ಸಾರ್ವಜನಿಕರು ಮಣಿಪುರ ಸರಕಾರದಲ್ಲಿ ನಂಬಿಕೆಯನ್ನು ಕಳೆದುಕೊಂಡಿದ್ದಾರೆ; ಪ್ರಧಾನಿಗೆ ಬಿಜೆಪಿ ಶಾಸಕರ ಪತ್ರ
ಹೊಸದಿಲ್ಲಿ: ಪ್ರಧಾನಿ ಕಚೇರಿಗೆ ಆಹ್ವಾಲೂಂದನ್ನು ಸಲ್ಲಿಸಿರುವ ಮಣಿಪುರದ ಒಂಬತ್ತು ಮೈತೈ ಶಾಸಕರು, ರಾಜ್ಯದ ಜನರು ಎನ್. ಬಿರೇನ್ ಸಿಂಗ್ ಸರಕಾರದಲ್ಲಿ ಸಂಪೂರ್ಣವಾಗಿ ನಂಬಿಕೆಯನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ. ಈ ಪೈಕಿ ಎಂಟು ಶಾಸಕರು ಬಿಜೆಪಿಗೆ ಸೇರಿದವರಾಗಿದ್ದಾರೆ.
ಪರಿಸ್ಥಿತಿಯನ್ನು ನಿಯಂತ್ರಿಸಲು ಹಲವಾರು ಕ್ರಮಗಳ ಹೊರತಾಗಿಯೂ ತಳಮಟ್ಟದಲ್ಲಿ ಹೆಚ್ಚಿನ ಸುಧಾರಣೆ ಕಂಡು ಬಂದಿಲ್ಲ. ಸದ್ಯ ಸರಕಾರ ಮತ್ತು ಆಡಳಿತದಲ್ಲಿ ಯಾವುದೇ ನಂಬಿಕೆ ಉಳಿದಿಲ್ಲ. ಸಾರ್ವಜನಿಕರು ಪ್ರಸ್ತುತ ರಾಜ್ಯ ಸರಕಾರದಲ್ಲಿ ಸಂಪೂರ್ಣವಾಗಿ ನಂಬಿಕೆಯನ್ನು ಕಳೆದುಕೊಂಡಿದ್ದಾರೆ ಎಂದು ಈ ಶಾಸಕರು ಹೇಳಿದ್ದಾರೆ.
ಸರಕಾರದಿಂದ ಸರಿಯಾದ ಆಡಳಿತಕ್ಕಾಗಿ ಕೆಲವು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳುವಂತೆ ಶಾಸಕರ ಗುಂಪು ತನ್ನ ಅಹವಾಲಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಆಗ್ರಹಿಸಿದೆ.
ಈ ಶಾಸಕರ ಗುಂಪು ಅಹವಾಲು ಸಲ್ಲಿಸಿದ ದಿನವೇ ಮಣಿಪುರದ 30 ಶಾಸಕರ ಇನ್ನೊಂದು ಗುಂಪು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿತ್ತು. ಒಂಭತ್ತು ಶಾಸಕರ ಪೈಕಿ ಓರ್ವರಾಗಿರುವ ನಿಶಿಕಾಂತ್ ಸಪಮ್ ಅವರು, ಇದಕ್ಕೆ ತಪ್ಪು ಸಂವಹನ ಕಾರಣವಾಗಿದೆ ಮತ್ತು ರಾಜ್ಯ ಬಿಜೆಪಿಯಲ್ಲಿ ಬಣಗಳಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.
ಮಣಿಪುರದಲ್ಲಿ ಜನಾಂಗೀಯ ಸಂಘರ್ಷ ಈಗ ಅಂತರ್ಯುದ್ಧದ ರೂಪವನ್ನು ಪಡೆದುಕೊಂಡಿದ್ದು, ಈವರೆಗೆ 100ಕ್ಕೂ ಅಧಿಕ ಜನರು ಮೃತಪಟ್ಟು 300ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಸಾವಿರಾರು ಜನರು ಸ್ಥಳಾಂತರಗೊಂಡಿದ್ದು, ಸುಮಾರು 60,000 ಜನರು 350 ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ.
10 ವಿರೋಧ ಪಕ್ಷಗಳ ಪ್ರತಿನಿಧಿಗಳು ಮಣಿಪುರ ಹಿಂಸಾಚಾರ ಕುರಿತು ಪ್ರಧಾನಿಯವರಿಗೆ ಅಹವಾಲು ಸಲ್ಲಿಸಲು ಬಯಸಿದ್ದರು, ಆದರೆ ಅವರಿಗೆ ಭೇಟಿಗೆ ಸಮಯ ಸಿಕ್ಕಿಲ್ಲ ಎಂದು ಮಂಗಳವಾರ ಟ್ವಿಟಿಸಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು, ಪ್ರಧಾನಿ ಏಕೆ ಮಣಿಪುರದ ಕುರಿತು ಅಷ್ಟೊಂದು ಕಠೋರ, ಸಂವೇದನಾಹೀನ ಮತ್ತು ಮೌನವಾಗಿದ್ದಾರೆ? ಅದನ್ನು ಬಣ್ಣಿಸಲು ಆಘಾತಕಾರಿ ಎನ್ನುವುದು ಸೌಮ್ಯ ಪದವಾಗುತ್ತದೆ ಎಂದು ಹೇಳಿದ್ದರು. ಜ.19ರ ದಿನಾಂಕವನ್ನು ಹೊಂದಿರುವ ಅಹವಾಲಿನ ಪ್ರತಿಯೊಂದನ್ನೂ ರಮೇಶ್ ಟ್ವಿಟಿಸಿದ್ದಾರೆ.
ಮಣಿಪುರದಲ್ಲಿ ಹಿಂಸಾಚಾರ ಹರಡಲು ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರಕಾರಗಳ ಒಡೆದು ಆಳುವ ರಾಜಕೀಯವು ಕಾರಣವಾಗಿದೆ ಎಂದು ವಿರೋಧ ಪಕ್ಷಗಳು ಅಹವಾಲಿನಲ್ಲಿ ಆರೋಪಿಸಿವೆ.