ಭಟ್ಕಳ: ಮುರುಡೇಶ್ವರದಲ್ಲಿ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಉಂಟಾದ ಗೊಂದಲಗಳಿಗೆ ಪರಸ್ಪರ ಸಹಕಾರದ ಮೂಲಕ ಬಗೆಹರಿಸಲಾಗುವುದು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮುಹಮ್ಮ್ದ್ ರೋಷನ್ ಶುಕ್ರವಾರ ಸಂಜೆ ಮುರುಡೇಶ್ವರ ಆರೆನ್ನೆಸ್ ಹೈವೇ ಹೊಟೆಲ್ನಲ್ಲಿ ನಡೆದ ಸಭೆಯಲ್ಲಿ, ರಸ್ತೆಯ ಇಕ್ಕೆಲಗಳ ಜಮೀನು, ಕಟ್ಟಡ ಮಾಲೀಕರ ಅಹವಾಲುಗಳನ್ನು ಆಲಿಸಿ ಮಾತನಾಡಿದರು.
ಚತುಷ್ಪಥ ರಸ್ತೆ ನಿರ್ಮಾಣದಿಂದಾಗಿ 74 ಜನರ ಕಟ್ಟಡ ಅಥವಾ ಭೂಮಿಗೆ ಉಂಟಾಗುವ ಸಂಭಾವ್ಯ ಹಾನಿಯ ವಿವರಗಳನ್ನು ಪಟ್ಟಿ ಮಾಡಿಕೊಂಡ ಅವರು, ಸಣ್ಣ ಪುಟ್ಟ ಸಮಸ್ಯೆಗಳನ್ನು ಪರಸ್ಪರ ಸಹಕಾರದ ಮೂಲಕ ಬಗೆ ಹರಿಸುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಾರ್ವಜನಿಕರ ಪರವಾಗಿ ಮಾತನಾಡಿದ ಪಂಚಾಯತ ಸದಸ್ಯ ಕೃಷ್ಣ ನಾಯ್ಕ, ಮುರುಡೇಶ್ವರ ದೊಡ್ಡದಾಗಿ ಬೆಳೆದಿದೆ. ಇಲ್ಲಿಗೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಸರಕಾರದ ವತಿಯಿಂದ ವಸತಿ ಸೌಕರ್ಯ ಒದಗಿಸಲು ಪ್ರಯತ್ನಿಸಬೇಕು. ಅಭಿವೃದ್ಧಿ ಕಾಮಗಾರಿಯು ರಸ್ತೆ ನಿರ್ಮಾಣಕ್ಕಷ್ಟೇ ಸೀಮಿತವಾಗಬಾರದು. ಮುರುಡೇಶ್ವರ ರಸ್ತೆಯ ಪಕ್ಕದಲ್ಲಿ ಹಾದು ಹೋಗುವ ಕುಡಿಯುವ ನೀರಿನ ಕೊಳವೆ ಹಾಗೂ ವಿದ್ಯುತ್ ತಂತಿಗಳ ಅಳವಡಿಕೆಗೆ ಸಂಬಂಧಿಸಿದಂತೆ ಯಾವುದೇ ಹಾನಿಯಾಗದ ರೀತಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು. ಅಲ್ಲದೇ ಜನನಿಬಿಡ ಪ್ರದೇಶವಾಗುತ್ತಿರುವ ಮುರುಡೇಶ್ವರದಲ್ಲಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಆಗ್ರಹಿಸಿದರು. ಇನ್ನೋರ್ವ ಸದಸ್ಯ ಜಯಂತ ನಾಯ್ಕ ಮಾತನಾಡಿ, ಕುಡಿಯುವ ನೀರಿನ ಘಟಕವನ್ನು ಸ್ಮಶಾನ ಪಕ್ಕದಲ್ಲಿ ನಿರ್ಮಿಸಿದರೆ ಜನರಿಗೆ ಯಾವುದೇ ಪ್ರಯೋಜನ ಇಲ್ಲ. ಈ ಬಗ್ಗೆ ಅಧಿಕಾರಿಗಳು ಸಕಾರಾತ್ಮಕವಾಗಿ ಚಿಂತನೆ ನಡೆಸಬೇಕು ಎಂದರು. ಮುರುಡೇಶ್ವರದಲ್ಲಿರುವ ಅಕ್ರಮ ಕಟ್ಟಡ ವಿಲೇವಾರಿಗೆ ಸಂಬಂಧಿಸಿದಂತೆ ಆದೇಶ ಪಾಲನೆ ವಿಳಂಬವಾಗುತ್ತಿರುವ ಬಗ್ಗೆ ಅವರು ಇದೇ ಸಂದರ್ಭದಲ್ಲಿ ಆಕ್ಷೇಪ ವ್ಯಕ್ತಪಡಿಸಿದರು.
ಶಾಸಕ ಸುನಿಲ್ ಬಿ. ನಾಯ್ಕ, ಭಟ್ಕಳ ಸಹಾಯಕ ಆಯುಕ್ತ ಸಾಜೀದ್ ಮುಲ್ಲಾ, ತಾಪಂ ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ, ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಭಿಯಂತರ ಮಹೇಶ್, ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ರವಿ, ಮುರುಡೇಶ್ವರ ಠಾಣಾ ಎಸೈ ಅಜೀತ್ ಮೊದಲಾದವರು ಉಪಸ್ಥಿತರಿದ್ದರು.
ಸಮುದ್ರ ತೀರದಲ್ಲಿ ಅತಿಕ್ರಮಕ್ಕೆ ಆಸ್ಪದವಿಲ್ಲ; ಮುರುಡೇಶ್ವರ ಸಮುದ್ರ ತೀರವನ್ನು ಯಾವುದೇ ಕಾರಣಕ್ಕೂ ಅತಿಕ್ರಮಣ ನಡೆಸಲು ಅವಕಾಶ ನೀಡುವುದಿಲ್ಲ. ಅಲ್ಲದೇ ಆ ಪ್ರದೇಶದಲ್ಲಿ ಅಕ್ರಮ ನಿರ್ಮಾಣ ಕಾರ್ಯ ನಡೆದರೆ ಸಹಿಸಲು ಸಾಧ್ಯವಿಲ್ಲ ಎಂದು ಜಿಪಂ ಸಿಇಓ ಮುಹಮ್ಮದ್ ರೋಷನ್ ಹೇಳಿದರು.
ಇತ್ತೀಚಿಗೆ ಮುರುಡೇಶ್ವರ ಸಮುದ್ರ ತೀರದಲ್ಲಿ ಕಾಂಕ್ರೀಟ್ ಪ್ರದೇಶಕ್ಕೆ ಗೇಟ್ ಅಳವಡಿಕೆ ಹಾಗೂ ನಂತರ ನಡೆದ ಪ್ರತಿಭಟನೆಯ ಕುರಿತಂತೆ ಮಾತನಾಡಿದ ಅವರು, ನಮಗೆ ಯಾರನ್ನೂ ಒಕ್ಕಲೆಬ್ಬಿಸುವ ಅಥವಾ ತೊಂದರೆ ನೀಡುವ ಉದ್ದೇಶ ಇಲ್ಲ. ಸದರಿ ಜಾಗದಲ್ಲಿ ಕಂಬ ಸ್ಥಾಪನೆಗೆ ಅವಕಾಶ ಕೊಟ್ಟವರು ಯಾರು, ತಾನೇ ಮುಂದೆ ನಿಂತು ಕಲ್ಲು ಸಂಗ್ರಹವನ್ನು ತೆರವು ಮಾಡಿಸಿದ ನಂತರವೂ ಅಲ್ಲಿ ನಿಯಮಬಾಹೀರವಾಗಿ ನಿರ್ಮಾಣ ಪ್ರಯತ್ನ ನಡೆಯುತ್ತಿದೆ ಎಂದರೆ ಏನರ್ಥ, ಮೀನುಗಾರರಿಗೆ ಅನುಕೂಲವಾಗುವುದಿದ್ದರೆ ಮೀನುಗಾರಿಕೆ ಇಲಾಖೆ ಅಥವಾ ಬಂದರು ಇಲಾಖೆಯ ವತಿಯಿಂದ ಅಲ್ಲಿ ನಿರ್ಮಾಣ ಕಾರ್ಯ ಕೈಗೊಳ್ಳಬೇಕೇ ಹೊರತು ಖಾಸಗಿಯಾಗಿ ಯಾರಿಗೂ ಅವಕಾಶಕ್ಕೆ ಆಸ್ಪದ ಇಲ್ಲ. ಜನರು ಗುಂಪುಗೂಡಿ ನಿಯಮ ಬಾಹೀರವಾಗಿ ಏನನ್ನೋ ಮಾಡಲಿಕ್ಕೆ ಸಾಧ್ಯವಿಲ್ಲ ಎಂದು ಎಚ್ಚರಿಸಿದರು.