ನೂತನ ರಾಷ್ಟ್ರೀಯ ಶಿಕ್ಷಣ ನೀತಿ -2020ನ್ನು ಚಳಿಗಾಲದ ಅಧಿವೇಶನದಲ್ಲಿ ಚರ್ಚೆಗೆ ಒಳಪಡಿಸುವಂತೆ ಎಸ್.ಐ.ಓ ರಾಜ್ಯಾಧ್ಯಕ್ಷ ನಿಹಾಲ್ ಕಿದಿಯೂರು ಸರ್ಕಾರಕ್ಕೆ ಆಗ್ರಹ
ಭಟ್ಕಳ: ಒಕ್ಕೂಟ ವ್ಯವಸ್ಥೆಯ ಅಡಿಯಲ್ಲಿ ರಚಿತವಾಗಿರುವ ಪ್ರಜಾಪ್ರಭುತ್ವ ಭಾರತ ದೇಶದಲ್ಲಿ ಸರ್ಕಾರವು ಯಾವುದೇ ರೀತಿಯ ಕಾನೂನು ಅಥವಾ ನೀತಿಯನ್ನು ಜಾರಿ ಮಾಡುವ ಮುನ್ನ ಅದನ್ನು ದೇಶದ ಪ್ರಜೆಗಳ ಜನಪ್ರತಿನಿಧಿಯಾಗಿರುವ ಶಾಸಕರ ನಡುವೆ ಮುಕ್ತ ಚರ್ಚೆ ಮತ್ತು ವಿಮರ್ಶೆಗೆ ಅವಕಾಶ ಒದಗಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ ಎಂದು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ ಕರ್ನಾಟಕ ಘಟಕದ ರಾಜ್ಯಧ್ಯಕ್ಷ ನಿಹಾಲ್ ಕಿದಿಯೂರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆ ಜಾರಿಗೊಳಿಸಿರುವ ಅವರು, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಚರ್ಚಿಸದೆ ಕೇಂದ್ರ ಬಿಜೆಪಿ ಸರ್ಕಾರದ ಸಚಿವ ಸಂಪುಟವು ಏಕಪಕ್ಷೀಯವಾಗಿ ಅಂಗೀಕರಿಸಿ ಜಾರಿಗೊಳಿಸಲು ಹೊರಟಿರುವುದು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ ಹಾಗೂ ಪ್ರಜಾಸತ್ತಾತ್ಮಕ ಮೌಲ್ಯಗಳನ್ನೂ ಈ ಮೂಲಕ ಕಡೆಗಣಿಸಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದಿದ್ದಾರೆ.
ಎಸ್.ಐ.ಓ ಕಾರ್ಯಕರ್ತರು ರಾಜ್ಯಾದ್ಯಂತ ಜನಪ್ರತಿನಿಧಿಗಳಿಗೆ ಭೇಟಿ ಮಾಡಿ ಚಳಿಗಾಲದ ಅಧಿವೇಶನದಲ್ಲಿ ವಿಧಾನಸಭೆ ಮತ್ತು ವಿಧಾನಪರಿಷತ್ ಎರಡರಲ್ಲೂ ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತು ಅದರ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸಬೇಕೆಂದು ಹಾಗೂ ಸರ್ಕಾರಕ್ಕೆ ಒತ್ತಾಯ ಮಾಡಬೇಕೆಂದು ಪತ್ರದ ಮೂಲಕ ವಿನಂತಿ ಮಾಡಲಾಯಿತು. ಇದರೊಂದಿಗೆ ರಾಜ್ಯದ ಪ್ರಮುಖ ತಾಲೂಕು ಮಟ್ಟದಲ್ಲಿ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಲಾಗಿತ್ತು, ಹಾಗೂ ರಾಜ್ಯದ ಪ್ರಮುಖ ಜಿಲ್ಲೆಗಳಾದ ಧಾರವಾಡ, ದಾವಣಗೆರೆ, ಉಡುಪಿ ಮತ್ತು ಕಲಬುರ್ಗಿ ನಗರಗಳಲ್ಲಿ ಪತ್ರಿಕಾ ಗೋಷ್ಠಿಯನ್ನು ನಡೆಸಿ ಮಾಧ್ಯಮ ಮಿತ್ರರ ಮೂಲಕ ವಿಷಯವನ್ನು ಸರ್ಕಾರಕ್ಕೆ ತಲುಪಿಸುವ ಕೆಲಸ ಮಾಡಲಾಗಿದೆ.
ಕರ್ನಾಟಕ ರಾಜ್ಯ ವಿಧಾನಸಭೆ ಮತ್ತು ವಿಧಾನಪರಿಷತ್ ನ ಸದಸ್ಯರುಗಳಿಗೆ ಪ್ರತ್ಯೇಕ ಈ-ಮೇಲ್ ಮೂಲಕ ಪತ್ರವನ್ನು ತಲುಪಿಸಿ ಮಾನ್ಯ ಮುಖ್ಯಮಂತ್ರಿಗಳು ಮತ್ತು ಸದನದ ಸಭಾಧ್ಯಕ್ಷರಿಗೆ ಒತ್ತಡ ತರಬೇಕೆಂದು ಹಾಗೂ ಸದನದಲ್ಲಿ ಈ ಬಗ್ಗೆ ದ್ವನಿ ಎತ್ತಬೇಕು ಎಂದು ವಿನಂತಿಸಿಕೊಳ್ಳಲಾಗಿದೆ. ರಾಜ್ಯ ಸರ್ಕಾರದ ಸಚಿವ ಸಂಪುಟದ ಎಲ್ಲ ಸಚಿವರುಗಳಿಗೆ ಸರ್ಕಾರದ ಅಧಿಕೃತ ಈ-ಮೇಲ್ ವಿಳಾಸಕ್ಕೆ ಪತ್ರವನ್ನು ಕಳುಹಿಸಿ, ರಾಷ್ಟ್ರೀಯ ಶಿಕ್ಷಣ ನೀತಿ -2020ನ್ನು ಸೆಪ್ಟೆಂಬರ್ 21 ರಿಂದ 30ರ ವರೆಗೆ 8 ದಿನಗಳ ಕಾಲ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ನೀತಿಯನ್ನು ಚರ್ಚೆಗೆ ಒಳಪಡಿಸಿ ಸಮಯ ನಿಗದಿ ಪಡಿಸಲು ಆಗ್ರಹಿಸಲಾಗಿದೆ.
ನಾಳೆಯಿಂದ ನಡೆಯುವ 15 ನೇ ಅಧಿವೇಶನದ ಸಂದರ್ಭದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯ ಸರ್ಕಾರವು ಅಧಿವೇಶನದಲ್ಲಿ ಮುಕ್ತ ಚರ್ಚೆ-ವಿಮರ್ಶೆಗೆ ಅನುವು ಮಾಡಿಕೊಡಬೇಕೆಂದು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ, ಕರ್ನಾಟಕವು ಆಗ್ರಹಿಸುತ್ತದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.