ಕಾರವಾರ: ಮುಂಜಾಗೃತ ಕ್ರಮವಾಗಿ ವಿವಿಧ ಕ್ರಮಗಳನ್ನು ಕೈಗೊಂಡು ಮಂಗನ ಕಾಯಿಲೆಯನ್ನು ತಡೆಗಟ್ಟುವ ಕಾರ್ಯವನ್ನು ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಮಾಡಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ. ರೋಶನ್ ಅವರು ಸೂಚಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾಗಿದ್ದ, ಮಂಗನ ಕಾಯಿಲೆ ಕುರಿತ ಅಂತರ್ ಇಲಾಖಾ ತರಬೇತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ, ಕಳೆದ ಜನವರಿಯಿಂದ 413 ಮಂಗಗಳ ಸಾವು ಉಂಟಾಗಿದ್ದು, ಅವುಗಳಲ್ಲಿ 62 ಮಂಗಗಳ ಮರಣ ಪರೀಕ್ಷೆ ಮಾಡಲಾಗಿರುತ್ತದೆ ಇದರಲ್ಲಿ 6 ಪೊಸಿಟಿವ್ ಎಂಬ ವರದಿ ಬಂದಿದ್ದು, 3 ಮಾನವ ಸಾವು ಉಂಟಾಗಿರುತ್ತದೆ. ಈ ಹಿನ್ನಲೆಯಲ್ಲಿ ಈ ವರ್ಷ ಗ್ರಾಮ ಪಂಚಾಯತ್, ಪಶುಸಂಗೋಪನಾ ಇಲಾಖೆ, ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಮುಂಜಾಗೃತಾ ಕ್ರಮಗಳನ್ನು ಕೈಗೊಂಡು ಮಂಗನ ಕಾಯಿಲೆಯನ್ನು ನಿಯಂತ್ರಿಸುವ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಬೇಕು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಾಮ ಪಂಚಾಯತ್ ಮತ್ತು ಕಂದಾಯ ಇಲಾಖೆಯವರು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವೈದ್ಯ ಡಾ. ವಿನೋದ ಭೂತೆ ಅವರು ಮಾತನಾಡಿ ಮಂಗನ ಕಾಯಿಲೆಗೆ ಕಾಡಿನಲ್ಲಿರುವ ವೈರಾಣು ಹೊಂದಿದ ಉಣ್ಣೆಗಳು ಕಚ್ಚುವದರಿಂದ ಮಾತ್ರ ಬರುತ್ತದೆ. ಈ ಕಾಯಿಲೆಯು ಮನುಷ್ಯನಿಂದ ಮನುಷ್ಯನಿಗೆ ಹರಡುವಂತಹದ್ದಲ್ಲ. ಕಾಡಿನಲ್ಲಿ ಸತ್ತ ಮಂಗಗಳು ಕಾಣುವುದೇ ಈ ಕಾಯಿಲೆಯ ಮುನ್ಸೂಚನೆಯಾಗಿರುತ್ತದೆ ಎಂದು ಹೇಳಿದರು.
ಸತತ ಎಂಟು-ಹತ್ತು ದಿನಗಳವರೆಗೆ ಬಿಡದೇ ಬರುವ ಜ್ವರ, ವಿಪರೀತ ತಲೆನೋವು, ಸೊಂಟನೋವು, ಕೈ ಕಾಲು ನೋವು, ನಿಶ್ಯಕ್ತಿ, ಕಣ್ಣು ಕೆಂಪಗಾಗುವುದು, ಜ್ವರ ಬಂದ 2 ವಾರದ ನಂತರ ಮೂಗು, ಬಾಯಿ, ಗುದದ್ವಾರದಿಂದ ರಕ್ತಸ್ರಾವವಾಗುವಂತಹ ಸಂಭವವಿರುತ್ತದೆ. ಸನ್ನಿಪಾತ, ಮೆದುಳಿನ ಹೊಂದಿಕೆಯ ಜ್ವರದ ಲಕ್ಷಣಗಳು ಈ ಸಂದರ್ಭದಲ್ಲಿ ಕಂಡುಬರುವುದು ಈ ರೋಗದ ಮುಖ್ಯ ಲಕ್ಷಣಗಳಾಗಿವೆ ಎಂದು ಮಾಹಿತಿ ನೀಡಿದರು.
ಮುಂಜಾಗೃತವಾಗಿ ಮಂಗ ಸತ್ತಿರುವುದು ಕಂಡೊಡನೆ ಸ್ಥಳಿಯ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಆರೋಗ್ಯಾಧಿಕಾರಿಗಳಿಗೆ ತಿಳಿಸಬೇಕು. ಮಂಗಗಳು ಸಾಯುತ್ತಿರುವ ಕಾಡಿನಲ್ಲಿ ಸಂಚರಿಸುವಾಗ ಮೈ ತುಂಬಾ ಬಟ್ಟೆ ಧರಿಸಿ, ಆರೋಗ್ಯ ಇಲಾಖೆಯಿಂದ ವಿತರಿಸುವ ಡಿ.ಎಂ.ಪಿ. ತೈಲವನ್ನು ಕೈಕಾಲುಗಳಿಗೆ ಲೇಪಿಸಿಕೊಂಡು ಹೋಗಬೇಕು. ಕಾಡಿನಿಂದ ಬಂದ ನಂತರ ಸೋಪು ಹಚ್ಚಿ ಬಿಸಿ ನೀರಿನಿಂದ ಸ್ನಾನ ಮಾಡಬೇಕು, ಬಟ್ಟೆಗಳನ್ನು ಬಿಸಿ ನೀರಿನಿಂದ ಸೋಪು ಹಚ್ಚಿ ತೊಳೆಯಬೇಕು ಎಂದು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳಿಸಿದರು.
ಈ ಕಾಯಿಲೆಗೆ ಲಸಿಕೆ ಲಭ್ಯವಿದ್ದು ಲಸಿಕೆಯಿಂದ ಯಾವುದೇ ದುಷ್ಟಪರಿಣಾಮಗಳು ಇರುವದಿಲ್ಲ ಆದರೆ ಗರ್ಬಿಣಿ ಸ್ತ್ರೀಯರು ಈ ಲಸಿಕೆಯನ್ನ ಹಾಕಿಸಿಕೊಳ್ಳಬಾರದೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾರವಾರ ವಿಭಾಗದ ಡಿ ಎಚ್ ಒ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.