ಮುಂಬೈ:ನೌಕಾಪಡೆಯ ನಿವೃತ್ತ ಹಿರಿಯ ಅಧಿಕಾರಿಯೋರ್ವರಿಗೆ ಶಿವಸೇನೆ ಕಾರ್ಯಕರ್ತರು ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ಬಿಜೆಪಿ ಎಂಎಲ್ಎ ಅತುಲ್ ಭಟ್ಕಲ್ಕರ್ ಆರೋಪಿಸಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಕಾರ್ಟೂನ್ನ್ನು ವಾಟ್ಸ್ಆ್ಯಪ್ನಲ್ಲಿ ಫಾರ್ವರ್ಡ್ ಮಾಡುತ್ತಿದ್ದಾರೆ ಎಂದು ಶಿವಸೇನೆ ಎಂಟು ಮಂದಿ ಗೂಂಡಾಗಳು ಸೇರಿ ನಿವೃತ್ತ ನೇವಿ ಅಧಿಕಾರಿ ಮದನ್ ಶರ್ಮಾ ಅವರನ್ನು ಥಳಿಸಿದ್ದಾರೆ ಎಂದು ಹೇಳಿದ್ದಾರೆ.
ಕಂಡಿವಲಿ ಪೂರ್ವದ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಶಿವಸೇನೆ ಶಾಖಾ ಪ್ರಮುಖ್ ಮದನ್ ಶರ್ಮಾ ಅವರಿಗೆ ಕರೆ ಮಾಡಿ, ಮನೆಯಿಂದ ಈಚೆ ಬರುವಂತೆ ತಿಳಿಸಿದ್ದಾರೆ. ಮದನ್ ಶರ್ಮಾ ಅವರು ಹೊರಗೆ ಬರುತ್ತಿದ್ದಂತೆ ಅವರನ್ನು ಥಳಿಸಿದ್ದಾರೆ. ಇದರಿಂದ ಶರ್ಮಾ ಅವರ ಕಣ್ಣಿಗೆ ಗಂಭೀರ ಗಾಯವಾಗಿದೆ ಎಂದು ಅತುಲ್ ಅವರು ತಿಳಿಸಿದ್ದಾರೆ.
ಅಷ್ಟೇ ಅಲ್ಲ, ಮಹಾರಾಷ್ಟ್ರ ಮುಖ್ಯಮಂತ್ರಿ ಮತ್ತು ಶಿವಸೇನೆ ಮುಖ್ಯಸ್ಥರಿಗೆ ಒಂದು ಎಚ್ಚರಿಕೆ ನೀಡುತ್ತಿದ್ದೇನೆ. ನಿಮ್ಮ ಗೂಂಡಾಗಿರಿಗೆ ಹೆದರಿ ಮಹಾರಾಷ್ಟ್ರದ ಜನರು ಖಂಡಿತ ಸುಮ್ಮನೆ ಕೂರುವುದಿಲ್ಲ ಎಂಬುದು ನೆನಪಿರಲಿ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ನಿವೃತ್ತ ಅಧಿಕಾರಿಗೆ 66 ವರ್ಷ ವಯಸ್ಸಾಗಿದ್ದು, ಅವರ ಪುತ್ರಿಯೂ ಕೂಡ, ತನ್ನ ತಂದೆಯ ಮೇಲೆ ಹಲ್ಲೆ ನಡೆದಿದ್ದಾಗಿ ಆರೋಪಿಸಿದ್ದಾರೆ.
ತಮ್ಮ ಮೇಲೆ ಸುಮಾರು 12 ಮಂದಿ ಹಲ್ಲೆ ನಡೆಸಿದ್ದಾಗಿ ಮದನ್ ಶರ್ಮಾ ಹೇಳಿದ್ದಾರೆ. ಅಲ್ಲಿಗೆ ಬಂದ ಪೊಲೀಸರೂ ನನ್ನನ್ನೇ ಬಂಧಿಸಲು ಮುಂದಾದರು. ಆದರೆ ಬಿಜೆಪಿ ಶಾಸಕ ಅತುಲ್ ಮತ್ತು ರಾಣಿ ದ್ವಿವೇದಿ ಸಹಾಯ ಮಾಡಿದರು ಎಂದು ತಿಳಿಸಿದ್ದಾರೆ. ಶಿವಸೇನೆ ಕಾರ್ಯಕರ್ತರ ವಿರುದ್ಧ ಸಂತ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.