ಕುಮಟಾ: ಕುಮಟಾ-ಶಿರಸಿ ರಸ್ತೆಯನ್ನು ಸಂಪೂರ್ಣ ಬಂದ್ ಆಗಲ್ಲ. ಕಾಮಗಾರಿ ಸಂದರ್ಭದಲ್ಲಿ ಲಘು ವಾಹನ ಸಂಚಾರಕ್ಕೆ ಮಾತ್ರ ಅನುಕೂಲ ಮಾಡಿಕೊಡುವುದಾಗಿ ಕುಮಟಾ ಉಪವಿಭಾಗಾಧಿಕಾರಿ ಅಜಿತ್ ಹೇಳಿದ್ದಾರೆ
ಜಿಲ್ಲಾಧಿಕಾರಿ ಡಾ. ಹರೀಶಕುಮಾರ ನಿರ್ದೇಶನದ ಮೇರೆಗೆ ಗುತ್ತಿಗೆದಾರರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಹಾಗೂ ಎಂಜಿನಿಯರ್ಗಳ ಸಭೆ ನಡೆಸಿದ ಬಳಿಕ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಇನ್ನೊಂದು ವಾರದಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ. ಕಾಮಗಾರಿ ಸಂದರ್ಭದಲ್ಲಿ ಲಘು ವಾಹನಗಳು ಸಂಚರಿಸಲು ಪಕ್ಕದಲ್ಲೇ ವ್ಯವಸ್ಥೆ ಮಾಡಿಕೊಡುವುದಾಗಿ ಗುತ್ತಿಗೆದಾರರು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ತಿಳಿಸಿದ್ದಾರೆ. ಹೀಗಾಗಿ ಸದ್ಯ ರಸ್ತೆಯನ್ನು ಸಂಪೂರ್ಣ ಮುಚ್ಚುವುದಿಲ್ಲ ಎಂದಿದ್ದಾರೆ.
ಭಾರೀ ಪ್ರಮಾಣದ ಸರಕುಗಳನ್ನು ಸಾಗಾಟ ಮಾಡುವ ವಾಹನಗಳು ಮಾತ್ರ ಪರ್ಯಾಯ ಮಾರ್ಗಗಳಲ್ಲೇ ಸಂಚರಿಸಲು ಸಂಚರಿಸಬೇಕಾಗುತ್ತದೆ ಎಂದಿದ್ದಾರೆ
ಸಮತಟ್ಟಾದ ಜಾಗದಲ್ಲಿ ಕಾಮಗಾರಿ ನಡೆಸುವ ವೇಳೆ ಲಘು ವಾಹನಗಳು ಸಂಚರಿಸಲು ಅಡ್ಡಿ ಇಲ್ಲ. ಆದರೆ, ಘಟ್ಟ ಪ್ರದೇಶ ಹಾಗೂ ಸೇತುವೆಗಳಿರುವ ಕಡೆಗಳಲ್ಲಿ ಕಾಮಗಾರಿ ಮಾಡುವ ವೇಳೆ ವಾಹನಗಳು ಸಂಚರಿಸಲು ಜಾಗದ ಕೊರತೆ ಉಂಟಾಗುವುದರಿಂದ ಮೊದಲೇ ಗುತ್ತಿಗೆದಾರರು ಹಾಗೂ ಎನ್ಎಚ್ಎನವರು ನಮಗೆ ಪತ್ರ ಬರೆಯಲಿದ್ದಾರೆ. ಆ ಪ್ರಕಾರ ಅರಣ್ಯ ಇಲಾಖೆ, ಪೊಲೀಸ್ ಹಾಗೂ ಇತರ ಅಧಿಕಾರಿಗಳೊಂದಿಗೆ ಜಂಟಿ ಪರಿಶೀಲನೆ ನಡೆಸಿ, ಲಘು ವಾಹನಗಳು ಓಡಾಡಲೂ ಸಾಧ್ಯವೇ ಇಲ್ಲವೆಂದಲ್ಲಿ ಮಾತ್ರ ಕಾಮಗಾರಿ ನಡೆಯುವಷ್ಟು ಭಾಗದ ರಸ್ತೆ ಬಂದ್ ಮಾಡಿ ಪ್ರಕಟಣೆ ನೀಡುತ್ತೇವೆ. ಆಗ ಸಮೀಪದ ಒಳ ರಸ್ತೆಗಳಿಂದ ಪರ್ಯಾಯ ಮಾರ್ಗ ಕಲ್ಪಿಸಲು ಯೋಜಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.