ಬ್ರಹ್ಮಾವರ : ನನ್ನ ಗುರುಗಳಾದ ವಡ್ಡರ್ಸೆ ರಘುರಾಮ ಶೆಟ್ಟರ ಹೆಸರಿನಲ್ಲಿ ಪ್ರಶಸ್ತಿ ನನಗೆ ಲಭಿಸಿರುವುದಕ್ಕೆ ಅತ್ಯಂತ ಖುಷಿ ತಂದಿದೆ. ನಾನು ಒಂದು ಪತ್ರಿಕೆಯನ್ನು ಹೇಗೆ ನಡೆಸಬೇಕು ಎನ್ನುವುದನ್ನು ಜೀವನದಿಂದ ಕಲಿತುಕೊಂಡಿದ್ದೇನೆ ಎಂದು ಕರಾವಳಿ ಮುಂಜಾವು ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಗಂಗಾಧರ ಹಿರೇಗುತ್ತಿ ಹೇಳಿದರು.
ಭಾನುವಾರ ಬ್ರಹ್ಮಾವರದ ಬಂಟರ ಭವನದಲ್ಲಿ ಬ್ರಹ್ಮಾವರ ತಾಲ್ಲೂಕು ಪತ್ರಕರ್ತರ ಸಂಘದ ಆಶ್ರಯದಲ್ಲಿ ನಡೆದ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ ಮಾತನಾಡಿ, ಮಾಧ್ಯಮಗಳು ಅರಳಿಸುವ ಕೆಲಸ ಮಾಡಬೇಕೇ ಹೊರತು ಕೆರಳಿಸುವ ಕೆಲಸ ಮಾಡಬಾರದು ಎಂದರು.
.
ಪ್ರೀತಿ, ವಿಶ್ವಾಸ, ಏಕತೆ ಪತ್ರಿಕೋದ್ಯಮದಲ್ಲಿ ಅಗತ್ಯ ಎಂದ ಅವರು ಜನಜಾಗೃತಿ ಬಲಗೊಳ್ಳಬೇಕಾದರೆ ಪತ್ರಿಕೆ ಅತೀ ಅಗತ್ಯ ಎಂದು ತಿಳಿಸಿದರು.
ವಕೀಲ ಹಾಗೂ ಸಾಮಾಜಿಕ ಹೋರಾಗಾರ ಸುಧೀರ್ ಕುಮಾರ್ ಮುರೊಳ್ಳಿ ದಿಕ್ಸೂಚಿ ಭಾಷಣ ಮಾಡಿ, ಮನುಷ್ಯನನ್ನು ಪರಿವರ್ತನೆ ಮಾಡುವ ಕೆಲಸ ಪತ್ರಿಕೆಗಳಿಂದಾಗಬೇಕು. ಸಾಹಿತ್ಯದ ನಂಟು ಸ್ವಲ್ಪಮಟ್ಟಿಗಾದರೂ ಪತ್ರಕರ್ತರಿಗೆ ಇರಬೇಕು. ಖಾಸಗಿ ಬದುಕಿನೊಂದಿಗೆ ಸಮಾಜಸೇವೆಯನ್ನು ಮಾಡಿದಲ್ಲಿ ಯಶಸ್ಸು ಖಂಡಿತ ಸಿಗುತ್ತದೆ ಎಂದರು.
ಇದೇ ಸಂದರ್ಭ ವಡ್ಡರ್ಸೆ ರಘುರಾಮ ಶೆಟ್ಟಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.
.
ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಾವರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಉದಯ ಪೂಜಾರಿ, ದ.ಕ ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ನ ಅಧ್ಯಕ್ಷ ಯಶಪಾಲ್ ಸುವರ್ಣ ಉಪಸ್ಥಿತರಿದ್ದರು.
ಸಂಘದ ಕಾರ್ಯದರ್ಶಿ ರಾಜೇಶ್ ಗಾಣಿಗ ಅಚ್ಲಾಡಿ ಸ್ವಾಗತಿಸಿದರು. ಸಂಚಾಲಕ ವಸಂತ ಗಿಳಿಯಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಲ್ತಾರು ನಾಗರಾಜ್ ವಂದಿಸಿದರು. ಚಂದ್ರಶೇಖರ್ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು. ನಂತರ ಕಲಾಚಿಗುರು ತಂಡದ ಹಳಿ ಹಂಬ್ಲ್ ಖ್ಯಾತಿಯ ತಂಡದವರಿಂದ ಹ್ವಾಯ್ ಬನಿ ನೆಗ್ಯಾಡ್ವ ಮತ್ತು ಗಾನ ರಸಧಾರೆ ಕಾರ್ಯಕ್ರಮ ನಡೆಯಿತು.