ಶಿಂದೆ ಬಣ 'ಅಸಲಿ' ಶಿವಸೇನೆ, ಇ.ಸಿ. ಆದೇಶದ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಉದ್ಧವ್ ಠಾಕ್ರೆ
ಹೊಸದಿಲ್ಲಿ: ಏಕನಾಥ್ ಶಿಂದೆ ನೇತೃತ್ವದ ಬಣ ನಿಜವಾದ ಶಿವಸೇನೆ ಎಂದು ಚುನಾವಣಾ ಆಯೋಗ ನೀಡಿದ ಆದೇಶ ಪ್ರಶ್ನಿಸಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಸೋಮವಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಹಿರಿಯ ವಕೀಲ ಅಭಿಷೇಕ್ ಮನು ಸಿಂಘೀ ಅವರು ಪ್ರಕರಣವನ್ನು ಶೀಘ್ರ ಪಟ್ಟಿ ಮಾಡುವಂತೆ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರಲ್ಲಿ ಮನವಿ ಮಾಡಿದರು. ಆದರೆ, ಈ ವಿಷಯ ಉಲ್ಲೇಖಿಸಲಾದ ಪಟ್ಟಿಯ ಭಾಗವಾಗಿರಲಿಲ್ಲ. ಆದುದರಿಂದ ಯಾವುದೇ ಆದೇಶ ನೀಡಲು ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.
“ಎಡ, ಬಲ ಅಥವಾ ಕೇಂದ್ರ, ಯಾವುದೇ ಆಗಿದ್ದರೂ ನಿಯಮಗಳು ಎಲ್ಲರಿಗೂ ಸಮಾನವಾಗಿ ಅನ್ವಯವಾಗುತ್ತದೆ. ಸೂಕ್ತ ಪ್ರಕ್ರಿಯೆಯ ಮೂಲಕ ನಾಳೆ ಬನ್ನಿ' ಎಂದು ಅವರು ಹೇಳಿದರು. ಕಳೆದ ವರ್ಷ ಜೂನ್ನಲ್ಲಿ ಶಿಂದೆ ನೇತೃತ್ವದ ಶಾಸಕರ ಗುಂಪು ಉದ್ಧವ್ ಠಾಕ್ರೆ ವಿರುದ್ಧ ಬಂಡಾಯವೆದ್ದಿತ್ತು. ಶಿವಸೇನೆ ಎರಡು ಹೋಳಾಗಿತ್ತು. ಇದರಿಂದ ಈ ಹಿಂದಿನ ಶಿವಸೇನೆ, ಎನ್ಸಿಪಿ ಹಾಗೂ ಕಾಂಗ್ರೆಸ್ ನೇತೃತ್ವದ ಆಡಳಿತಾರೂಢ ಮಹಾರಾಷ್ಟ್ರ ಸರಕಾರ ಕುಸಿದು ಬಿದ್ದಿತ್ತು.