ಬಳ್ಳಾರಿ : ಜಿಲ್ಲೆಯಲ್ಲಿ ಅನಧಿಕೃತವಾಗಿ ಅಕ್ಕಿಯನ್ನು ಸಂಗ್ರಹಿಸಿ ಸಾಗಾಣಿಕೆ ಮಾಡುತ್ತಿರುವ ದಂಧೆಕೋರರ ಮೇಲೆ ನಿಗಾವಹಿಸಿ ಒಂದೇ ದಿನ ಮೂರು ಕಡೆ ದಾಳಿ ನಡೆಸಲಾಗಿದೆ.
ಅಗತ್ಯ ವಸ್ತುಗಳ ಕಾಯ್ದೆ 1955 ರಡಿ 4 ಪ್ರಕರಣಗಳನ್ನು ದಾಖಲಿಸಿ, 10,10,568 ರೂ. ಮೌಲ್ಯದ 388.68 ಕ್ವಿಂಟಲ್ ಅಕ್ಕಿಯನ್ನು ಜಪ್ತಿ ಮಾಡಿ, 3 ವಾಹನಗಳನ್ನು ಸರ್ಕಾರದ ವಶಕ್ಕೆ ಪಡೆದುಕೊಳ್ಳಲಾಗಿದೆ.
ಅಕ್ರಮ ಪಡಿತರ ದಾಸ್ತಾನು ಮತ್ತು ಸಾಗಾಣಿಕ ಮಾಡುತ್ತಿರುವವರ ಮೇಲೆ ತೀವ್ರ ನಿಗಾವಹಿಸಿರುವ ಬಳ್ಳಾರಿ ಜಿಲ್ಲಾಡಳಿತ ವಿವಿಧೆಡೆ ದಾಳಿ ನಡೆಸಿ ಅಕ್ರಮಗಳನ್ನು ತಡೆಯಲು ಕ್ರಮವಹಿಸುವುದರ ಮೂಲಕ ಕಾಳಸಂತೆಕೊರರಿಗೆ ಬಿಸಿಮುಟ್ಟಿಸಲು ಮುಂದಾಗಿದೆ.
ಅ.9ರಂದು ಜಿಲ್ಲೆಯ ಕುರುಗೋಡು ತಾಲ್ಲೂಕಿನ ಮದುರೈ ಗ್ರಾಮದ ಚಟ್ಟಿ ಹನುಮಂತಪ್ಪ ಅವರ ಗುಡಿಸಲು ಮನೆಯಲ್ಲಿ ಅನಧಿಕೃತವಾಗಿ ಅಕ್ಕಿಯನ್ನು ಸಂಗ್ರಹಿಸಲಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ಆಹಾರ,ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ಶ್ರೀಧರ್ ಹಾಗೂ ಅಧಿಕಾರಿಗಳ ತಂಡವು ಪೊಲೀಸ್ ಸಿಬ್ಬಂದಿಯೊಂದಿಗೆ ದಾಳಿ ಮಾಡಿ 35.10 ಕ್ವಿಂಟಲ್ ಅಕ್ಕಿಯನ್ನು ವಶಪಡಿಸಿಕೊಂಡು ಪೊಲೀಸ್ ಪ್ರಕರಣ ದಾಖಲಿಸಲಾಗಿದೆ.
ಜಿಲ್ಲೆಯ ಸಿರುಗುಪ್ಪದಲ್ಲಿ ಅನಧಿಕೃತವಾಗಿ ಸಾಗಾಣಿಕೆ ಮಾಡುತ್ತಿದ್ದ ಅಶೋಕ ಲೈಲ್ಯಾಂಡ್ ವಾಹನ ಸಂಖ್ಯೆ ಕೆಎ-32 ಎ-4831ರಲ್ಲಿ 317.80ಕ್ವಿಂಟಲ್ ಅಕ್ಕಿ (ಇದರ ಮೌಲ್ಯ 4,76,700ರೂ) ಹಾಗೂ ವಾಹನವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. 7ಲಕ್ಷ ರೂ.ಮೌಲ್ಯದ ಲಾರಿಯನ್ನು ವಶಪಡಿಸಿಕೊಳ್ಳಲಾಗಿದ್ದು, ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ರಾಜಶೇಖರ್, ಅಕ್ಕಿ ಗಿರಣಿ ಮಾಲೀಕರ ಇಬ್ರಾಹಿಂಸಾಬ್, ಲಾರಿ ಮಾಲೀಕ ಎಂ.ಪಿ. ಪ್ರಸನ್ನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಬಳ್ಳಾರಿ ಪಡಿತರ ಪ್ರದೇಶದ ಎ.ಪಿ.ಎಂ.ಸಿ ಹತ್ತಿರ ಇರುವ ಈದ್ಗಾ ಮೈದಾನದ ಬೈಪಾಸ್ನಿಂದ ಬೆಂಗಳೂರು ರಸ್ತೆ ಕಡೆಗೆ ಹೋಗುವ ರಸ್ತೆಯಲ್ಲಿ ಅನಧಿಕೃತವಾಗಿ ಸಾಗಾಣಿಕೆ ಮಾಡುತ್ತಿದ್ದ ಅಶೋಕ ಲೈಲ್ಯಾಂಡ ವಾಹನ ಸಂಖ್ಯೆ ಕೆಎ-34 ಬಿ-6456ರಲ್ಲಿ 27.50ಕ್ವಿಂಟಲ್ ಅಕ್ಕಿ ಹಾಗೂ ವಾಹನ(5ಲಕ್ಷ ರೂ. ವಾಹನದ ಮೌಲ್ಯ) ವಶಕ್ಕೆ ಪಡೆದುಕೊಳ್ಳಲಾಗಿದ್ದು, ಎ.ಪಿ.ಎಂ.ಸಿ ಪೊಲೀಸ್ ಠಾಣೆಯಲ್ಲಿ ಇರ್ಫಾನ್, ದಾದಾಪೀರ್, ಶರಬಯ್ಯ,ಇಲಿಯಾಸ್ ಹಾಗೂ ತುಮಕೂರಿನ ಜಾವೇದ್ ಇವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಅ.11 ರಂದು ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಸಿರಿಸಿನಕಲ್ಲು ಪ್ರದೇಶದ ಕಾಲುವೆ ಮೇಲೆ ಬಳ್ಳಾರಿ ರೋಡ್ ಚೆಕ್ಪೊಸ್ಟ್ ಕಡೆಯಿಂದ ಹೋಗುತ್ತಿದ್ದ ಅಶೋಕ್ ಲೈಲ್ಯಾಂಡ್ ವಾಹನ ಸಂಖ್ಯೆ ಕೆ.ಎ-35, ಡಿ-7854 ಇದರ ಮೌಲ್ಯ 45 ಸಾವಿರ ರೂ. ಇದರಲ್ಲಿ ಅನಧಿಕೃತವಾಗಿ ಸಾಗಾಣಿಕೆ ಮಾಡುತ್ತಿದ್ದ 8.28ಕ್ವಿಂಟಲ್ ಅಕ್ಕಿ ಇದರ ಮೌಲ್ಯ 21,528 ರೂ. ಆಗುತ್ತಿದ್ದ ಅಕ್ಕಿ ಹಾಗೂ ವಾಹನವನ್ನು ವಶಪಡಿಸಿಕೊಂಡು ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯೂಸುಫ್ ತಂದೆ ಖಾಸಿಂ ವಿರುದ್ದ ಪ್ರಕರಣ ದಾಖಲಿಸಲಾಗಿದೆ.