ವಿಜಯಪುರ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಮ್ಮುಖದಲ್ಲಿ ಬಿಜೆಪಿ ಕಾರ್ಯಕರ್ತರು ಹೊಡೆದಾಡಿಕೊಂಡ ಘಟನೆ ವಿಜಯಪುರದಲ್ಲಿ ಇಂದು ನಡೆದಿದೆ.
ವಿಜಯಪುರದ ಜಿಪಂ ಆವರಣದಲ್ಲಿ ಆಯೋಜಿಸಿದ್ದ ಬಿಜೆಪಿ ಶಕ್ತಿ ಕೇಂದ್ರದ ಸಮಾವೇಶದಲ್ಲಿ ಘಟನೆ ನಡೆದಿದೆ. ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಹಾಗೂ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬೆಂಬಲಿಗರ ನಡುವೆ ಈ ಹೊಡೆದಾಟ ನಡೆದಿದೆ.
ವಿಜಯಪುರದ ಜಿಪಂ ಆವರಣದಲ್ಲಿ ನಡೆಯುತ್ತಿರುವ ಶಕ್ತಿ ಕೇಂದ್ರದ ಸಮಾವೇಶದಲ್ಲಿ ಕೆಲ ಬಿಜೆಪಿ ಕಾರ್ಯಕರ್ತರು, ಈ ಬಾರಿ ಹಾಲಿ ಸಂಸದ, ಕೇಂದ್ರ ಸಚಿವರಾಗಿರುವ ರಮೇಶ ಜಿಗಜಿಣಗಿ ಗೆ ಪಕ್ಷದಿಂದ ಟಿಕೆಟ್ ನೀಡಬಾರದು. ಬೇರೆ ಯಾರಾದರು ಯುವ ಅಭ್ಯರ್ಥಿಗೆ ಈ ಬಾರಿ ಟಿಕೆಟ್ ನೀಡಲು ಆಗ್ರಹಿಸಿ ಮನವಿ ಕೊಡಲು ಆಗಮಿಸಿದ್ದರು. ಅಲ್ಲದೆ ರಮೇಶ ಜಿಗಜಿಣಗಿ ವಿರುದ್ಧ ಘೋಷಣೆ ಕೂಗಿದರು. ಆಗ ಖುದ್ದು ಯಡ್ಡಿಯೂರಪ್ಪ ವೇದಿಕೆಯಿಂದ ಕೆಳಗಿಳಿದು ಮನವಿ ಪಡೆದು ಪಡೆದರು. ಈ ಸಂದರ್ಭ ರಮೇಶ ಜಿಗಜಿಣಗಿ ಬೆಂಬಲಿಗರು ಯಡ್ಡಿಯೂರಪ್ಪಅವರ ಎದುರು ಶರಣು ಹಾಗೂ ಐನಾಗೌಡ ಪಾಟೀಲ ಎಂಬ ಕಾರ್ಯಕರ್ತರಿಬ್ಬರನ್ನು ಥಳಿಸಿದ್ದಾರೆ.
ರಮೇಶ್ ಜಿಗಜಿಣಗಿ ಬೆಂಬಲಿಗರು ಈ ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ.