ಕಾಸರಗೋಡು: ತ್ರಿವಳಿ ತಲಾಖ್ ಕಾನೂನು ಕುರಿತು ಕೇಂದ್ರದ ಬಿಜೆಪಿ ನೇತೃತ್ವದ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, ಇತರ ಧರ್ಮಗಳಲ್ಲಿಯೂ ವಿಚ್ಛೇದನಗಳು ನಡೆಯುತ್ತಿರುವಾಗ ಮುಸ್ಲಿಮ ರಲ್ಲಿಯ ತ್ರಿವಳಿ ತಲಾಖ್ ಪದ್ದತಿಯನ್ನು ಮಾತ್ರ ಅಪರಾಧವಾಗಿಸಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ.
ಸೋಮವಾರ ಕಾಸರಗೋಡಿನಲ್ಲಿ ಆಡಳಿತಾರೂಢ ಸಿಪಿಎಂನ 'ಜನಕೀಯ ಪ್ರತಿರೋಧ ಜಾಥಾ'ಕ್ಕೆ ಚಾಲನೆ ನೀಡಿ ಮಾತನಾಡಿದ ಪಿಣರಾಯಿ, ತ್ರಿವಳಿ ತಲಾಖ್ ಅನ್ನು ಮಾತ್ರ ಅಪರಾಧವನ್ನಾಗಿಸಲಾಗಿದೆ. ಅದು ಮುಸ್ಲಿಮರಿಗಾಗಿ ಮಾತ್ರ ಕ್ರಿಮಿನಲ್ ಅಪರಾಧವಾಗಿರುವುದು ಏಕೆ? ಇತರ ಎಲ್ಲ ವಿಚ್ಛೇದನ ಪ್ರಕರಣಗಳನ್ನು ನ್ಯಾಯಾಲಯದಲ್ಲಿ ಸಿವಿಲ್ ವಿಷಯವನ್ನಾಗಿ ಪರಿಗಣಿಸಲಾಗುತ್ತಿದೆ. ಆದರೆ ಮುಸ್ಲಿಮ್ ದಂಪತಿಯ ನಡುವೆ ವಿಚ್ಛೇದನದ ಪ್ರಕರಣವಾದರೆ ಪತಿಯನ್ನು (ತ್ರಿವಳಿ ತಲಾಖ್ ಉಚ್ಚರಿಸಿದ್ದಕ್ಕಾಗಿ ಜೈಲಿಗೆ ತಳ್ಳಲಾಗುತ್ತದೆ ಎಂದು ಹೇಳಿದರು.
ಕೇಂದ್ರವು ತಂದಿರುವ ಸಿಎಎ ಕಾಯ್ದೆಯನ್ನು ಯಾವುದೇ ಕಾರಣಕ್ಕೂ ಕೇರಳದಲ್ಲಿ ಜಾರಿಗೊಳಿಸುವುದಿಲ್ಲ ಎಂದು ಹೇಳಿದ ಅವರು, 'ಸಿಎಎ ಮೂಲಕ ಪೌರತ್ವವನ್ನು ನಿರ್ಧರಿಸಲು ಕೇಂದ್ರವು ಧರ್ಮವನ್ನು ಬಳಸಿಕೊಂಡಿದೆ. ಕಾಯ್ದೆಯ ಕುರಿತು ನಮ್ಮ ನಿಲುವನ್ನು ನಾವು ಈಗಾಗಲೇ ಸ್ಪಷ್ಟಪಡಿಸಿದ್ದೇವೆ' ಎಂದರು.
ವೈವಾಹಿಕ ವಿಚ್ಛೇದನದ ವಿಷಯಗಳಲ್ಲಿ ಒಂದು ದೇಶವು ಪ್ರತ್ಯೇಕ ದಂಡನಾತ್ಮಕ ಮಾನದಂಡಗಳನ್ನು ಹೊಂದಿರಲು ಸಾಧ್ಯವೇ ಎಂದು ಪಿಣರಾಯಿ ಪ್ರಶ್ನಿಸಿದರು.
'ವಿವಿಧ ಧಾರ್ಮಿಕ ಹಿನ್ನೆಲೆಗಳ ಜನರು ಈ ಸಮಾವೇಶಕ್ಕೆ ಆಗಮಿಸಿದ್ದಾರೆ. ಪ್ರತಿ ವ್ಯಕ್ತಿಗೂ ಭಿನ್ನ ದಂಡನಾ ಕ್ರಮವನ್ನು ನಾವು ಬಳಸಬಹುದೇ? ನಿರ್ದಿಷ್ಟ ಧರ್ಮವನ್ನು ಅನುಸರಿಸುವ ವ್ಯಕ್ತಿಗೆ ಒಂದು ಕಾನೂನು ಮತ್ತು ಇನ್ನೊಂದು ಧರ್ಮವನ್ನು ಅನುಸರಿಸುವ ವ್ಯಕ್ತಿಗೆ ಇನ್ನೊಂದು ಕಾನೂನು? ನಾವು ನಿರ್ದಿಷ್ಟ ಧರ್ಮದಲ್ಲಿ ಜನಿಸಿರುವುದರಿಂದ ನಾವು ನಮ್ಮ ಪೌರತ್ವವನ್ನು ಪಡೆದುಕೊಂಡಿದ್ದೇವೆ ಎಂದು ನಾವು ಹೇಳಬಹುದೇ' ಎಂದೂ ಅವರು ಪ್ರಶ್ನಿಸಿದರು.
ಆರೆಸ್ಸೆಸ್ ಇತ್ತೀಚಿನ ಸಭೆಯೊಂದರಲ್ಲಿ ಭಾಗವಹಿಸಿದ್ದಕ್ಕಾಗಿ ಜಮಾಅತೆ ಇಸ್ಲಾಮಿ ವಿರುದ್ಧ ತೀಕ್ಷ್ಯ ದಾಳಿಯನ್ನು ನಡೆಸಿದ ಅವರು, 'ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ವಿಷಯಗಳಲ್ಲಿ ಜಮಾಅತ ನಿಲುವು ಇತರ ಮುಸ್ಲಿಮ್ ಗುಂಪುಗಳ ನಿಲುವನ್ನು ಪ್ರತಿಬಿಂಬಿಸುವುದಿಲ್ಲ. ಯಾರಿಗಾಗಿ ಜಮಾಅತ್ ಆರೆಸ್ಸೆಸ್ ನೊಂದಿಗೆ ಮಾತುಕತೆಗಳನ್ನು ನಡೆಸಿತ್ತು? ನಮ್ಮ ದೇಶದಲ್ಲಿ ಹೆಚ್ಚಿನವರು ಜಾತ್ಯತೀತ ಮನೋಭಾವವನ್ನು ಹೊಂದಿದ್ದಾರೆ ಮತ್ತು ಆರೆಸ್ಸೆಸ್ನ ಕೋಮುವಾದಿ ಅಜೆಂಡಾವನ್ನು ನೋಡುತ್ತಿದ್ದಾರೆ. ಹೀಗಾಗಿ ಈ ಮಾತುಕತೆಗಳು ಅಲ್ಪಸಂಖ್ಯಾತ ಸಮುದಾಯ ವರಿಗಾಗಿ ನಡೆದಿರಲಿಕ್ಕಿಲ್ಲ ಎಂದರು.