ಕಾರವಾರ: ಸೀಬರ್ಡ್ ಯೋಜನೆಗೆ ಕದ್ರಾ ಜಲಾಶಯದಿಂದ ಕುಡಿಯುವ ನೀರಿನ ಸರಬರಾಜಿಗೆ ಸಮಗ್ರ ಯೋಜನಾ ವರದಿ ಸಲ್ಲಿಸುವಂತೆ ಕರ್ನಾಟಕ ನಗರ ನೀರು ಸರಬರಾಜು ಇಲಾಖೆಗೆ ಜಿಲ್ಲಾಧಿಕಾರಿ ಡಾ.ಹರೀಶ್ಕುಮಾರ್ ಕೆ. ಸೂಚಿಸಿದ್ದಾರೆ.
ಸೀಬರ್ಡ್ ಯೋಜನೆ ಸಂಬಂಧಿಸಿದಂತೆ ಇತ್ತೀಚಿಗಷ್ಟೆ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚಿಸಲಾದ ವಿಷಯಗಳ ತುರ್ತು ಅನುಷ್ಠಾನ ಸಂಬಂಧಿಸಿದಂತೆ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಬುಧವಾರ ಅವರು ಉನ್ನತ ಅಧಿಕಾರಿಗಳ ಸಭೆ ನಡೆಸಿದರು.
ಸೀಬರ್ಡ್ ಯೋಜನೆ ಸಂಬಂಧಿಸಿದಂತೆ ಪ್ರಸ್ತಾವಿತ ಗಂಗಾವಳಿ ನದಿಯಿಂದ ನೀರು ಕೊಡುವ ಯೋಜನೆ ಪೈಪ್ಲೈನ್ ಅಳವಡಿಸುವ ಕಾಮಗಾರಿ ಈಗಾಗಲೇ ವಿಳಂಬವಾಗಿದೆ. ಒಂದೊಮ್ಮೆ ಗಂಗಾವಳಿ ನದಿ ಬತ್ತಿ ನೀರಿನ ಸಮಸ್ಯೆ ಉದ್ಭವಿಸುವ ಸಾಧ್ಯತೆಗಳೂ ಇರುವುದರಿಂದ ಹಾಗೂ ಪ್ರಸ್ತಾವಿತ ಗಂಗಾವಳಿ ನದಿ ಯೋಜನೆಗೆ 42 ಕಿಲೋ ಮೀಟರ್ ದೂರವಿದ್ದು ಕದ್ರಾ ಜಲಾಶಯದಿಂದ 30 ಕಿಲೋಮೀಟರ್ ದೂರವಿರುವುದರಿಂದ ಕದ್ರಾ ಜಲಾಶಯದಿಂದ ನೀರು ಸರಬರಾಜು ಮಾಡುವುದು ಸೂಕ್ತವಾಗುತ್ತದೆ. ಈ ಹಿನ್ನೆಲೆ ಕದ್ರಾ ಜಲಾಶಯದಿಂದ ಸೀಬರ್ಡ್ ಯೋಜನೆಗೆ ನೀರು ಸರಬರಾಜು ಮಾಡಲು ಅನುಕೂಲವಾಗುವಂತೆ ಸಮೀಕ್ಷೆ ನಡೆಸಿ ಸಮಗ್ರ ಪ್ರಸ್ತಾವನೆಯನ್ನು ಶೀಘ್ರ ಸಲ್ಲಿಸುವಂತೆ ಅವರು ನಗರ ನೀರು ಸರಬರಾಜು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳು ಪ್ರಸ್ತಾಪಿಸಿದ ವಿಷಯವನ್ನು ಸಭೆಯಲ್ಲಿ ಹಾಜರಿದ್ದ ಸೀಬರ್ಡ್ ಅಧಿಕಾರಿಗಳು ಸಮ್ಮತಿಸಿದರು. ಅಲ್ಲದೆ ಗಂಗಾವಳಿಗೆ ನಿರ್ಮಿಸಲು ಉದ್ದೇಶಿಸಿರುವ ವೆಂಟೆಡ್ ಬ್ಯಾರೇಜ್ ಕೂಡ ಶೀಘ್ರ ಪೂರ್ಣಗೊಳಿಸುವ ಸಂಬಂಧ ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಸೀಬರ್ಡ್ ಯೋಜನೆಗೆ ಶಿರವಾಡದ ಕೊಂಕಣ ರೈಲ್ವೆ ಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿಸಿರುವ 220 ಕೆವಿ ವಿದ್ಯುತ್ ಉಪಸ್ಥಾವರ ಘಟಕಕ್ಕೆ ಅನುಮೋದನೆ ಪಡೆಯಲಾಗಿದ್ದು ಶೀಘ್ರ ಅನುಷ್ಠಾನವಾಗಲಿದೆ. ಈ ಬಗ್ಗೆ ಹುಬ್ಬಳಿ ವಿದ್ಯುತ್ ಪ್ರಸರಣ ನಿಗಮದ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು ಎಂದು ಸೂಚಿಸಿದರು.
ಅಂಕೋಲ ತಾಲೂಕು ಅಲಗೇರಿಯಲ್ಲಿ ಸೀಬರ್ಡ್ ವತಿಯಿಂದ ನಿರ್ಮಿಸಲು ಉದ್ದೇಶಿಸಿರುವ ನಾಗರಿಕ ವಿಮಾನ ನಿಲ್ದಾಣ ಸಂಬಂಧಿಸಿದಂತೆ ಬರುವ ವಾರ ಮೂಲಸೌಲಭ್ಯಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿಯವರು ಜಿಲ್ಲೆಗೆ ಆಗಮಿಸಲಿದ್ದು ಅವರು ಈ ಸಂಬಂಧ ಸಭೆ ನಡೆಸಲಿದ್ದಾರೆ ಎಂದರು.
ಅಪರ ಜಿಲ್ಲಾಧಿಕಾರಿ ನಾಗರಾಜ್ ಸಿಂಗ್ರೇರ್, ಸೀಬರ್ಡ್ ಯೋಜನೆ ಅನುಷ್ಠಾನ ಉಪನಿರ್ದೇಶಕ ಕ್ಯಾಪ್ಟನ್ ಕಿರಣರೆಡ್ಡಿ, ಕಾರವಾರ ಉಪ ಅರಣ್ಯ ಸಂರಕ್ಷಣಾಧಿಕಾರಿ ವಸಂತರೆಡ್ಡಿ, ಕಾರವಾರ ಉಪ ವಿಭಾಗಾಧಿಕಾರಿ ಅಭಿಜಿನ್, ತಹಸೀಲ್ದಾರರಾದ ಆರ್.ವಿ.ಕಟ್ಟಿ, ಅಶೋಕ್ ಗುರಾಣಿ, ಕರ್ನಾಟಕ ನಗರ ನೀರು ಸರಬರಾಜು ಇಲಾಖೆ ಸಹಾಯಕ ಕಾರ್ಯಪಾಲ ಎಂಜಿನಿಯರ್ ಪಿ.ಸುರೇಶ್, ಬಂದರು ಅಧಿಕಾರಿ ಕ್ಯಾಪ್ಟನ್ ಗಾಂವ್ಕರ್, ಐಆರ್ಬಿ ಮುಖ್ಯ ಪ್ರಧಾನ ವ್ಯವಸ್ಥಾಪಕ ಮೋಹನ್ ದಾಸ್, ಕೊಂಕಣ್ ರೈಲ್ವೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅನಂತಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.