ಧಾರವಾಡ:ಜಿಲ್ಲೆಯಾದ್ಯಂತ ನಡೆಯುತ್ತಿರುವ ಮತದಾರರ ಜಾಗೃತಿ ಚಟುವಟಿಕೆಗಳು ದಿನೇ ದಿನೇ ರಂಗು ಪಡೆಯುತ್ತಿವೆ. ವಿಶೇಷವಾಗಿ ಹೊಸದಾಗಿ ಮತದಾನಕ್ಕೆ ಅರ್ಹತೆ ಪಡೆದುಕೊಂಡಿರುವ ಯುವಜನರನ್ನು ಮತದಾನಕ್ಕೆ ಪ್ರೊತ್ಸಾಹಿಸುವ ಗುರಿಯೊಂದಿಗೆ ಜಿಲ್ಲಾ ಸ್ವಿಪ್ ಸಮಿತಿ ನಡೆಸುತ್ತಿರುವ ವಿಶಿಷ್ಟ ಚಟುವಟಿಕೆಗಳು ಜಿಲ್ಲೆಯಾದ್ಯಂತ ಚುನಾವಣಾ ಹಬ್ಬದ ವಾತಾವರಣ ನಿರ್ಮಿಸುತ್ತಿವೆ. ಜಿಲ್ಲೆಯ ಪದವಿ ಕಾಲೇಜುಗಳ ವಿದ್ಯಾರ್ಥಿನಿಯರಲ್ಲಿ ಮತದಾನದ ಜಾಗೃತಿ ಮೂಡಿಸಲು ಮೆಹಂದಿ ಕಾರ್ಯಾಗಾರ ಮತ್ತು ಸ್ಪರ್ಧೆಗಳನ್ನು ಏರ್ಪಡಿಸುವ ಕಾರ್ಯಕ್ಕೆ ಇಂದು ಇಲ್ಲಿನ ಕೆ.ಎಸ್. ಜಿಗಳೂರ ಕಲಾ ಹಾಗೂ ಎಸ್.ಎಂ. ಶೇಷಗಿರಿ ವಾಣಿಜ್ಯ ಮಹಿಳಾ ವಿದ್ಯಾಲಯದಲ್ಲಿ ಚಾಲನೆ ದೊರೆಯಿತು.
ಜಿಲ್ಲಾ ಸ್ವಿಪ್ ಸಮಿತಿ ಅಧ್ಯಕ್ಷರಾಗಿರುವ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಬಿ.ಸಿ. ಸತೀಶ, ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕಿ ಡಾ. ನೀಲಾಂಬಿಕಾ ಪಟ್ಟಣಶೆಟ್ಟಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಜಾನನ ಮನ್ನಿಕೇರಿ ಸೇರಿದಂತೆ ಮತ್ತಿತರ ಗಣ್ಯರ ಅಂಗೈಯಲ್ಲಿ ವಿದ್ಯಾರ್ಥಿನಿಯರು ಮತದಾನ ಜಾಗೃತಿ ಸಂದೇಶ ಸಾರುವ ಮೆಹಂದಿ ಹಾಕುವುದು ಹಾಗೂ ಸ್ವಿಪ್ ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು.
ಶಿಕ್ಷಕ, ಕಲಾವಿದ ಮಹದೇವ ಸತ್ತಿಗೇರಿ ಅವರು ನಗೆಹನಿಗಳ ಮೂಲಕ ನೆರೆದ ವಿದ್ಯಾರ್ಥಿಗಳನ್ನು ನಗೆಗಡಲಲ್ಲಿ ತೇಲಿಸುತ್ತಲೇ ಮತದಾನದ ಮಹತ್ವ ಸಂದೇಶ ಸಾರಿದರು. ಎಫ್.ಬಿ. ಕಣವಿ ಮತ್ತು ತಂಡದವರ ಸುಶ್ರಾವ್ಯವಾದ ಚುನಾವಣಾ ಗೀತೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯ ಮೌಲ್ಯಗಳನ್ನು ಯುವಜನರಿಗೆ ಪರಿಣಾಮಕಾರಿಯಾಗಿ ಮನವರಿಕೆ ಮಾಡಿಕೊಟ್ಟವು.
ಜಿಲ್ಲಾ ಸ್ವಿಪ್ ಸಮಿತಿಯ ಅಧ್ಯಕರೂ ಆಗಿರುವ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸಿ. ಸತೀಶ ಮಾತನಾಡಿ, ಮೆಹಂದಿ ಮೂಲಕ ವಿಭಿನ್ನವಾಗಿ ಮತದಾರರ ಸಂದೇಶ ಸಾರುವ ಆಯ್ದ ಅತ್ಯುತ್ತಮ ಮೆಹಂದಿಗಳಿಗೆ ಬಹುಮಾನ ನೀಡಲಾಗುವುದು. ಇದೇ ಮೊದ¯ ಬಾರಿಗೆ ಮತ ಚಲಾಯಿಸಲು ಅರ್ಹತೆ ಪಡೆದಿರುವ ಯುವಜನರು ತಪ್ಪದೇ ಮತದಾನ ಮಾಡಬೇಕು. ಮತ ಚಲಾಯಿಸಿದ ನಂತರ ತಮ್ಮ ಬೆರಳಿಗೆ ಹಾಕಿಸಿಕೊಂಡ ಶಾಹಿ ಕಾಣುವ ಹಾಗೆ ಮತಗಟ್ಟೆ ಎದುರು ನಿಂತುಕೊಂಡು ಸೆಲ್ಫಿ ಫೋಟೋ ತೆಗೆದುಕೊಂಡು ಜಿಲ್ಲಾ ಸ್ವಿಪ್ ಸಮಿತಿಗೆ ಕಳಿಸಿದರೆ ಉತ್ತಮವಾದ ಸೆಲ್ಫಿಗಳನ್ನು ಆರಿಸಿ ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ನವ ಯುವ ಮತದಾರರಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ವೋಟ್ ಫಾರ್ ಇಂಡಿಯಾ, ಪ್ರಜಾಪ್ರಭುತ್ವ ಬಲವರ್ಧನೆಗಾಗಿ ಮತ ಚಲಾಯಿಸೋಣ, ಮತದಾನ ನಮ್ಮ ಕರ್ತವ್ಯ ಅದನ್ನು ನಿಭಾಯಿಸೋಣ, ನನ್ನ ಮತ ನನ್ನ ಹಕ್ಕು ಹೀಗೆ ಮೊದಲಾದ ಘೋಷಣೆಗಳೊಂದಿಗೆ ಸ್ವಿಪ್, ಚುನಾವಣಾ ಆಯೋಗದ ಲಾಂಛನಗಳು ಮೆಹಂದಿಯಲ್ಲಿ ಅರಳಿದವು.
ಜಿಲ್ಲಾ ಸ್ವಿಪ್ ಸಮಿತಿ ನೋಡಲ್ ಅಧಿಕಾರಿ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಡೊಳ್ಳಿನ, ಕಾಲೇಜು ಶಿಕ್ಷಣ ಇಲಾಖೆಯ ಸ್ವಿಪ್ ನೋಡಲ್ ಅಧಿಕಾರಿ ಆರ್.ಬಿ. ಸೋನೆಖಾನ್, ಸ್ವಿಪ್ ರಾಜ್ಯ ಮಟ್ಟದ ತರಬೇತಿದಾರ ಕೆ.ಎಂ. ಶೇಖ್, ವಾರ್ತಾ ಸಹಾಯಕ ಡಾ.ಸುರೇಶ ಹಿರೇಮಠ, ಶಾಂತಾ ಪಾಟೀಲ ಕುಲಕರ್ಣಿ ಮತ್ತಿತರರು ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಚಾರ್ಯರಾದ ಡಾ.ನಿರ್ಮಲಾ ಹಿರೇಗೌಡರ್ ಸ್ವಾಗತಿಸಿದರು.ವಿದ್ಯಾರ್ಥಿ ಒಕ್ಕೂಟದ ಸಹ ಕಾರ್ಯದರ್ಶಿ ವಿದ್ಯಾಶ್ರಿಗಾಮಣ್ಣವರ್ ನಿರೂಪಿಸಿದರು. ಕಾಲೇಜಿನ ಚುನಾವಣಾ ಸಾಕ್ಷರತಾ ಕ್ಲಬ್ ನೋಡಲ್ ಅಧಿಕಾರಿ ಶಕುಂತಲಾ ಬಿರಾದಾರ ವಂದಿಸಿದರು.