ದೇಶದ ಆಡಳಿತ ವ್ಯವಸ್ಥೆಯಲ್ಲಿ ಒಬಿಸಿ ಪ್ರಾತಿನಿಧ್ಯ ಅತ್ಯಲ್ಪ; ಸರಕಾರದ 90 ಕಾರ್ಯದರ್ಶಿಗಳಲ್ಲಿ ಮೂವರು ಮಾತ್ರ ಹಿಂದುಳಿದವರು: ರಾಹುಲ್ ಗಾಂಧಿ
ಹೊಸದಿಲ್ಲಿ: ಈ ದೇಶದ ಲೋಕಸಭೆ, ವಿಧಾನಸಭೆಗಳು, ಆಡಳಿತಶಾಹಿ, ನ್ಯಾಯಾಂಗ, ಪತ್ರಿಕಾ ರಂಗ- ಇವೆಲ್ಲವುಗಳಲ್ಲಿ ನಮ್ಮ ದೇಶದ ಹಿಂದುಳಿದ ಸಮುದಾಯಗಳ ಪ್ರಾತಿನಿಧ್ಯ ಎಷ್ಟಿದೆ? ಅವರ ಭಾಗೀದಾರಿಕೆ ಎಷ್ಟಿದೆ? ನಾನು ಪರಿಶೀಲನೆ ಮಾಡಿದೆ. ದೇಶ ನಡೆಸುವ ಭಾರತ ಸರಕಾರದ 90 ಕಾರ್ಯದರ್ಶಿಗಳಲ್ಲಿ ಕೇವಲ ಮೂರು ಮಂದಿ ಮಾತ್ರ ಹಿಂದುಳಿದ ವರ್ಗಗಳಿಂದ ಬಂದವರು. ಇದನ್ನು ನೋಡಿ ನನಗೆ ಆಘಾತವಾಯಿತು ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಬುಧವಾರ ಲೋಕಸಭೆಯಲ್ಲಿ ಹೇಳಿದರು.
“ದೇಶದ ಬಜೆಟ್ 44 ಲಕ್ಷ ಕೋಟಿ ರೂ. ಆಗಿ ದ್ದರೂ, ಅದರಲ್ಲಿ ಕೇವಲ 5 ಶೇ., ಅಂದರೆ 2.47 ಲಕ್ಷ ಕೋಟಿ ರೂ. ಮಾತ್ರ ಹಿಂದುಳಿದ ಸಮುದಾಯಗಳ ನಿಯಂತ್ರಣದಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಹಿಂದುಳಿದ ವರ್ಗಗಳಿಗಾಗಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ಆದರೆ ಇಲ್ಲಿ ಏನಾಗುತ್ತಿದೆ? ಈ ದೇಶದ ಅತಿ ದೊಡ್ಡ ಜನ ಸಮುದಾಯವಾಗಿರುವ ಹಿಂದುಳಿದ ವರ್ಗಗಳಿಂದ ಬಂದವರು ಕೇವಲ ಮೂವರು ಕಾರ್ಯ ದರ್ಶಿಗಳು ಎನ್ನುವುದು ಬಹುದೊಡ್ಡ ಅವಮಾನ. ಇದು ನಾಚಿಕೆಗೇಡು'' ಎಂದು ಕಾಂಗ್ರೆಸ್ ನಾಯಕ ಹೇಳಿದರು.
ಈ ದೇಶದ ಒಬಿಸಿಗಳು, ದಲಿತರು ಮತ್ತು ಆದಿವಾಸಿಗಳಿಗೆ ಎಷ್ಟು ಪ್ರಾತಿನಿಧ್ಯ ಸಿಕ್ಕಿದೆ ಎನ್ನುವುದು ಗೊತ್ತಾಗಲು ಜಾತಿ ಗಣತಿ ನಡೆಯಲೇಬೇಕು ಎಂದು ಹೇಳಿದ ಅವರು, ಆದಷ್ಟು ಬೇಗ ಅದು ಆಗಲಿ ಎಂದರು.