ಹೊಸದಿಲ್ಲಿ: ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕುಸ್ತಿಪಟುಗಳು ಜಂತರ್-ಮಂತರ್ನಲ್ಲಿ ಪ್ರತಿಭಟನೆ ನಡೆಸುವುದಕ್ಕೆ ಅನುಮತಿ ನೀಡುವುದಿಲ್ಲ ಎಂದು ದಿಲ್ಲಿ ಪೊಲೀಸರು ಸೋಮವಾರ ತಿಳಿಸಿದ್ದಾರೆ. ಆದರೆ ದಿಲ್ಲಿಯ ಯಾವುದಾದರೊಂದು ಇತರ ಸ್ಥಳದಲ್ಲಿ ಧರಣಿ ನಡೆಸಲು ಅವಕಾಶ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.
ಧರಣಿ ನಿರತ ಕುಸ್ತಿಪಟುಗಳನ್ನು ಜಂತರ್ -ಮಂತರ್ನಿಂದ ಹೊರದಬ್ಬದ ಒಂದು ದಿನದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.
ಬಾಲಕಿಯರೂ ಸೇರಿದಂತೆ ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಬಂಧನ ಮತ್ತು ಹುದ್ದೆಯಿಂದ ವಜಾಕ್ಕೆ ಒತ್ತಾಯಿಸಿ ಕುಸ್ತಿಪಟುಗಳು ಒಂದು ತಿಂಗಳಿಗೂ ಹೆಚ್ಚು ಸಮಯದಿಂದ ಧರಣಿ ನಡೆಸುತ್ತಿದ್ದಾರೆ.
“ಜಂತರ್-ಮಂತರ್ನ ನಿಗದಿತ ಸ್ಥಳದಲ್ಲಿ ಕುಸ್ತಿಪಟುಗಳ ಧರಣಿ ಸುಗಮವಾಗಿ ನಡೆದುಕೊಂಡು ಬರುತ್ತಿತ್ತು. ರವಿವಾರ ಧರಣಿನಿರತರು ನಮ್ಮ ಮನವಿಗಳನ್ನು ನಿರ್ಲಕ್ಷಿಸಿ ಕಾನೂನು ಉಲ್ಲಂಘಿಸಿದರು. ಹಾಗಾಗಿ, ನಾವು ಅವರನ್ನು ಅಲ್ಲಿಂದ ತೆರವುಗೊಳಿಸಿ ಧರಣಿಯನ್ನು ಕೊನೆಗೊಳಿಸಿದೆವು' ಎಂದು ಹೊಸದಿಲ್ಲಿಯ ಉಪ ಪೊಲೀಸ್ ಕಮಿಶನರ್ ಟ್ವಿಟ್ ಮಾಡಿದ್ದಾರೆ.