ನಿವೃತ್ತಿಯ ನಂತರ ಧೋನಿ ಬಿಜೆಪಿಗೆ?
ಹೊಸದಿಲ್ಲಿ: ಟೀಂ ಇಂಡಿಯಾದ ಮಾಜಿ ಕಪ್ತಾನ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಜೀವನಕ್ಕೆ ನಿವೃತ್ತಿ ಘೋಷಿಸಿದ ನಂತರ ರಾಜಕೀಯ ಪ್ರವೇಶಿಸುವ ಸಾಧ್ಯತೆಯಿದ್ದು, ಅವರು ಬಿಜೆಪಿ ಸೇರಲಿದ್ದಾರೆ ಎಂಬ ಮಾತು ಬಿಜೆಪಿ ವಲಯದಿಂದ ಕೇಳಿಬರುತ್ತಿದೆ.
ಧೋನಿ ಬಿಜೆಪಿ ಸೇರಬಹುದು ಹಾಗೂ ಈ ಬಗ್ಗೆ ಬಹಳ ಸಮಯದಿಂದ ಚರ್ಚೆಗಳು ನಡೆಯುತ್ತಿವೆ ಎಂದು ಬಿಜೆಪಿ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಸಂಜಯ್ ಪಾಸ್ವಾನ್ ಹೇಳಿದ್ದಾರೆ. ಅದೇ ಸಮಯ ರಾಜಕೀಯ ಸೇರುವ ನಿರ್ಧಾರ ಕ್ರಿಕೆಟ್ ಜೀವನದಿಂದ ಅವರು ನಿವೃತ್ತರಾದ ನಂತರ ಮಾತ್ರ ಕೈಗೊಳ್ಳಬಹುದು ಎಂದೂ ಅವರು ತಿಳಿಸಿದ್ದಾರೆ.
ವಿಶ್ವಕಪ್ ಸೆಮಿ ಫೈನಲ್ ನಲ್ಲಿ ಉಂಟಾದ ಸೋಲಿನ ನಂತರ ಧೋನಿ ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಬಹುದೆಂಬ ಬಗ್ಗೆ ಸಾಕಷ್ಟು ಊಹಾಪೋಹಗಳೀವೆ. ಲೋಕಸಭಾ ಚುನಾವಣೆಗಿಂತ ಮುಂಚೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ತಮ್ಮ ‘ಸಂಪರ್ಕ್ ಫಾರ್ ಸಮರ್ಥನ್’ ಕಾರ್ಯಕ್ರಮದನ್ವಯ ಭೇಟಿಯಾಗಿದ್ದ ಸೆಲೆಬ್ರಿಟಿಗಳಲ್ಲಿ ಧೋನಿ ಕೂಡ ಒಬ್ಬರಾಗಿದ್ದರು.
ಧೋನಿ ಅವರ ತವರು ರಾಜ್ಯವಾದ ಜಾರ್ಖಂಡ್ ನಲ್ಲಿ ಈ ವರ್ಷ ಚುನಾವಣೆಗಳು ನಡೆಯಲಿದ್ದು ಧೋನಿ ಈ ಸಂದರ್ಭ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿಯೂ ಬಿಂಬಿಸಲ್ಪಡುವ ಸಾಧ್ಯತೆಯಿದೆ ಎನ್ನಲಾಗಿದೆ.