ಫೆಲೆಸ್ತೀನ್ ಸಮಸ್ಯೆ-ಒಂದು ಅವಲೋಕನ' ವಿಚಾರ ಸಂಕಿರಣ ಇಸ್ರೇಲ್ ನರಮೇಧ ಅಂತರ್ರಾಷ್ಟ್ರೀಯ ಅಪರಾಧ: ಬಿ.ಟಿ.ವೆಂಕಟೇಶ್
ಬೆಂಗಳೂರು: ಫೆಲೆಸ್ತೀನ್ ಮೇಲೆ ಇಸ್ರೇಲ್ ನಡೆಸುತ್ತಿರುವ ನರಮೇಧ ಒಂದು ರೀತಿಯ ಅಂತರ್ ರಾಷ್ಟ್ರೀಯ ಅಪರಾಧವಾಗಿದೆ. ಸಿರಿಯಾ, ಕಾಂಬೋಡಿಯಗಳಲ್ಲಿ ನಡೆದ ಹತ್ಯೆಗಳಿಗೂ, ಈಗಿನ ಇಸ್ರೇಲ್ ನರಮೇಧಕ್ಕೂ ಯಾವುದೇ ವ್ಯತ್ಯಾಸವಿಲ್ಲ ಎಂದು ಖ್ಯಾತ ವಕೀಲ ಬಿ.ಟಿ.ವೆಂಕಟೇಶ್ ಖಂಡಿಸಿದ್ದಾರೆ. ಗುರುವಾರ ನಗರದ ಕ್ಲೀನ್ ರಸ್ತೆಯ ಬಿಐಎಫ್ಟಿ ಸಭಾಂಗಣದಲ್ಲಿ ಸಾಲಿಡಾರಿಟಿ ಯೂತ್ ಮೂಮೆಂಟ್ ಕರ್ನಾಟಕ ಸಂಘಟನೆಯ ವತಿಯಿಂದ ನಡೆದ 'ಫೆಲೆಸ್ತೀನ್ ಸಮಸ್ಯೆ- ಒಂದು ಅವಲೋಕನ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಇಸ್ರೇಲ್ ಜನಾಂಗೀಯ ದ್ವೇಷವನ್ನು ಮೆರೆಯುತ್ತಿದೆ. ಇಂತಹ ಮನಸ್ಥಿತಿಯನ್ನು ಇಡೀ ಜಗತ್ತು ಖಂಡಿಸಬೇಕು ಎಂದರು.
ಚಿಂತಕ ಶಿವಸುಂದರ್ ಮಾತನಾಡಿ ಇಸ್ರೇಲ್ ಫೆಲೆಸ್ತೀನ್ನ ಅಸಹಾಯಕ, ಅಮಾಯಕ ನಾಗರಿಕರ ಮೇಲೆ ದಾಳಿ ನಡೆಸಿ ನರಮೇಧ ಮಾಡುತ್ತಿದೆ. ಇದಕ್ಕೆ ಅಮೆರಿಕ ಹಾಗೂ ಯೂರೋಪಿನ ಬಲಿಷ್ಠ ರಾಷ್ಟ್ರಗಳು ತಮ್ಮ ಸ್ವಾರ್ಥ ಜಿಯೊ-ಪೊಲಿಟಿಕಲ್ ಆಸಕ್ತಿಗಳಿಗಾಗಿ ಸಂಪೂರ್ಣ ಬೆಂಬಲ ನೀಡಿವೆ ಎಂದರು.
ಇಸ್ರೇಲ್ ನಡೆಸುತ್ತಿರುವ ಯುದ್ದದ ನಿಜವಾದ ಉದ್ದೇಶ ಫೆಲೆಸ್ತೀನ್ ರೈತಾಪಿಗಳ ಹಾಗೂ ಗಾಝಾ ನಿವಾಸಿಗಳ ನರಮೇಧ ನಡೆಸಿ ಫೆಲೆಸ್ತೀನನ್ನು ಕಬಳಿಸುವುದೇ ಆಗಿದೆ ಎಂಬುದರಲ್ಲಿ ಸಂದೇಹವಿಲ್ಲ ಎಂದು ಅವರು ವಿವರಿಸಿದರು.
ವಿಚಾರ ಸಂಕಿರಣದಲ್ಲಿ ಸಾಲಿಡಾರಿಟಿ ಯೂತ್ ಮೂಮೆಂಟ್ ಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ಲಬೀದ್ಶಾಫಿ, ಜೆಐಎಚ್ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಡಾ.ಮುಹಮ್ಮದ್ ಸಾದ್ ಬೆಳಗಾಮಿ ಉಪಸ್ಥಿತರಿದ್ದರು.