ಮಂಗಳೂರು: ನೇತ್ರಾವತಿ ನದಿಯಲ್ಲಿ ಸ್ನಾನ ಮಾಡಲು ಹೋಗಿದ್ದ ಏಳು ಮಂದಿ ಮಕ್ಕಳಲ್ಲಿ ಇಬ್ಬರು ಆಯತಪ್ಪಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸೂರಿಕುಮೇರು ಸಮೀಪದ ಬರಿಮಾರು ಎಂಬಲ್ಲಿ ನಡೆದಿದೆ.ಕೇರಳದ ಕಾಸರಗೋಡು ಜಿಲ್ಲೆಯ ಕುಂಬಳೆಯ ಮನೀಷ್ (14) ಹಾಗೂ ಅಜಿತ್ (13) ಮೃತಪಟ್ಟ ಮಕ್ಕಳು. ಮತ್ತೋರ್ವ ಬಾಲಕನ ಸ್ಥಿತಿ ಗಂಭೀರವಾಗಿದ್ದು, ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಸೂರಿಕುಮೇರು ಸಮೀಪದ ಬರಿಮಾರು ನಿವಾಸಿ ಸಂಜೀವ ಬೋವಿ ಎಂಬವರ ಮನೆಗೆ ಮದುವೆ ಕಾರ್ಯಕ್ರಮಕ್ಕೆ ಬಂದಿದ್ದ ಸಂಬಂಧಿಕರ ಏಳು ಮಂದಿ ಮಕ್ಕಳು ಇಂದು ಮನೆಯ ಪಕ್ಕದಲ್ಲಿರುವ ನೇತ್ರಾವತಿ ನದಿಗೆ ಸ್ನಾನ ಮಾಡಲು ತೆರಳಿದ ಸಂದರ್ಭ ಈ ದುರ್ಘಟನೆ ನಡೆದಿದೆ. ಸ್ನಾನ ಮಾಡಲು ನೀರಿಗಿಳಿದ ಸಂದರ್ಭ ಮೂವರು ಮಕ್ಕಳು ಆಯತಪ್ಪಿ ನದಿಯಲ್ಲಿ ಮುಳುಗಿದ್ದಾರೆ. ತಕ್ಷಣ ಸ್ಥಳೀಯರು ಮಕ್ಕಳನ್ನು ನೀರಿನಿಂದ ಮೇಲಕ್ಕೆತ್ತಿದರೂ ಇಬ್ಬರೂ ಅದಾಗಲೇ ಮೃತಪಟ್ಟಿದ್ದರು. ಮತ್ತೋರ್ವನ ಸ್ಥಿತಿ ಗಂಭೀರವಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.