ಮಂಡ್ಯ: ಡಾ. ಎಂ. ಹೆಚ್. ಅಂಬರೀಶ್ ಅವರು ಕಾರ್ಯನಿರ್ವಹಿಸುತ್ತಿದ್ದ ಕಛೇರಿಯಲ್ಲೇ, ನನಗೂ ಕೂಡ ಕಾರ್ಯನಿರ್ವಹಿಸಲು ಅವಕಾಶ ಸಿಕ್ಕದೆ. ಇದು ನಿಜವಾಗಿಯೂ ನನ್ನ ಭಾಗ್ಯ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಸಂಸದೆಯಾದ ಸುಮಲತಾ ಅಂಬರೀಶ್ ಅವರು ಹೇಳಿದರು.
ನಗರದ ಜಿಲ್ಲಾಡಳಿತ ಕಛೇರಿಯಲ್ಲಿ ಸುಮಲತಾ ಅಂಬರೀಶ್ ಅವರ ನೂತನ ಕಛೇರಿಯನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು ಜಿಲ್ಲೆಯಲ್ಲಿರುವ ಜನ ಸಾಮಾನ್ಯರ ಸಮಸ್ಯೆಗಳು ಹಾಗೂ ತಾಲ್ಲೂಕುವಾರು ಯಾವ ಯಾವ ಕೆಲಸಗಳು ನಡೆಯುತ್ತಿದೆ ಎಂದು ತಿಳಿದುಕೊಳ್ಳಲು ಪ್ರತಿವಾರ ಈ ಕಛೇರಿಯಲ್ಲೇ ಸಭೆ ನಡೆಸಲಾಗುತ್ತದೆ. ನಾನು ಒಂದೇ ಕಡೆ ಇದ್ದರೆ ಎಲ್ಲರೂ ಇಲ್ಲಿಗೆ ಬರುತ್ತಾರೆ ಹೀಗಾಗಿ ವಾರದಲ್ಲಿ ಒಂದು ಅಥವಾ ಎರಡು ದಿನ ಮಂಡ್ಯ ಕಛೇರಿಯಲ್ಲಿ ಇದ್ದು ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಗಮನಹರಿಸಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಗಣಿಗಾರಿಕೆ ಬಗ್ಗೆ ಮಾತನಾಡಿದ ಅವರು, ಕೆ.ಆರ್.ಎಸ್. ಡ್ಯಾಮ್ಗೆ ಯಾವುದೇ ರೀತಿ ತೊಂದರೆಯಾಗಬಾರದು ಎಂಬುದೇ ನಮ್ಮ ಉದ್ದೇಶವಾಗಿರುವುದರಿಂದ, ಅದರ ಸುರಕ್ಷತೆಗೆ ಗಮನಹರಿಸಿದ್ದೇವೆ. ಜಿಲ್ಲೆಯಲ್ಲಿರುವ ಕೆರೆ-ಕಟ್ಟೆಗಳಿಗೆ ಒಂದೇ ಬಾರಿ ನೀರು ತುಂಬಿಸಲು ಸಾಧ್ಯವಿಲ್ಲ. ಒಂದಾದ ನಂತರ ಇನ್ನೊಂದು ಕೆರೆಯನ್ನ ಭರ್ತಿಮಾಡಲಾಗುತ್ತದೆ. ಕೆ.ಆರ್.ಎಸ್.ನಲ್ಲಿ ಬೇಕಾದಷ್ಟು ನೀರು ಇರುವುದರಿಂದ ಎಲ್ಲಾ ಕೆರೆಗಳಿಗೆ ನೀರು ತುಂಬಿಸಲಾಗುವುದು ಎಂದರು.
ವಾಹನಚಾಲಕರು ಟ್ರಾಫಿಕ್ ನಿಯಾಮವಳಿಯನ್ನು ಪಾಲಿಸಲಿ, ವಾಹನಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳಲಿ ಹಾಗೂ ಅವರ ಜೀವಕ್ಕೆ ಯಾವುದೇ ರೀತಿ ಕುತ್ತುಬರಬಾರದು ಎಂದು ಪೊಲೀಸರು ಹೆಚ್ಚು ದಂಡವನ್ನು ವಿಧಿಸುತ್ತಿದ್ದಾರೆ ವಿನಃ ಜನಸಾಮಾನ್ಯರಿಂದ ಹೆಚ್ಚು ಹಣವನ್ನು ಪಡೆಯಬೇಕು ಎಂದಲ್ಲ. ನಾವು ಬೇರೆ ದೇಶಗಳಿಗೆ ಅಥವಾ ಹೊರ ರಾಜ್ಯಕ್ಕೆ ಹೋದಾಗ ಅಲ್ಲಿನ ನಿಯಮಗಳನ್ನು ಪಾಲಿಸುತ್ತೇವೆ ಆದರೆ ನಮ್ಮ ರಾಜ್ಯದಲ್ಲಿ ಇದ್ದಾಗ ಯಾವುದೇ ನಿಯಮಗಳನ್ನು ಪಾಲಿಸುವುದಿಲ್ಲ. ಹೀಗಾಗಿ ಇಂತಹ ಮನಸ್ಥಿತಿ ನಮ್ಮಿಂದ ದೂರವಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಯಾಲಕ್ಕಿಗೌಡ ಹಾಗೂ ಇತರರು ಉಪಸ್ಥಿತರಿದ್ದರು.