ಶಿರಾಲಿ ಖಾಸಗಿ ಬಸ್ ಡಿಕ್ಕಿ : ಬೈಕ್ ಸವಾರ ಸ್ಥಳದಲ್ಲಿ ಸಾವು
ಭಟ್ಕಳ : ಇಲ್ಲಿನ ಶಿರಾಲಿಯ ವೃತ್ತದಲ್ಲಿ ರವಿವಾರ ರಾತ್ರಿ ಖಾಸಗಿ ಬಸ್ಸೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪಿದ್ದಾನೆ.
ಮಂಕಿಯ ಸಾರಸ್ವತಕೇರಿಯ ಸಂತೋಷ ಮಾದೇವ ಆಚಾರಿ (33) ಎಂಬಾತನೇ ಸಾವನ್ನಪ್ಪಿದವನಾಗಿದ್ದಾನೆ. ಈತ ರವಿವಾರ ರಾತ್ರಿ ಭಟ್ಕಳದಿಂದ ಮುರ್ಡೇಶ್ವರದ ಕಡೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಮುರ್ಡೇಶ್ವರದಿಂದ ಭಟ್ಕಳಕ್ಕೆ ಬರುತ್ತಿದ್ದ ಖಾಸಗಿ ಬಸ್ಸು ಶಿರಾಲಿಯಲ್ಲಿ ಡಿಕ್ಕಿ ಹೊಡೆದಿದೆ. ಡಿಕ್ಕಿಗೆ ಸಂತೋಷ ಆಚಾರಿ ಗಂಭೀರ ಗಾಯಗೊಂಡು ಸ್ಥಳದಲ್ಲೇ ಅಸುನೀಗಿದ್ದಾನೆ. ಗ್ರಾಮೀಣ ಠಾಣೆಯಲ್ಲಿ ಬಸ್ ಚಾಲಕ ಮಂಡ್ಯದ ಪಾಂಡವಪುರದ ಮೊಹ್ಮದ್ ಗೌಸ್ ಅಮೀರ್ ಸಾಬ್ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಹೆದ್ದಾರಿಯಲ್ಲೇ ಅಪಘಾತ ಸಂಭವಿಸಿದ್ದರಿಂದ ಕೆಲ ಕಾಲ ಶಿರಾಲಿಯಲ್ಲಿ ರಸ್ತೆ ಸಂಚಾರ ಅಸ್ತವ್ಯಸ್ಥಗೊಂಡಿತ್ತು. ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಘಟನೆ ನಡೆದ ಸ್ಥಳದಲ್ಲಿ ನೂರಾರು ಜನರು ಜಮಾಯಿಸಿದ್ದರು. ಮೃತ ಸಂತೋಷ ಆಚಾರಿ ಬ್ಯಾಂಕೊಂದರ ನೌಕರರಾಗಿದ್ದರು ಎಂದು ತಿಳಿದು ಬಂದಿದೆ.