ಬೀಫ್ ಎಕ್ಸ್ಪೋರ್ಟ್ ಕಂಪನಿ ಸೇರಿದಂತೆ ಪಾಕಿಸ್ತಾನಿ ಏಜೆನ್ಸಿಗಳಿಂದಲೂ ಬಿಜೆಪಿ ದೇಣಿಗೆ ತೆಗೆದುಕೊಂಡಿದೆ- ಭಟ್ಕಳದಲ್ಲಿ ಕಾಂಗ್ರೆಸ್ ಸುದ್ದಿಗೋಷ್ಠಿ
ಭಟ್ಕಳ: ಗೋಹತ್ಯೆ ವಿರೋಧಿಸುವ ಬಿಜೆಪಿ ಬೀಫ್ ರಫ್ತು ಮಾಡುವ ಕಂಪನಿ ಸೇರಿದಂತೆ ಪಾಕಿಸ್ಥಾನಿ ಎಜೆನ್ಸಿಗಳಿಂದಲೂ ದೇಣಿಗೆ ಪಡೆದುಕೊಂಡಿದೆ ಎಂದು ಕಾಂಗ್ರೇಸ್ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್ ಸೊರಕೆ ಆರೋಪಿಸಿದ್ದಾರೆ.
ಅವರು ಶನಿವಾರ ಭಟ್ಕಳದ ಬ್ಲಾಕ್ ಕಾಂಗ್ರೇಸ್ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.
ಗೋಹತ್ಯೆ ಮಾಡುವವರು ಮತ್ತು ದನಕರುಗಳ ಪೂರೈಕೆಯ ಸಂದರ್ಭದಲ್ಲಿ ಹಲ್ಲೆ ನಡೆಸಿ ಅಮಾಯಕ ದಲಿತರನ್ನು, ಮುಸ್ಲಿಮರನ್ನು ಕೊಂದವರನ್ನು ಬೆಂಬಲಿಸುತ್ತಿರುವ ಬಿಜೆಪಿ ಸ್ವತಃ ಗೋಮಾಂಸ ರಪ್ತು ಮಾಡುವ ಕಂಪನಿಗಳಿಂದ ಕೋಟ್ಯಾಂತರ ರೂ ದೇಣಿಗೆ ಪಡೆದುಕೊಂಡಿದೆ ಎಂದು ಆರೋಪಿಸಿರುವ ಅವರು, ಬಿಜೆಪಿ ಗೋಹತ್ಯೆ ಹೆಸರಿನಲ್ಲಿ ದೇಶದ ಜನರನ್ನು ಮೂರ್ಖರನ್ನಾಗಿಸುತ್ತಿದೆ ಎಂದರು.
ಸದಾ ಪಾಕಿಸ್ತಾನ ಪಾಕಿಸ್ತಾನ ಎಂದು ಬೊಬ್ಬೆ ಹೊಡೆಯುತ್ತಿರುವ ಬಿಜೆಪಿ, ಚುನಾವಣಾ ಬಾಂಡ್ಗಳ ಮೂಲಕ ಪಾಕಿಸ್ತಾನದಿಂದ ಅಪಾರ ನಿಧಿಯನ್ನು ದೇಣಿಗೆ ಪಡೆದಿದೆ. ಅದೇ ರೀತಿ ಬಿಜೆಪಿ ಐಟಿ, ಇಡಿ, ಸಿಬಿಐ ಮೂಲಕ ಉದ್ಯಮಿಗಳನ್ನು ಹೆದರಿಸಿ ಹಲವು ಕಂಪನಿಗಳಿಂದ ಸಾವಿರಾರು ಕೋಟಿ ರೂಪಾಯಿ ದೇಣಿಗೆ ಪಡೆದಿದೆ. ಈ ಹಿಂದೆ ಭೂಗತ ಪಾತಕಿಗಳು ಕರೆ ಮಾಡಿ ಜನರಿಂದ ರುಪಾಯಿ ವಸೂಲಿ ಮಾಡುವಂತೆ ಬೆದರಿಕೆ ಹಾಕುತ್ತಿದ್ದರು, ಆದರೆ ಬಿಜೆಪಿಯವರು ಸರ್ಕಾರಿ ಸಂಸ್ಥೆಗಳನ್ನು ಬೆದರಿಸಿ ಸಾವಿರಾರು ಕೋಟಿ ದೋಚಿಕೊಂಡಿದೆ. ಇವೆಲ್ಲವನ್ನು ನೋಡಿದರೆ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯೇ ನಾಶವಾದಂತೆ ಕಾಣುತ್ತಿದೆ. ಅದೇ ರೀತಿ ಇಂದು ಶೇ.80ರಷ್ಟು ಮಾಧ್ಯಮಗಳನ್ನು ಅದಾನಿ, ಅಂಬಾನಿ ಖರೀದಿಸಿದ್ದಾರೆ.ಇದರಿಂದ ಜನರ ಸಮಸ್ಯೆಗಳು ಮಾಧ್ಯಮಗಳ ಮೂಲಕ ಬಹಿರಂಗವಾಗುತ್ತಿಲ್ಲ, ಈ ಮಾಧ್ಯಮಗಳಲ್ಲಿ ಮೋದಿಯವರನ್ನು ಮಾತ್ರ ತೋರಿಸಲಾಗುತ್ತಿದೆ.
2014ರ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯ ಪೋಸ್ಟರ್ನಲ್ಲಿ ಅಡ್ವಾಣಿ, ಮನೋಹರ್ ಜೋಷಿ ಮತ್ತು ಸುಷ್ಮಾ ಸ್ವರಾಜ್ ಅವರ ಭಾವಚಿತ್ರಗಳು ಕಂಡುಬರುತ್ತಿದ್ದವು. ಆದರೆ 2019ರಲ್ಲಿ ಮಾಯವಾದವರು. ಈಗ ಬಿಜೆಪಿ ಕಾರ್ಯಕರ್ತರು ಕೇವಲ ಮೋದಿ ಹೆಸರಲ್ಲಿ ಮಾತ್ರ ಮತವನ್ನು ಕೇಳುತ್ತಿದ್ದಾರೆ ಎಂದರು. ಇದನ್ನೆಲ್ಲಾ ಪರಿಗಣಿಸಿ ಮೇ 7 ರಂದು ನಡೆಯುವ ಚುನಾವಣೆಯಲ್ಲಿ ಪ್ರಜ್ಞಾವಂತಿಕೆಯಿಂದ ಮತದಾನದ ಹಕ್ಕನ್ನು ಚಲಾಯಿಸಬೇಕು ಎಂದು ಇಲ್ಲಿನ ಜನತೆಯಲ್ಲಿ ಕೇಳಿಕೊಳ್ಳುತ್ತೇವೆ. ಹಿಂದೂ, ಮುಸ್ಲಿಂ, ಜಾತಿ ಭೇದಭಾವ ಮಾಡಿ ದೇಶದಲ್ಲಿ ದ್ವೇಷ ಹರಡುವವರಿಗೆ ಮತ ಹಾಕುವ ಬದಲು ನಿಮ್ಮ ಕ್ಷೇತ್ರದ ಅಭಿವೃದ್ಧಿಗೆ, ದೇಶದ ಅಭಿವೃದ್ಧಿಗೆ ಮತ ನೀಡಿ, ಹಣದುಬ್ಬರ, ನಿರುದ್ಯೋಗ, ಜನರ ಸಮಸ್ಯೆಗಳ ಸಮನ್ವಯತೆಗಾಗಿ ಮತ ಚಲಾಯಿಸಿ.
ಸೊರಕೆ ಮಾತನಾಡಿ, ಕರ್ನಾಟಕ ಕಾಂಗ್ರೆಸ್ ಸರ್ಕಾರ ನೀಡಿರುವ ಖಾತ್ರಿಯಲ್ಲಿ ಮನೆಯ ಮಹಿಳೆಗೆ ವಾರ್ಷಿಕ 24 ಸಾವಿರ ರೂಪಾಯಿ ನೀಡಲಾಗುತ್ತಿದೆ, ಈಗ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಕೂಡ ವಾರ್ಷಿಕ 1 ಲಕ್ಷ ರೂಪಾಯಿ ನೀಡುವುದಾಗಿ ಭರವಸೆ ನೀಡಿದೆ. ಈಗಿನ ಬಿಜೆಪಿ ಸರ್ಕಾರ ರೈತರ ಸಾಲ ಮನ್ನಾ ಮಾಡಲು ಸಿದ್ಧವಿಲ್ಲ, ಆದರೆ ದೊಡ್ಡ ಬಂಡವಾಳಶಾಹಿಗಳು ಮತ್ತು ಕೈಗಾರಿಕೋದ್ಯಮಿಗಳ 16,000 ಕೋಟಿ ರೂ.ಗಳನ್ನು ಮನ್ನಾ ಮಾಡಿದೆ ಎಂದು ಸೊರಕೆ ಹೇಳಿದರು. ಈ ಹಿಂದೆ ಮನಮೋಹನ್ ಸಿಂಗ್ ಸರ್ಕಾರ 72,000 ಕೋಟಿ ರೈತರ ಸಾಲ ಮನ್ನಾ ಮಾಡಿತ್ತು, ಈಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ 700,000 ಕೋಟಿ ರೂ. ರೈತರ ಸಾಲ ಮನ್ನಾ ಮಾಡಲಾಗುವುದು ಆದ್ದರಿಂದ ಕಾಂಗ್ರೆಸ್ ಪರವಾಗಿ ಮತ ಹಾಕುವಂತೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಉತ್ತರಕನ್ನಡ ಪ್ರಚಾರ ಸಮಿತಿ ಅಧ್ಯಕ್ಷ ನ್ಯಾಯವಾದಿ ರವೀಂದ್ರ ನಾಯ್ಕ, ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಕಾಂಗ್ರೆಸ್ ಮುಖಂಡರಾದ ಅಬ್ಬಾಸ್ ತೋನ್ಸೆ. ರಾಮ ಮೊಗೇರ್, ಆಲ್ಬರ್ಟ್ ಡಿಕೋಸ್ತ, ಸುರೇಶ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.