ಹರ್ಯಾಣ ಕೋಮು ಹಿಂಸಾಚಾರ; ಧಾರ್ಮಿಕ ಯಾತ್ರೆಯಲ್ಲಿ ಶಸ್ತ್ರಾಸ್ತ್ರ ಹೇಗೆ ಬಂತು? ಕೇಂದ್ರದ ಸಹಾಯಕ ಸಚಿವ ರಾವ್ ಇಂದ್ರಜಿತ್ ಸಿಂಗ್
ಹೊಸದಿಲ್ಲಿ: ಹರ್ಯಾಣದ ನೂಹನಲ್ಲಿ ಧಾರ್ಮಿಕ ಯಾತ್ರೆಯಲ್ಲಿ ಪಾಲ್ಗೊಂಡವರು ತಲವಾರು, ದೊಣ್ಣೆಗಳನ್ನು ಹಿಡಿದುಕೊಂಡು ಹೋಗಿರುವುದು ಸರಿಯಲ್ಲ ಎಂದು ಗುರುಗ್ರಾಮದ ಸಂಸದ ಹಾಗೂ ಕೇಂದ್ರದ ಸಹಾಯಕ ಸಚಿವ ರಾವ್ ಇಂದ್ರಜಿತ್ ಸಿಂಗ್ ಹೇಳಿದ್ದಾರೆ.
ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸಿಂಗ್, ಧಾರ್ಮಿಕ ಯಾತ್ರೆಯಲ್ಲಿ ಭಾಗವಹಿಸುವವರು ಶಸ್ತ್ರಾಸ್ತ್ರಗಳನ್ನು ಯಾಕೆ ಕೊಂಡೊಯ್ಯಬೇಕು? ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಉಭಯ ಕಡೆಯ ಪ್ರಚೋದನೆ ಹಿಂಸಾಚಾರ ಭುಗಿಲೇಳಲು ಕಾರಣವಾಯಿತು ಎಂದಿದ್ದಾರೆ.
ಮೆರವಣಿಗೆಯಲ್ಲಿ ಪಾಲ್ಗೊಂಡವರಿಗೆ ಶಸ್ತ್ರಾಸ್ತ್ರಗಳನ್ನು ನೀಡಿದವರು ಯಾರು? ತಲವಾರು, ದೊಣ್ಣೆಗಳೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡವರು ಯಾರು?, ಇದು ತಪ್ಪು. ಈ ಕಡೆಯಿಂದಲೂ ಪ್ರಚೋದನೆ ನಡೆದಿದೆ. ಇನ್ನೊಂದು ಕಡೆಯಿಂದ ಪ್ರಚೋದನೆ ನಡೆದಿಲ್ಲ ಎಂದು ನಾನು ಹೇಳುತ್ತಿಲ್ಲ ಎಂದು ಸಿಂಗ್ ಹೇಳಿದ್ದಾರೆ.