ಯಲ್ಲಾಪುರ: ಉತ್ತರಕನ್ನಡ ಜಿಲ್ಲಾದ್ಯಂತ ಬೀದಿನಾಯಿ ಹಾಗೂ ಹುಚ್ಚುನಾಯಿಗಳ ಕಾಟ ದಿನೆ ದಿನೆ ಹೆಚ್ಚಾಗುತ್ತಿದ್ದು ಜಿಲ್ಲಾಡಳಿತ ಇದಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಇತ್ತಚೆಗೆ ಭಟ್ಕಳದಲ್ಲಿ ಹುಚ್ಚು ನಾಯಿಗಳ ದಾಳಿಯಿಂದ ನಾಲ್ಕೈದು ಮಂದಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಘಟನೆ ಮಾಸುವ ಮುನ್ನ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ೯ ವರ್ಷದ ಬಾಲಕ ಉದಯ ಮತ್ತು ಬಾಲಕಿ ರುಕ್ಸಾನಾ ಎನ್ನುವವರಿಗೆ ಬೀದಿ ನಾಯಿಗಳು ಕಚ್ಚಿ ಗಾಯಗೊಳಿಸಿದ ಘಟನೆ ಶನಿವಾರ ಜರಗಿದೆ.
ಯಲ್ಲಾಪುರದ ಮಾರ್ಕೆಟ್ ನಲ್ಲಿ ಹೋಗುತ್ತಿರಬೇಕಾದರೆ ನಾಯಿಗಳು ದಾಳಿ ನಡೆಸಿವೆ. ಇದನ್ನು ಕಂಡ ವ್ಯಾಪಾರಿಗಳು ಮಕ್ಕಳಿಬ್ಬರನ್ನು ನಾಯಿಗಳಿಂದ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ನೀಡಿದ್ದಾರೆ. ನಾಯಿ ಕಡಿತಕ್ಕೆ ಮಕ್ಕಳ ಕೈ ಹಾಗೂ ಕಾಲುಗಳಿಗೆ ಗಂಭೀರವಾದ ಗಾಯಗಳಾಗಿವೆ.