ಮಾನವೀಯತೆ ಹಿನ್ನೆಲೆಯಲ್ಲಿ ವೈದ್ಯರು ನೆರವಾಗಬೇಕು. ಸರ್ಕಾರದ ಕಾರ್ಯಗಳಿಗೆ ಕೈಜೋಡಿಸಬೇಕು : ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ಧಾರವಾಡ : ಇಡೀ ರಾಷ್ಟ್ರವೇ ಕೋವಿಡ್ ನಿರ್ವಹಣೆಯಲ್ಲಿ ಶಕ್ತಿಮೀರಿ ಶ್ರಮಿಸುತ್ತಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಆದಾಯ, ಲಾಭ ಲೆಕ್ಕಿಸದೇ ವೈದ್ಯವೃತ್ತಿಯಲ್ಲಿರುವ ಪ್ರತಿಯೊಬ್ಬರು ಮಾನವೀಯತೆಯಿಂದ ಸಮಾಜಕ್ಕೆ ನೆರವಾಗಬೇಕು. ಸರ್ಕಾರಗಳು ಕಾಲ ಕಾಲಕ್ಕೆ ತೆಗೆದುಕೊಳ್ಳುವ ನಿರ್ಧಾರಗಳಿಗೆ ಬೆಂಬಲ ನೀಡಿ, ಸರ್ಕಾರದ ಕಾರ್ಯಗಳಿಗೆ ಕೈಜೋಡಿಬೇಕೆಂದು ಕೇಂದ್ರ ಗಣಿ, ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಸಭೆ ಉದ್ದೇಶಿಸಿ ಮಾತನಾಡಿ, ಅನೇಕ ಆಸ್ಪತ್ರೆಗಳು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿವೆ. ಆದರೆ ಕೆಲವು ಆಸ್ಪತ್ರೆಗಳು ಕೋವಿಡ್ ಚಿಕಿತ್ಸೆಗಾಗಿ ಹೆಚ್ಚಿನ ದರ ವಸೂಲು ಮಾಡುತ್ತಿರುವ ಕುರಿತು ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಸರ್ಕಾರ ಕಠಿಣ ಕ್ರಮ ಕೈಗೊಳ್ಳುವ ಮೊದಲು ಕುರಿತು ಆಸ್ಪತ್ರೆಯವರು ಎಚ್ಚೆತ್ತುಕೊಳ್ಳಬೇಕು. ಈಗಾಗಲೇ ಆಸ್ಪತ್ರೆಗಳಲ್ಲಿ ಶೇ.50 ರಷ್ಟು ಹಾಸಿಗೆಗಳನ್ನು ಮೀಸಲಿಡಲು ಸರ್ಕಾರ ಆದೇಶಿಸಿದೆ. ಮತ್ತು ಖಾಸಗಿ ಆಸ್ಪತ್ರೆಗಳು ಕೋವಿಡ್ ಚಿಕಿತ್ಸೆಗಾಗಿ ವಿಧಿಸುವ ದರವನ್ನು ಸರ್ಕಾರದಿಂದ ನಿಗದಿಪಡಿಸಿ ಆದೇಶಿಸಲಾಗಿದೆ. ಹಾಗೂ ಸರ್ಕಾರ ಪ್ರಕಟಿಸಿರುವ ಚಿಕಿತ್ಸಾ ದರವನ್ನು ಸಾರ್ವಜನಿಕರಿಗೆ ಎದ್ದು ಕಾಣುವಂತೆ ಆಸ್ಪತ್ರೆಯ ಪ್ರಮುಖ ಸ್ಥಳದಲ್ಲಿ ಪ್ರಚುರಪಡಿಸುವಂತೆ ಸೂಚಿಸಲಾಗಿದೆ. ಇವುಗಳನ್ನು ಪಾಲನೆ ಮಾಡದ ಆಸ್ಪತ್ರೆಗಳ ವಿರುದ್ಧ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದು ಸಚಿವರು ತಿಳಿಸಿದರು.
ಪ್ರದಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಯಡಿ ಕಿಮ್ಸ್ ಆಸ್ಪತ್ರೆಯಲ್ಲಿ 1,000 ಬೆಡ್ಗಳ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಜಿಲ್ಲಾಸ್ಪತ್ರೆಗೆ ಕೇಂದ್ರದಿಂದ ಬೇರೆ ಬೇರೆ ಸಂದರ್ಭದಲ್ಲಿ ಅನುದಾನ ಬಂದಿದ್ದು, ಇದೀಗ ಮದರ್ ಆ್ಯಂಡ್ ಚೈಲ್ಡ್ ಕೇರ್ ಆಸ್ಪತ್ರೆಗೆ 26 ಕೋಟಿ ನೀಡಲಾಗಿದೆ. ಪಿಎಮ್ ಕೇರ್ ಫಂಡ್ದಲ್ಲಿ ವೆಂಟಿಲೇಟರ್ಸ್ಗಳು ಮೊದಲ ಹಂತದಲ್ಲಿ ಬಂದಿದ್ದು, 2ನೇ ಹಂತದಲ್ಲಿಯೂ ಅಗತ್ಯವಿರುವಷ್ಟು ವೆಂಟಿಲೇಟರ್ಸ್ಗಳನ್ನು ಪೂರೈಸಲಾಗುವುದು.
ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಇಲ್ಲ. ಕೊರತೆ ಕಂಡು ಬಂದರೆ ಕೇಂದ್ರದಿಂದ ಎಲ್ಲ ರೀತಿಯ ಸಹಾಯ ದೊರೆಯಲಿದೆ. ಈಗಾಗಲೇ ರೆಮಡಿಸಿವರ್ 25,000 ದಿಂದ 1,22,000 ದವರೆಗೆ ಹೆಚ್ಚಿಸಲಾಗಿದ್ದು, ಕೇಂದ್ರದಿಂದ ಸಹಕಾರ ನೀಡಲಾಗಿದ್ದು ಶೇ.50 ರಷ್ಟು ವ್ಯಾಕ್ಸಿನೇಷನ್ ಕೇಂದ್ರದಿಂದ ಉಚಿತವಾಗಿ ನೀಡಲಾಗುತ್ತಿದೆ. ಕೊವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಎರಡು ಲಸಿಕೆ ಉತ್ತಮವಾಗಿದ್ದು, ಕೇಂದ್ರ ಸರ್ಕಾರದ ನಿಯಮಾವಳಿ ಪ್ರಕಾರ ಅರ್ಹರಿರುವ ಎಲ್ಲರೂ ಲಸಿಕೆಯನ್ನು ಕಡ್ಡಾಯವಾಗಿ ಪಡೆಯಬೇಕು. ಭಾರತ ಸರ್ಕಾರ ರಾಜ್ಯಕ್ಕೆ ಎಲ್ಲ ರೀತಿಯಲ್ಲಿ ಸಹಕಾರ ನೀಡುತ್ತಿದೆ ಎಂದು ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಅವರು ಹೇಳಿದರು.