ಭಟ್ಕಳ: ಪ್ರವಾಸಕ್ಕೆಂದು ಮುರುಡೇಶ್ವರಕ್ಕೆ ಬಂದು ಈಜಲು ನೀರಿಗೆ ಇಳಿದು ನೀರುಪಾಲಾಗಲಿದ್ದ ಮೂವರನ್ನು ಮುರುಡೇಶ್ವರ ಸಮುದ್ರ ತೀರದ ಜೀವ ರಕ್ಷಕ ಸಿಬ್ಬಂದಿಗಳು ರಕ್ಷಿಸಿರುವ ಘಟನೆ ಮಂಗಳವಾರ ನಡೆದಿದೆ.
ಪ್ರಾಣಾಪಾಯದಿಂದ ಪಾರಾದವರನ್ನು ಗೋವಾ ಬಾರಕ್ಚಾರ್ ಬಿಬಿಡಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾದ ರತೀಕ್ರಾಜ್ (19), ಅಂಕುಶ್ ಸಿಂಗ್ (19) ರಾಜೀವ್ ಮುಖರ್ಜಿ (18) ಎಂದು ಗುರುತಿಸಲಾಗಿದೆ. ಇವರು ಕಾಲೇಜಿನ ಇತರೇ 27 ವಿದ್ಯಾರ್ಥಿಗಳೊಂದಿಗೆ ಮುರುಡೇಶ್ವರಕ್ಕೆ ಆಗಮಿಸಿದ್ದರು. ವಿದ್ಯಾರ್ಥಿಗಳು ಗುಂಪು ಗುಂಪಾಗಿ ಈಜಾಡುತ್ತಿರುವಾಗ, ನೀರಿನ ಸೆಳೆತಕ್ಕೆ ಒಳಗಾಗಿ ಮೂವರು ವಿದ್ಯಾರ್ಥಿಗಳು ಮುಳುಗುವ ಹಂತ ತಲುಪಿದ್ದರು. ಇದನ್ನು ಕಂಡ ಜೀವ ರಕ್ಷಕ ಸಿಬ್ಬಂದಿಗಳು ಸಮುದ್ರಕ್ಕೆ ಹಾರಿ ಮೂವರನ್ನು ದಡಕ್ಕೆ ತರುವಲ್ಲಿ ಸಫಲರಾಗಿದ್ದಾರೆ. ಜೀವ ರಕ್ಷಕ ಸಿಬ್ಬಂದಿಗಳಾದ ರವಿ ಮಾದೇವ ಹರಿಕಾಂತ, ಜೈ ರಾಮ್ ಕುಪ್ಪ ಹರಿಕಾಂತ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.