ಎಬಿವಿಪಿ ಅಧ್ಯಕ್ಷನಿಂದ 40 ಯುವತಿಯರ ಅಶ್ಲೀಲ ವೀಡಿಯೊ ಚಿತ್ರೀಕರಣ; ಕಿಮ್ಮನೆ ರತ್ನಾಕರ ಆರೋಪ
ಶಿವಮೊಗ್ಗ: ತೀರ್ಥಹಳ್ಳಿಯ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿನಿಯರ ಅಶ್ಲೀಲ ವಿಡಿಯೊಗಳನ್ನು ಇಲ್ಲಿನ ಎಬಿವಿಪಿ ಅಧ್ಯಕ್ಷ ಮಾಡಿದ್ದಾನೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ಆರೋಪಿಸಿದ್ದಾರೆ.
ತೀರ್ಥಹಳ್ಳಿ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿನಿಯರ ಅಶ್ಲೀಲ ವೀಡಿಯೊಗಳನ್ನು ವಾಟ್ಸ್ಆ್ಯಪ್ನಲ್ಲಿ ವೈರಲ್ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಬುಧವಾರ ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಎಬಿವಿಪಿ ಅಧ್ಯಕ್ಷನ ಕೃತ್ಯ ಖಂಡಿಸಿ ಆರಗ ಜ್ಞಾನೇಂದ್ರ ಪ್ರತಿಭಟನೆ ಮಾಡಬೇಕಿತ್ತು. ಈ ಕೃತ್ಯ ಎಸಗಿದ ಆರೋಪಿ ಸ್ಥಾನದಲ್ಲಿ ಅಎಬಿವಿಪಿ ಅಧ್ಯಕ್ಷನ ಬದಲು ಕಾಂಗ್ರೆಸ್ ಅಥವಾ ಮುಸ್ಲಿಮ್ ವ್ಯಕ್ತಿ ಇದ್ದಿದ್ದರೆ ಇಂದು ಶಿವಮೊಗ್ಗ ಬಂದ್, ನಾಳೆ ಕರ್ನಾಟಕ ಬಂದ್ ಮಾಡುತ್ತಿದ್ದರು ಎಂದು ಹೇಳಿದರು.
ಅಶ್ಲೀಲ ವೀಡಿಯೊ ಚಿತ್ರೀಕರಣದ ಆರೋಪಿಯ ಜೊತೆ ಆರಗ ಜ್ಞಾನೇಂದ್ರ ತೆರಳಿ ಇಲ್ಲಿನ ಪದವಿ ಕಾಲೇಜಿನಲ್ಲಿ ಮತ ಯಾಚನೆ ಮಾಡಿದ್ದರು. ಆದರೆ ಈಗ ಆತ ಎಬಿವಿಪಿ ಅಧ್ಯಕ್ಷ ಅಲ್ಲ ಎಂದು ಜ್ಞಾನೇಂದ್ರ ಹೇಳುತ್ತಿದ್ದಾರೆ. ಇದಕ್ಕೆ ನಮ್ಮ ಬಳಿ ಸಾಕ್ಷಿ ಇದೆ. ಈ ಪ್ರಕರಣದ ಸಂಬಂಧ ತೀರ್ಥಹಳ್ಳಿಯಲ್ಲಿ ಪ್ರತಿಭಟನೆ ನಡೆಸುವುದಾಗಿ ಕಿಮ್ಮನೆ ರತ್ನಾಕರ ಹೇಳಿದರು.