ಬೆಂಗಳೂರು : ಚುನಾವಣೆ ಪೂರ್ವದಲ್ಲಿ ಘೋಷಿಸಿದ್ದ 5 ಗ್ಯಾರಂಟಿಗಳನ್ನು ಜಾರಿಗೊಳಿಸಲು ಶುಕ್ರವಾರ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಸಮ್ಮತಿ ನೀಡಲಾಗಿದೆ.
ಕಾಂಗ್ರೆಸ್ ಪಕ್ಷ ಕರ್ನಾಟಕದ ಜನತೆಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದೆ.
ಚುನಾವಣೆ ಪೂರ್ವದಲ್ಲಿ ತಿಳಿಸಿದ ಹಾಗೆ ಗೃಹಜ್ಯೋತಿ ಯೋಜನೆಯಡಿ ವಾರ್ಷಿಕ ವಿದ್ಯುತ್ ಬಿಲ್ನ ಸರಾಸರಿಯಲ್ಲಿ 200 ಯೂನಿಟ್ ಒಳಗೆ ಬಳಸಿದ್ದರೆ ಅಂತಹ ಕುಟುಂಬಕ್ಕೆ ಉಚಿತ ವಿದ್ಯುತ್ ನೀಡಲಾಗುವುದು ಎಂದು ಸರ್ಕಾರ ಹೇಳಿದೆ. ವಾರ್ಷಿಕ ಸರಾಸರಿ ಮೇಲೂ ಕೂಡ 10%ಅನ್ನು ಉಚಿತ ಎಂದು ಪರಿಗಣಿಸಲಾಗಿದೆ ಎಂದು ಸಿಎಂ ಡಿಸಿಎಂ ತಿಳಿಸಿದ್ದಾರೆ.
ಗೃಹಲಕ್ಷ್ಮಿ ಗ್ಯಾರಂಟಿ: ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಯಾಗಲು ಮನೆಯ ಯಜಮಾನಿಯರು ಜೂನ್ 15ರಿಂದ ಜುಲೈ 15ರೊಳಗೆ ಅರ್ಜಿ ಸಲ್ಲಿಸಬೇಕು . ಮೊಬೈಲ್ ಸಂಖ್ಯೆ, ಬ್ಯಾಂಕ್ ಖಾತೆ, ಆಧಾರ್ ಕಾರ್ಡ್ ಮೊದಲಾದ ವಿವರಗಳನ್ನು ನೀಡಬೇಕು. ಆಗಸ್ಟ್ 15ರಿಂದ ಈ ಯೋಜನೆ ಜಾರಿಗೆ ಬರಲಿದ್ದು, ಮನೆಯ ಯಜಮಾನಿ ಖಾತೆಗೆ ನೇರ 2000 ರೂ. ಜಮಾವಣೆಯಾಗಲಿದೆ. ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್ ಹೊಂದಿರುವವರು, ಸಾಮಾಜಿಕ ಭದ್ರತಾ ಪಿಂಚಣಿ ಪಡೆಯುವವರೂ ಕೂಡ ಈ ಯೋಜನೆಯ ಫಲಾನುಭವಿಗಳು ಎಂದು ಸರ್ಕಾರ ತಿಳಿಸಿದೆ.
ಶಕ್ತಿ ಗ್ಯಾರಂಟಿ: ಜೂನ್ 11ರಿಂದ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ನೀಡಲಾಗಿದ್ದು, ಸಿಟಿ ಬಸ್ಗಳು ಸೇರಿದಂತೆ ರಾಜ್ಯ ಸಾರಿಗೆಯ ಎಲ್ಲ ಬಸ್ಗಳಲ್ಲೂ ಮಹಿಳೆಯರು ಉಚಿತ ಪ್ರಯಾಣ ಮಾಡಬಹುದು. ಆದರೆ, ರಾಜ್ಯ ಸಾರಿಗೆ ಬಸ್ಗಳಲ್ಲೇ ಹೊರ ರಾಜ್ಯಗಳಿಗೆ ಪ್ರಯಾಣಿಸಲು ಅವಕಾಶವಿಲ್ಲ ಎಂದು ತಿಳಿಸಲಾಗಿದೆ.
ಅನ್ನ ಭಾಗ್ಯ: ಈಗಾಗಲೇ ಪ್ರಸಕ್ತ ತಿಂಗಳ ಪಡಿತರ ವಿಲೇವಾರಿಯಾಗಿರುವ ಕಾರಣ, ಜುಲೈ 1ರಿಂದ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ದಾರರಿಗೆ ಮಾಸಿಕ 10 ಕೆಜಿ ಆಹಾರ ಧಾನ್ಯ ವಿತರಿಸಲಾಗುತ್ತದೆ.
ಯುವನಿಧಿ: 2022-23ರ ಶೈಕ್ಷಣಿಕ ವರ್ಷದಲ್ಲಿ ತೇರ್ಗಡೆ ಹೊಂದಿದವರಿಗೆ 6 ತಿಂಗಳ ಗ್ರೇಸ್ ಪಿರಿಯಡ್ ಇರುತ್ತದೆ. ಆರು ತಿಂಗಳ ನಂತರವೂ ಕೆಲಸ ಸಿಗದಿದ್ದರೆ 24 ತಿಂಗಳುಗಳ ಕಾಲ ಪಧವೀಧರರಿಗೆ ಮಾಸಿಕ 3ಸಾವಿರ ರೂ, ಡಿಪ್ಲೊಮಾ ಪದವೀಧರರಿಗೆ 1500 ರೂ. ನೀಡಲಾಗುತ್ತದೆ. 6 ತಿಂಗಳ ಒಳಗೆ ಖಾಸಗಿ/ಸರ್ಕಾರಿ ಕೆಲಸ ದೊರೆತರೆ ಅಥವಾ ಅರ್ಜಿ ಸಲ್ಲಿಸಿದ ನಂತರ ಕೆಲಸ ಸಿಕ್ಕರೂ ಕೂಡ ಅಂತಹವರಿಗೆ ಈ ಯೋಜನೆ ಅನ್ವಯವಾಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.