ದಿ ಗುಜರಾತ್ ಸ್ಟೋರಿ! 5 ವರ್ಷಗಳಲ್ಲಿ 40 ಸಾವಿರಕ್ಕೂ ಅಧಿಕ ಮಹಿಳೆಯರು ನಾಪತ್ತೆ; ವೇಶ್ಯಾವಾಟಿಕೆಗೆ ರವಾನಿಸುತ್ತಿರುವ ಶಂಕೆ; ಎನ್ ಸಿ ಆರ್ ಬಿ ದತ್ತಾಂಶ
ಅಹ್ಮದಾಬಾದ್: ಗುಜರಾತ್ ನಲ್ಲಿ ಕಳೆದ ಐದು ವರ್ಷಗಳ ಅವಧಿಯಲ್ಲಿ 40 ಸಾವಿರಕ್ಕೂ ಅಧಿಕ ಮಹಿಳೆಯರು ನಾಪತ್ತೆಯಾಗಿದ್ದಾರೆ. ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯೂರೋ (ಎನ್ಸಿಆರ್ಬಿ) ದತ್ತಾಂಶದ ಪ್ರಕಾರ 2016ರಲ್ಲಿ 7,015, 2017ರಲ್ಲಿ 7,712, 2018ರಲ್ಲಿ 9,246, 2019ರಲ್ಲಿ 9,268, 2020ರಲ್ಲಿ 8,290 ಮಹಿಳೆಯರು ನಾಪತ್ತೆಯಾಗಿದ್ದಾರೆ. ಅಂದರೆ, ಒಟ್ಟು 41,621 ಮಹಿಳೆಯರು ನಾಪತ್ತೆಯಾಗಿದ್ದಾರೆ.
ಇದಕ್ಕೆ ಅನುಗುಣವಾಗಿ 2021ರಲ್ಲಿ ರಾಜ್ಯ ಸರಕಾರ ವಿಧಾನ ಸಭೆಯಲ್ಲಿ ನೀಡಿದ ಹೇಳಿಕೆಯಲ್ಲಿ ಅಹ್ಮದಾಬಾದ್ ಹಾಗೂ ವಡೋದರಾದಲ್ಲಿ ಕೇವಲ ಒಂದು ವರ್ಷ (2019-20) ದಲ್ಲಿ 4,722 ಮಹಿಳೆಯರು ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದೆ.
ನಾಪತ್ತೆಯ ಕೆಲವು ಪ್ರಕರಣಗಳಲ್ಲಿ ಮಹಿಳೆಯರು ಹಾಗೂ ಬಾಲಕಿಯರನ್ನು ಗುಜರಾತ್ ಹೊರತುಪಡಿಸಿ ಇತರ ರಾಜ್ಯಗಳಿಗೆ ರವಾನಿಸಲಾಗುತ್ತಿದೆ ಹಾಗೂ ವೇಶ್ಯಾವಾಟಿಕೆಗೆ ತಳ್ಳಲಾಗುತ್ತಿದೆ. ಸುಧೀರ್ ಸಿಂಹ, ಗುಜರಾತ್ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ, ಮಾಜಿ ಐಪಿಎಸ್ ಅಧಿಕಾರಿ |
''ನಾಪತ್ತೆಯ ಕೆಲವು ಪ್ರಕರಣಗಳಲ್ಲಿ ಮಹಿಳೆಯರು ಹಾಗೂ ಬಾಲಕಿಯರನ್ನು ಸಾಂದರ್ಭಿಕವಾಗಿ ಗುಜರಾತ್ ಹೊರತುಪಡಿಸಿ ಇತರ ರಾಜ್ಯಗಳಿಗೆ ರವಾನಿಸುತ್ತಿರುವುದು ಹಾಗೂ ವೇಶ್ಯಾವಾಟಿಕೆಗೆ ಬಲವಂತ ಪಡಿಸುತ್ತಿರುವುದನ್ನು ನಾನು ಗಮನಿಸಿದ್ದೇನೆ” ಎಂದು ಮಾಜಿ ಐಪಿಎಸ್ ಅಧಿಕಾರಿ ಹಾಗೂ ಗುಜರಾತ್ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಸುಧೀರ್ ಸಿಂಹ ಅವರು ತಿಳಿಸಿದ್ದಾರೆ. “ಇದು ಪೊಲೀಸ್ ವ್ಯವಸ್ಥೆಯ ಸಮಸ್ಯೆ. ಅಂದರೆ, ನಾಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಇಂತಹ ಪ್ರಕರಣಗಳು ಕೊಲೆ ಪ್ರಕರಣಗಳಿಗಿಂತ ಹೆಚ್ಚು ಗಂಭೀರವಾದುದು. ಯಾಕೆಂದರೆ, ಮಗು ನಾಪತ್ತೆಯಾದರೆ, ಹೆತ್ತವರು ವರ್ಷಗಳ ಕಾಲ ಕಾಯಬೇಕಾಗುತ್ತದೆ. ಆದುದರಿಂದ ನಾಪತ್ತೆ ಪ್ರಕರಣವನ್ನು ಹತ್ಯೆ ಪ್ರಕರಣದಂತೆ ಕಟ್ಟುನಿಟ್ಟಿನಲ್ಲಿ ತನಿಖೆ ನಡೆಸಬೇಕು' ಎಂದು ಅವರು ಹೇಳಿದ್ದಾರೆ.
“ಬಾಲಕಿಯರು ನಾಪತ್ತೆಯಾಗುವುದಕ್ಕೆ 66 ಮಾನವ ಕಳ್ಳ ಸಾಗಾಟ ಮುಖ್ಯ ಕಾರಣ. ನಾಪತ್ತೆಯಾದ ಹೆಚ್ಚಿನ ಮಹಿಳೆಯರು ಮಾನವ ಸಾಗಾಟದ ಗುಂಪಿನಿಂದ ಅಪಹರಣಕ್ಕೆ ಒಳಗಾಗಿರುವುದನ್ನು ನಾನು ನನ್ನ ಅಧಿಕಾರಾವಧಿಯಲ್ಲಿ ಗಮನಿಸಿದ್ದೇನೆ. ಹೀಗೆ ಅಪಹರಿಸಲಾದ ಮಹಿಳೆಯರನ್ನು ಇನ್ನೊಂದು ರಾಜ್ಯಕ್ಕೆ ಸಾಗಾಟ ಮಾಡುತ್ತಾರೆ ಹಾಗೂ ಮಾರಾಟ ಮಾಡುತ್ತಾರೆ' ಎಂದು ಮಾಜಿ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಡಾ. ರಾಜನ್ ಪ್ರಿಯದರ್ಶಿ ಅವರು ತಿಳಿಸಿದ್ದಾರೆ.
“ನಾನು ಖೇಡಾ ಜಿಲ್ಲೆಯ ಪೊಲೀಸ್ ಅಧೀಕ್ಷಕನಾಗಿದ್ದಾಗ, ಜಿಲ್ಲೆಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಉತ್ತರಪ್ರದೇಶದ ವ್ಯಕ್ತಿಯೋರ್ವ ಬಡ ಬಾಲಕಿಯನ್ನು ಕರೆದೊಯ್ದು ತನ್ನ ರಾಜ್ಯದಲ್ಲಿ ಮಾರಾಟ ಮಾಡಿದ್ದ. ಅಲ್ಲಿ ಆಕೆಯನ್ನು ಕೃಷಿ ಕಾರ್ಮಿಕಳಾಗಿ ಕೆಲಸಕ್ಕೆ ನಿಯೋಜಿಸಿದ್ದ. ನಾವು ಆಕೆಯನ್ನು ರಕ್ಷಿಸಿದೆವು. ಆದರೆ, ಎಲ್ಲ ಪ್ರಕರಣಗಳಲ್ಲಿ ಹೀಗೆ ಮಾಡಲು ಸಾಧ್ಯವಾಗುವುದಿಲ್ಲ' ಎಂದು ಅವರು ಹೇಳಿದ್ದಾರೆ.