ಪುತ್ತೂರು: ರೈತರ ಸರ್ವತೋಮುಖ ಅಭಿವೃದ್ಧಿಯ ನಿಟ್ಟಿನಲ್ಲಿ ವಿವಿಧ ಆಯಾಮಗಳನ್ನು ಹೊಂದಿರುವ ಏಕರೂಪಿ ನಿಯಮಾಧಾರಿತ ಕೃಷಿ ಪತ್ತಿನ ಸಹಕಾರಿ ಸಂಘ(ಪಿಎಸಿಎಸ್)ಗಳನ್ನು ದೇಶದ ಪ್ರತೀ ಗ್ರಾಮ ಪಂಚಾಯತ್ ಗಳಲ್ಲಿ ಮುಂದಿನ ಮೂರು ವರ್ಷಗಳೊಳಗೆ ಸ್ಥಾಪಿಸಲಾಗುವುದು ಎಂದು ಸಹಕಾರಿ ಮತ್ತು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಅವರು ಪುತ್ತೂರು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಕ್ಯಾಂಪೊ ಸುವರ್ಣ ಮಹೋತ್ಸವದ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಆರಂಭಗೊಳ್ಳ ಲಿರುವ ಈ ಪಿಎಸಿಎಸ್ಗಳಲ್ಲಿ ರೈತರಿಗೆ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ದೊರಕುವಂತಹ ಸೌಲಭ್ಯಗಳನ್ನು ದೊರಕಿಸಿ ಕೊಡಲಾಗುವುದು. ಇವುಗಳು ಕೇಂದ್ರೀಕೃತ ವ್ಯವಸ್ಥೆಯಡಿ ಕಾರ್ಯಾಚರಿಸಲಿದೆ ಎಂದು ಅವರು ತಿಳಿಸಿದರು. ದಕ್ಷಿಣ ಕನ್ನಡವೂ ಜಲ, ವಾಯು, ರಸ್ತೆ ಸಂಪರ್ಕ ಹೊಂದಿರುವಂತಹ ರಾಜ್ಯದ ಏಕೈಕ ಜಿಲ್ಲೆಯಾಗಿದ್ದು, ವಾಣಿಜ್ಯ ವ್ಯವಹಾರಗಳಿಗೆ ಇದು ಬಹಳಷ್ಟು ಸಹಕಾರಿಯಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಅಡಿಕೆ, ಕಾಳುಮೆಣಸು, ಭತ್ತ, ರಬ್ಬರ್ ಮತ್ತಿತರ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಇಲ್ಲಿನ ಅಡಿಕೆಗೂ ಗುಜರಾತಿಗೂ ನಿಕಟ ಬಾಂಧವ್ಯವಿದೆ. ಈ ನಿಟ್ಟಿನಲ್ಲಿ ವ್ಯಾಪಾರ ವ್ಯವಹಾರಗಳಿಗೆ ಅನುಕೂಲಕರವಾಗಿಸುವ ನಿಟ್ಟಿನಲ್ಲಿ ಮಂಗಳೂರು-ಬೆಂಗಳೂರು ಮಧ್ಯೆ ಸುಗಮ ಸಂಚಾರಕ್ಕಾಗಿ ಶಿರಾಡಿ ಘಾಟ್ ಪ್ರದೇಶದಲ್ಲಿ ಸುರಂಗ ಮಾರ್ಗದ ಯೋಜನೆ ಹಾಕಿಕೊಳ್ಳಲಾಗಿದೆ. ರೂ. 1 ಸಾವಿರ ಕೋಟಿ ವೆಚ್ಚದಲ್ಲಿ ಮಂಗಳೂರು ವಿಮಾನ ನಿಲ್ದಾಣ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಯಾವುದೇ ಒಂದು ಸಹಕಾರಿ ಸಂಸ್ಥೆ 50 ವರ್ಷಗಳ ಕಾಲ ಅಭಿವೃದ್ಧಿ ಪಥದಲ್ಲಿ ಸಾಗಬೇಕೆಂದರೆ ಅದರಲ್ಲಿ ಕಾರ್ಯ ನಿರ್ವಹಿಸುತ್ತಿರುವವರ ಪ್ರಾಮಾಣಿಕತೆಯನ್ನು ಎತ್ತಿ ತೋರಿಸುತ್ತದೆ. ವಾರಣಾಸಿ ಸುಬ್ರಾಯ ಭಟ್ಟರಿಂದ ಸ್ಥಾಪಿತವಾದ ಕ್ಯಾಂಪೈ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಆರಂಭದಲ್ಲಿ 3 ಸಾವಿರ ಸದಸ್ಯರೊಂದಿಗೆ ಆರಂಭಗೊಂಡ ಕ್ಯಾಂಪ್ಲೊ ಇಂದು 1.38 ಲಕ್ಷ ಸದಸ್ಯರೊಂದಿಗೆ ಬೆಳೆದು ನಿಂತಿದೆ. ಮೋದಿಯವರು ಸಹಕಾರಿ ಸಚಿವಾಲಯವನ್ನು ಸ್ಥಾಪಿಸಿ ರೈತರ ಹಾಗೂ ಗ್ರಾಮದ ಸೇವೆಯನ್ನು ಮಾಡುವಂತಹ ದಾರಿಯನ್ನು ಕಂಡುಕೊಂಡಿದ್ದಾರೆ ಎಂದು ಅಮಿತ್ ಶಾ ತಿಳಿಸಿದರು. ಈ ಸಂದರ್ಭದಲ್ಲಿ ಅಮಿತ್ ಶಾ ಭಾರತ ಮಾತೆ ಮತ್ತು ಕ್ಯಾಂಪೊ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಸುಬ್ರಾಯ ಭಟ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಡಿಜಿಟಲ್ ಲಾಂಚ್ ಮೂಲಕ ಕ್ಯಾಂಪೊ ಸಂಸ್ಥೆಯಿಂದ ಸ್ಥಾಪಿಸಲಾಗುವ 'ಅಗ್ರಿಮಾಲ್'ಗೆ ಶಂಕುಸ್ಥಾಪನೆ ನಡೆಸಿದರು. ಕ್ಯಾಂಪೈ ಸಂಸ್ಥೆಯ 'ಕಲ್ಪ' ತೆಂಗಿನ ಎಣ್ಣೆ ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು ಹಾಗೂ ಭದ್ರಾವತಿ ಕ್ಯಾಂಪ್ ಗೋದಾಮು ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಕ್ಯಾಪಿಟಲಿಸಂ ಮತ್ತು ಕಮ್ಯುನಿಸಂಗೆ ಉತ್ತರವಾಗಿ ಕೋ ಆಪರೇಟಿವ್ ಬೆಳೆದು ಬಂದಿದೆ.
ಕಳೆದ 50 ವರ್ಷಗಳಿಂದ ಯಶಸ್ವಿ ವ್ಯವಹಾರ ನಡೆಸಿಕೊಂಡು ಎತ್ತರಕ್ಕೆ ಬೆಳೆದಿರುವ ಕ್ಯಾಂಪೈ ಸಂಸ್ಥೆಯಲ್ಲಿ ಪ್ರಗತಿಯ ಯಶೋಗಾಥೆಯಿದೆ. 26ಸಾವಿರ ಮೆಟ್ರಿಕ್ ಟನ್ ಚಾಕಲೇಟ್ ಉತ್ಪಾದನೆ ಸೇರಿದಂತೆ ಅಡಿಕೆ, ಕಾಳುಮೆಣಸು, ಕೊಕ್ಕೋ, ರಬ್ಬರ್ ಹೀಗೆ ಹಲವು ಬೆಳೆಗಳಿಗೆ ತಾಯಿಯಾಗಿ ಕ್ಯಾಂಪೈ ಸಂಸ್ಥೆ ರೈತರ ಸೇವೆ ಮಾಡುತ್ತಿದೆ.
ರಾಜ್ಯದಲ್ಲಿ 6.11 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಸುತ್ತಿದ್ದಾರೆ. ಅಡಿಕೆಗೆ ಹಳದಿ ರೋಗ ಇನ್ನಿತರ ರೋಗಗಳ ಕಾರಣದಿಂದ ಬೆಳೆಗಾರರು ಸಮಸ್ಯೆ ಎದುರಿಸುತ್ತಿದ್ದಾರೆ. ಇದರ ಪರಿಹಾರ ಪ್ರಯತ್ನವಾಗಿ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಅವಿರತ ಶ್ರಮ ನಡೆಸುತ್ತಿದ್ದಾರೆ. ಅಡಿಕೆ ಸಮಸ್ಯೆ ಪರಿಹಾರಕ್ಕಾಗಿ ಈಗಾಗಲೇ ರೂ. 10 ಕೋಟಿ ಅನುದಾನ ಒದಗಿಸಲಾಗಿದೆ. ಮುಂದಿನ ಬಜೆಟ್ನಲ್ಲಿ ಅಡಿಕೆಗಾಗಿ ವಿಶೇಷ ಅನುದಾನ ಒದಗಿಸಲಾಗುವುದು. ಅಲ್ಲದೆ ಖಾನಾ ಬಾಣಾ ಜಮೀನು ವಿಚಾರದಲ್ಲಿಯೂ ಡೀಮ್ ಫಾರೆಸ್ಟ್ ಮಾದರಿಯಲ್ಲಿ ಸ್ವಾಧೀನದಾರರಿಗೆ ಪರಿಹಾರ ವ್ಯವಸ್ಥೆ ಮಾಡಲಾಗುವುದು. ಈ ಬಗ್ಗೆ ಈಗಾಗಲೇ ಕಂದಾಯ ಇಲಾಖೆಗೆ ಸೂಚನೆ ನೀಡಲಾಗಿದೆ. ಸರಕಾರಕ್ಕೆ ರೈತರ ಬಗ್ಗೆ ಬದ್ಧತೆ ಇದೆ ಎಂದರು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ಸಂದರ್ಭದಲ್ಲಿ ಮಾತನಾಡಿ, ಕೇಂದ್ರ ಸರಕಾರದ ಕ್ರಮಗಳನ್ನು ಶ್ಲಾಘಿಸಿದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ, ಕ್ಯಾಂಪೈ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಡಿ, ಕ್ಯಾಂಪೊ ಮಾಜಿ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಮಾತನಾಡಿದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ, ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ, ಇಂಧನ ಸಚಿವ ವಿ. ಸುನೀಲ್ ಕುಮಾರ್, ಸಹಕಾರ ಸಚಿವ ಎಸ್. ಟಿ. ಸೋಮಶೇಖರ್, ಬಂದರು ಹಾಗೂ ಒಳನಾಡು ಸಾರಿಗೆ ಸಚಿವ ಅಂಗಾರ ಎಸ್., ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ದ.ಕ.ಸಂಸದ ನಳಿನ್ ಕುಮಾರ್ ಕಟೀಲು, ಪುತ್ತೂರು ಶಾಸಕ ಸಂಜೀವ ಮಠಂದೂರು, ಬಂಟ್ವಾಳ ಶಾಸಕ ಯು. ರಾಜೇಶ್ ನಾಯ್ಕ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ನಗರಸಭೆ ಅಧ್ಯಕ್ಷ ಕೆ. ಜೀವಂಧರ್ ಜೈನ್ ಉಪಸ್ಥಿತರಿದ್ದರು.
ಕ್ಯಾಂಪ್ಕೊ ವ್ಯವಸ್ಥಾಪಕ ನಿರ್ದೇಶಕ ಎಚ್. ಎಂ. ಕೃಷ್ಣಕುಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಕ್ಯಾಂಪ್ಕೊ ಉಪಾಧ್ಯಕ್ಷ ಶಂಕರ ನಾರಾಯಣ ಭಟ್ ಖಂಡಿಗೆ ವಂದಿಸಿದರು.