ದೆಹಲಿ: ಏಕರೂಪ ನಾಗರಿಕ ಸಂಹಿತೆಯು ಭಾರತದಂತಹ ಬಹುತ್ವದ ದೇಶಕ್ಕೆ ಸೂಕ್ತವಾದುದಲ್ಲ ಎಂದು ಜಮಾಅತೆ ಇಸ್ಲಾಮಿ ಹಿಂದ್ ಅಭಿಪ್ರಾಯ ಪಟ್ಟಿದೆ.
ಅನೇಕ ಧರ್ಮಗಳು ಸಂಸ್ಕೃತಿ ಮತ್ತು ಆಚರಣೆಗಳುಳ್ಳ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಯಾವ ಕಾರಣಕ್ಕೂ ಸೂಕ್ತವಲ್ಲ. ವ್ಯಕ್ತಿ ನಿಯಮಗಳಲ್ಲಿ ಯಾವುದೇ ಪರಿಷ್ಕರಣೆಯನ್ನು ಆಯಾ ಸಮುದಾಯಗಳ ಒಳಗಿನಿಂದಲೇ ಮಾಡುವಂತಾಗಬೇಕೆ ಹೊರತು ಕಾನೂನುಗಳ ಮೂಲಕ ಅದನ್ನು ಜಾರಿಗೊಳಿಸಲು ಹೊರಟರೆ ಪ್ರತಿರೋಧಗಳು ಎದುರಾಗಬಹುದು ಎಂದು ರಾಷ್ಟ್ರೀಯ ಕಾನೂನು ಆಯೋಗಕ್ಕೆ ಬರೆದ ಪತ್ರದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ರಾಷ್ಟ್ರೀಯ ಉಪಾಧ್ಯಕ್ಷ ಮಲಿಕ್ ಮುಹತಸಿಮ್ ಖಾನ್ ತಿಳಿಸಿದ್ದಾರೆ.
21ನೇ ಕಾನೂನು ಆಯೋಗವು 2016-18ರಲ್ಲಿ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಬಿಡುಗಡೆಗೊಳಿಸಿದ ವರದಿಯ ಬಗ್ಗೆಯೂ ಈ ಪತ್ರದಲ್ಲಿ ನೆನಪಿಸಲಾಗಿದೆ.
ಭಾರತಕ್ಕೆ ಏಕರೂಪ ನಾಗರಿಕ ಸಂಹಿತೆ ಸೂಕ್ತವಲ್ಲ ಎಂದು ಆ ಸಂದರ್ಭದಲ್ಲಿ ಆಯೋಗ ಅಭಿಪ್ರಾಯಪಟ್ಟಿತ್ತು. ಇದರ ಹೊರತಾಗಿಯೂ ಇದೀಗ ಏಕರೂಪ ನಾಗರಿಕ ಸಂಹಿತೆಯನ್ನು ಮುಂಚೂಣಿಗೆ ತಂದಿರುವುದರ ಔಚಿತ್ಯವು ಪ್ರಶ್ನಾರ್ಹವಾಗಿದೆ. ಲೋಕಸಭಾ ಚುನಾವಣೆಗೆ ತಿಂಗಳುಗಳಷ್ಟೇ ಉಳಿದಿರುವಾಗ ಏಕರೂಪ ನಾಗರಿಕ ಸಂಹಿತೆಯನ್ನು ಚರ್ಚೆಗೊಳಪಡಿಸುವುದರ ಹಿಂದೆ ರಾಜಕೀಯ ಉದ್ದೇಶ ಇದೆ ಎಂದು ಅವರು ಹೇಳಿದ್ದಾರೆ.