ಭಟ್ಕಳ: ಎಲ್ಲ ರೀತಿಯ ಭಯೋತ್ಪಾದನೆಯನ್ನು ವಿರೋಧಿಸುವುದರ ಮೂಲಕ ದೇಶವನ್ನು ಶಾಂತಿ ಮತ್ತು ನೆಮ್ಮದಿಯ ತಾಣವಾಗಿಸುವಲ್ಲಿ ಯುವಸಮುದಾಯದ ಪಾತ್ರ ಹಿರಿದಾದುದು ಎಂದು ಸ್ಥಳೀಯ ಅಂಜುಮನ್ ಕಲಾ ವಿಜ್ಞಾನ ವಾಣಿಜ್ಯ ಮಹಾವಿದ್ಯಾಲಯ ಮತ್ತು ಸ್ನಾತಕೋತ್ತರ ಕೇಂದ್ರದ ಪ್ರಾಚಾರ್ಯ ಪ್ರೊ. ಮುಸ್ತಾಕ್ ಕೆ. ಶೇಖ ಹೇಳಿದರು.
ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಮ್ಮಿಕೊಂಡ ಭಯೋತ್ಪದನಾ ವಿರೋಧಿ ದಿನಾಚರಣೆಯ ಅಧ್ಯಕ್ಷತೆ ವಹಿಸಿದ ಪ್ರೊ. ಮುಸ್ತಾಕ್ ಶೇಖ ಭಯೋತ್ಪಾದನೆ ಎಂದರೇನು? ಅದರ ವಿಧಗಳಾವವು? ಅದಕ್ಕೆ ಕಾರಣಗಳೇನು, ಪರಿಣಾಮಗಳೇನು? ಅದರ ಪರಿಹಾರೋಪಾಯಗಳು ಯಾವವು ಎಂಬುದನ್ನು ವಿವರಿಸಿದರು.
ಬಡತನ, ನಿರುದ್ಯೋಗ, ಹಣದ ಆಮಿಷ, ಮೌಲ್ಯಶಿಕ್ಷಣದ ಕೊರತೆ, ಧರ್ಮ ಮತ್ತು ಜಾತಿಯ ಮೇಲಿನ ಅಂಧಾಭಿಮಾನ ಇತ್ಯಾದಿಗಳೆಲ್ಲ ಯುವಕರನ್ನು ಭಯೋತ್ಪಾದನೆಯತ್ತ ಸೆಳೆಯುತ್ತವೆಯೆಂದ ಶ್ರೀಯುತರು ಇಂತಹ ಸೆಳೆತಗಳಿಂದ ಯುವಸಮುದಾಯ ದೂರವಿದ್ದು, ಪ್ರಜ್ಞಾವಂತ ನಾಗರಿಕರಾಗಿ ತಮ್ಮ ಮತ್ತು ತಮ್ಮ ರಾಷ್ಟ್ರದ ಭವ್ಯ ಭವಿಷ್ಯಕ್ಕಾಗಿ, ಅಭಿವೃದ್ಧಿಗಾಗಿ ಸದಾ ದುಡಿಯಬೇಕೆಂದು ಕರೆನೀಡಿದರು.
ಕಾಲೇಜಿನ ನ್ಯಾಕ್ ಸಂಯೋಜಕರಾದ ಪ್ರೊ. ಎಸ್. ಎ. ಇಂಡಿಕರ್ ಮತ್ತು ಪ್ರೊ. ದೇವಿದಾಸ ಪ್ರಭು ನಾವೆಲ್ಲ ಭಯೋತ್ಪಾದನೆಯಿಂದ ದೂರವಿರುವುದಷ್ಟೇ ಅಲ್ಲ, ಎಲ್ಲರೂ ಸಂಘಟಿತರಾಗಿ ಭಯೋತ್ಪಾದಕ ಕೃತ್ಯಗಳನ್ನು ವಿರೋಧಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಎನ್ಎಸ್ಎಸ್ ಘಟಕದ ಸಂಯೋಜಕರಾದ ಪ್ರೊ. ಆರ್. ಎಸ್. ನಾಯಕ ವಿದ್ಯಾರ್ಥಿ ಮತ್ತು ಸಹೋದ್ಯೋಗಿಗಳಿಗೆ ಭಯೋತ್ಪಾದನಾ ವಿರೋಧಿ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.
ಉಪನ್ಯಾಸಕಿ ಮಾಲತಿ ನಾಯ್ಕ ಪ್ರಾಸ್ತವಿಕ ನುಡಿಗಳನ್ನಾಡಿದರು. ಆರಂಭದಲ್ಲಿ ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ಪವಿತ್ರಾ ನಾಯ್ಕ ಎಲ್ಲರನ್ನು ಸ್ವಾಗತಿಸಿದರೆ, ಕೊನೆಯಲ್ಲಿ ಉಪನ್ಯಾಸಕಿ ಪೂರ್ಣಿಮಾ ವಂದಿಸಿದರು. ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸ್ವಯಂಸೇವಕರು ಕಾರ್ಯಕ್ರಮ ಸಂಘಟಿಸುವಲ್ಲಿ ಸರ್ವ ರೀತಿಯ ನೆರವು ನೀಡಿದರು.