಪ್ತಿಯಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಾರಣಕ್ಕೆ ವೀರೇಶ್ ಅವರನ್ನು ಆಯ್ಕೆಗೊಳಿಸಲಾಗಿತ್ತು. ಕೋವಿಡ್ ಸಾಂಕ್ರಾಮಿಕ ರೋಗದ ಕಾರಣ ಸಾಧಕರಿಗೆ ಆಯಾ ಜಿಲ್ಲೆಯಲ್ಲಿಯೇ ಸರಳ ರೀತಿಯಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅದರಂತೆ ಇತ್ತೀಚೆಗೆ ಹುಬ್ಬಳ್ಳಿಯ ವಿದ್ಯಾನಗರ ಶಿರೂರು ಪಾರ್ಕ್ನ ಅಯ್ಯಪ್ಪ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬಿಎಸ್ಎನ್ಡಿಪಿಯ ರಾಜ್ಯಾಧ್ಯಕ್ಷ ಸೈದಪ್ಪ ಗುತ್ತೇದಾರ, ಧಾರವಾಡ ಡಿವೈಎಸ್ಪಿ ರವಿ ನಾಯ್ಕ, ಹಾವೇರಿ ಡಿವೈಎಸ್ಪಿ ವಿನೋದ್ ಮುಕ್ತೆದಾರ್, ಟಿ.ಡಿ.ನಾಯ್ಕ, ಚಂದ್ರಶೇಖರ್ ಡವಲಗಿ, ಆನಂದ ಪೂಜಾರಿ, ಹುಬ್ಬಳ್ಳಿ- ಧಾರವಾಡ ನಾಮಧಾರಿ ಬಿಲ್ಲವ ಈಡಿಗ ಸಮಾಜದ ಮುಖಂಡರಾದ ಡಿ.ಎನ್.ನಾಯ್ಕ, ವಿವೇಕ ಪೂಜಾರಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ವೀರೇಶ ನಾಯ್ಕ ಅವರು ಅಂಕೋಲಾ ಮೂಲದ ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಮಹಾದೇವ ನಾಯ್ಕ ಮತ್ತು ಶ್ಯಾಮಲಾ ನಾಯ್ಕ ದಂಪತಿಯ ಪುತ್ರರಾಗಿದ್ದು, ಕೃಷಿಯಲ್ಲಿ ಇಸ್ರೇಲ್ ಮಾದರಿ ಅನುಸರಿಸಿ ಹಳಿಯಾಳ, ಜೊಯಿಡಾ ಹಾಗೂ ಧಾರವಾಡ ಭಾಗಗಳಲ್ಲಿ ಜಮೀನು ಹೊಂದಿ ಬೇಸಾಯ ಮಾಡುತ್ತಿದ್ದಾರೆ.
ವೀರೇಶ್ ಅವರ ಸಾಧನೆಗೆ ಈ ಪ್ರಶಸ್ತಿ ದೊರೆತಿರುವುದಕ್ಕೆ ಹುಬ್ಬಳ್ಳಿ- ಧಾರವಾಡ, ಉತ್ತರ ಕನ್ನಡ ಜಿಲ್ಲೆಗಳ ನಾಮಧಾರಿ, ಬಿಲ್ಲವ, ಈಡಿಗ ಸಮಾಜದ ಮುಖಂಡರು ಅಭಿನಂದನೆ ಸಲ್ಲಿಸಿದ್ದಾರೆ.