ಧಾರವಾಡ : ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆಯಲ್ಲಿ 10 ದಿನಗಳ ಕಾಲ ಕೊರೊನಾ ಮತ್ತು ಮತದಾನದ ಜನ ಜಾಗೃತಿಗಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿದ ಜನಪದ ಸಂಗೀತ ಮತ್ತು ಬೀದಿ ನಾಟಕಗಳು ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಜನಮನಸೆಳೆಯುತ್ತಿವೆ.
ಹರ್ಲಾಪುರದ ಸಿವೈಸಿಡಿ ಕಲಾ ತಂಡದಿಂದ ಬೀದಿ ನಾಟಕ ಮತ್ತು ಸುಲ್ತಾನಪುರದ ಜನಪದ ಫೌಂಡೇಶನ್ ಕಲಾವಿದರ ಜನಪದ ಗೀತೆಗಳು ತೇಗೂರು, ಕಲ್ಲೂರ, ಹೊನ್ನಾಪೂರ ಮತ್ತು ಗರಗ ಗ್ರಾಮಗಳಲ್ಲಿ ಕಳೆದ ಎರಡು ದಿನಗಳ ಅವಧಿಯಲ್ಲಿ ಜರುಗಿದವು.
ಖೈದಿಗಳಿಗೆ, ಮತೀಹಿನರಿಗೆ, ಹೊರತುಪಡಿಸಿ ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಮತ ಚಲಾಯಿಸುವ ಹಕ್ಕಿದೆ. ಎಲ್ಲರೂ ತಪ್ಪದೆ ಮುಖಕ್ಕೆ ಮಾಸ್ಕ್ ಧರಿಸಿಕೊಂಡು, ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಮತ ಚಲಾಯಿಸಬೇಕು. ಮತದಾರರ ಪಟ್ಟಿಯಲ್ಲಿ ಹೆಸರು ಇರುವವರು ಗುರುತಿನ ಚೀಟಿ ಹೊಂದಿರದಿದ್ದರೂ ಕೂಡ ರೇಷನ್ ಕಾರ್ಡ, ಡ್ರೈವಿಂಗ್ ಲೈಸೆನ್ಸ್, ಹಾಗೂ ಇತರೆ ಗುರುತಿನ ದಾಖಲೆಗಳನ್ನು ತೋರಿಸಿ ಮತ ಚಲಾಯಿಸಲು ಅವಕಾಶವಿದೆ ಎಂದು ಸಾರ್ವಜನಿಕರಿಗೆ ಬೀದಿನಾಟಕ, ಜನಪದ ಗೀತೆಗಳ ಮೂಲಕ ಅರಿವು ಮೂಡಿಸಲಾಯಿತು.
ಕೊರೊನಾ ತಪಾಸಣೆಯನ್ನು ಧೈರ್ಯವಾಗಿ ಮಾಡಿಸಿಕೊಳ್ಳಬೇಕು, ಕಡ್ಡಾಯವಾಗಿ ಮಾಸ್ಕ್ ಧರಿಸಿ ಮತದಾನ ಮಾಡಬೇಕು ಎಂಬುವುದನ್ನು ಈ ನಾಟಕದ ಮೂಲಕ ತಿಳಿಸಲಾಯಿತು ಎಂದು ಹೊನ್ನಾಪುರ ಗ್ರಾಮದ ಹಿರಿಯರಾದ ರಮೇಶ ಹೂಗಾರ ಮತ್ತು ಪರಪ್ಪನವರು ಅಭಿಪ್ರಾಯ ವ್ಯಕ್ತಪಡಿಸಿದರು.