ಹೊಸದಿಲ್ಲಿ: ಸಾರ್ವತ್ರಿಕ ಚುನಾವಣೆಗಳಿಗೆ ಮುನ್ನ ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಜಾರಿ ನಿರ್ದೇಶನಾಲಯ (ಈ.ಡಿ.)ವು ಅವರ ವಿರುದ್ಧ ದಾಖಲಿಸಿದ್ದ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ರದ್ದುಗೊಳಿಸಿದೆ.
ಶಿವಕುಮಾರ್ ಅಕ್ರಮ ಹಣ ವರ್ಗಾವಣೆ ಆರೋಪದ ಪ್ರಕರಣದಲ್ಲಿ ಈ.ಡಿ.ತನಗೆ ನೀಡಿದ್ದ ಸಮನ್ಸನ್ನು ರದ್ದುಗೊಳಿಸಲು ನಿರಾಕರಿಸಿದ್ದ ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶದ ವಿರುದ್ಧ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದರು.
ನ್ಯಾಯಮೂರ್ತಿಗಳಾದ ಸೂರ್ಯಕಾಂತ ಮತ್ತು ಕೆ.ವಿ.ವಿಶ್ವನಾಥನ್ ಅವರ ಪೀಠವು ಈ.ಡಿ.ಪ್ರಕರಣವನ್ನು ರದ್ದುಗೊಳಿಸುವ ಮೂಲಕ ಶಿವಕುಮಾರ್ ಅವರಿಗೆ ನಿರಾಳತೆಯನ್ನು ಒದಗಿಸಿದೆ. ಪ್ರಕರಣ 2017,ಆಗಸ್ಟ್ನಷ್ಟು ಹಿಂದಿನದಾಗಿದೆ. ಶಿವಕುಮಾರ್, ಅವರ ಉದ್ಯಮ ಸಹವರ್ತಿಯೆನ್ನಲಾದ ಮದ್ಯದ ವ್ಯಾಪಾರಿ ಸಚಿನ್ ನಾರಾಯಣ(45) ಮತ್ತು ಇನ್ನೋರ್ವ ಸಹವರ್ತಿ ಐಷಾರಾಮಿ ಬಸ್ ಗಳ ಒಡೆಯ ಸುನೀಲ್ಕುಮಾರ್ ಶರ್ಮಾ(46), ದಿಲ್ಲಿಯ ಕರ್ನಾಟಕ ಭವನದ ಉದ್ಯೋಗಿ ಎ.ಹನುಮಂತಯ್ಯ (49) ಮತ್ತು ಕರ್ನಾಟಕ ಭವನದಲ್ಲಿ ಕೇರ್ ಟೇಕರ್ ಆಗಿ ನಿಯೋಜಿತರಾಗಿದ್ದ ಮಾಜಿ ರಾಜ್ಯ ಸರಕಾರಿ ನೌಕರ ರಾಜೇಂದ್ರ ಎನ್. (79) ಅವರ ವಿರುದ್ಧ ತೆರಿಗೆ ವಂಚನೆ ಆರೋಪದ ತನಿಖೆಯ ಅಂಗವಾಗಿ ಆದಾಯ ತೆರಿಗೆ ಇಲಾಖೆಯು ದಿಲ್ಲಿಯ ಹಲವಾರು ಕಡೆಗಳಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸಿತ್ತು.
ಈ ಸಂದರ್ಭ ಆದಾಯ ತೆರಿಗೆ ಇಲಾಖೆಯು 8.59 ಕೋ. .ಗೂ ಅಧಿಕ ಹಣವನ್ನು ವಶಪಡಿಸಿಕೊಂಡಿತ್ತು. ಈ ಹಣ ತಮ್ಮ ಕೃಷಿ ಆದಾಯ ಮತ್ತು ಉದ್ಯಮ ಆದಾಯವಾಗಿದೆ ಎಂದು ಅನುಕ್ರಮವಾಗಿ ಶಿವಕುಮಾರ್ ಮತ್ತು ಶರ್ಮಾ ಪ್ರತಿಪಾದಿಸಿದ ಬಳಿಕ ಈಗ 41 ಲ.ಗೂ ಅಧಿಕ ಹಣವನ್ನು ಶಿವಕುಮಾರ್ ಅವರಿಂದ ಮತ್ತು 7.58 ಲ.ಕ್ಕೂ ಅಧಿಕ ಹಣವನ್ನು ಶರ್ಮಾ ಅವರಿಂದ ಬರಬೇಕಿದ್ದ ತೆರಿಗೆ ಬಾಕಿಗಳಿಗೆ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ. ಬಳಿಕ ಆದಾಯ ತೆರಿಗೆ ಇಲಾಖೆಯು ಎಲ್ಲ ಆರೋಪಿಗಳ ವಿರುದ್ದ ತೆರಿಗೆ ವಂಚನೆ ಆರೋಪಗಳಲ್ಲಿ ಬೆಂಗಳೂರಿನ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿಯನ್ನು ಸಲ್ಲಿಸಿತ್ತು. ಇದರ ಆಧಾರದಲ್ಲಿ ಈ.ಡಿ.2018ರಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿಕೊಂಡಿತ್ತು.