ಧಾರವಾಡ : ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಆರೋಗ್ಯ ಸೇವೆಗಳ ಉನ್ನತಿಕರಣಗೊಳಿಸಲು ಮತ್ತು ಎಲ್ಲ ಆಸ್ಪತ್ರೆಗಳನ್ನು ವಿವಿಧ ಹಂತಗಳಲ್ಲಿ ಮೇಲ್ದರ್ಜೆಗೇರಿಸಲು ಆಧ್ಯತೆ ನೀಡಲಾಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ಹೇಳಿದರು.
ಅವರು ಧಾರವಾಡ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ, ವಿವಿಧ ವಾರ್ಡ್ಗಳ ಸೌಲಭ್ಯಗಳ ಪರಿಶೀಲನೆ ನಂತರ ಮಾತನಾಡಿದರು.
ಜಿಲ್ಲಾ ಆಸ್ಪತ್ರೆ ಗುಣಮಟ್ಟ ಕಾಯ್ದುಕೊಂಡಿದ್ದು, ಉತ್ತಮವಾಗಿ ಕೆಲಸ ನಿರ್ವಹಿಸುತ್ತದೆ. ಧಾರವಾಡ ಜಿಲ್ಲಾ ಆಸ್ಪತ್ರೆಯ ಮೂಲಭೂತ ಸೌಕರ್ಯ ಹಾಗೂ ಆರೋಗ್ಯ ಪರಿಕರಗಳ ಸೌಲಭ್ಯಕ್ಕಾಗಿ ರೂ.9.9 ಕೋಟಿ ಅನುದಾನ ಬಿಡುಗಡೆ ಮಾಡಲು ಅನುಮೊದನೆ ನೀಡಲಾಗಿದೆ ಎಂದು ಅವರು ಹೇಳಿದರು.
ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ವೈದ್ಯರ ಮತ್ತು ವೈದ್ಯಕೀಯ ಸಿಬ್ಬಂದಿಗಳ ಕೊರತೆ ಇದೆ, ಈಗ ಒಂದು ತಿಂಗಳೊಳಗಾಗಿ ಸುಮಾರು 800 ಜನ ಆರೋಗ್ಯ ಸಿಬ್ಬಂದಿಗಳಿಗೆ ನೇಮಕಾತಿ ಆದೇಶ ನೀಡಲಿದ್ದೆವೆ. 1500 ವೈದ್ಯರ ಮತ್ತು 1500 ತಜ್ಞ ವೈದ್ಯರ ಹುದ್ದೆಗಳು ಖಾಲಿ ಇದ್ದು, ಎಂ.ಬಿ.ಬಿ.ಎಸ್., ಎಂ.ಡಿ ಆಗಿರುವ ಪದವಿಧರರ ನೇಮಕಾತಿಗಾಗಿ ಕೌನ್ಸಿಲಿಂಗ್ ಆರಂಭಿಸಲಾಗಿದೆ, ಸದ್ಯದಲ್ಲಿ ಅವರನ್ನು ಗ್ರಾಮೀಣ ಭಾಗದ ಎಲ್ಲ ಆಸ್ಪತ್ರೆಗಳಿಗೆ ನೇಮಕ ಮಾಡಲಾಗುವುದು ಎಂದು ಸಚಿವರು ಹೇಳಿದರು.
ಧಾರವಾಡ ಜಿಲ್ಲಾ ಆಸ್ಪತ್ರೆ ಜೊತೆಗೆ ವೈದ್ಯಕೀಯ ಕಾಲೇಜು ಮಂಜೂರು ಮಾಡಿದರೆ ಅಗತ್ಯ ಸೌಲಭ್ಯವಿರುವ ವಿಸ್ತಾರವಾದ ಜಾಗೆ ಬೇಕಾಗುತ್ತದೆ ಅದಕ್ಕಾಗಿ ಹೆಚ್ಚಿನ ಭೂಮಿ ಇರುವ ಪ್ರದೇಶವನ್ನು ಗುರುತಿಸಿ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲಿಯವರೆಗೆ ಈ ಆಸ್ಪತ್ರೆಯ ಸುಧಾರಣೆಗೆ ಅಗತ್ಯವಿರುವ ಅನುದಾನವನ್ನು ಪೂರೈಸಲಾಗುವುದು ಎಂದು ಸಚಿವರು ಹೇಳಿದರು.
ಜಿಲ್ಲಾ ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಸಚಿವರ ಭೇಟಿ ಪರಿಶೀಲನೆ: ಆರೋಗ್ಯ ಸಚಿವ ದಿನೇಶ ಗುಂಡೂರಾವ ಅವರು ಧಾರವಾಡ ಜಿಲ್ಲಾ ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿ, ಉಪಕರಣಗಳ ಸುಸ್ಥಿತಿ, ಆಸ್ಪತ್ರೆಗೆ ಬಂದ ರೋಗಿಗಳ, ಅವರ ಬಂಧುಗಳ ಅಭಿಪ್ರಾಯ ತಿಳಿದರು.
ಆಕ್ಸಿಜನ್ ಪ್ಲಾಂಟ್ಗೆ ಭೇಟಿ ನೀಡಿ ಮಾಹಿತಿ ಪಡೆದರು ಮತ್ತು ವಾರದಲ್ಲಿ ಒಂದು ಸಲ ಅಥವಾ ಅಗತ್ಯವಿದ್ದಾಗ ಪ್ಲಾಂಟ್ ಆಕ್ಸಿಜನ್ ಬಳಸಬೇಕೆಂದು ತಿಳಿಸಿದರು. ನಂತರ ಅವರು ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಔಷಧಿ ವಿತರಣಾ ವಿಭಾಗ, ಹೆರಿಗೆ ಕೊಠಡಿ, ಪ್ರಸವ ಪೂರ್ವ ಗರ್ಭೀನಿಯರ ಕೊಠಡಿ ಶಸ್ತ್ರ ಚಿಕಿತ್ಸಾ ಸಂಕೀರ್ಣ ಭೇಟಿ ನೀಡಿ, ಫಲಾನುಭವಿಗಳ ಮತ್ತು ಕರ್ತವ್ಯ ನಿರತ ವೈದ್ಯಕೀಯ ಸಿಬ್ಬಂದಿಯಿಂದ ಮಾಹಿತಿ ಪಡೆದರು.
ಜಿಲ್ಲಾ ಆಸ್ಪತ್ರೆಯ ಭೇಟಿ ಸಂದರ್ಭದಲ್ಲಿ ಮಗಳ ಹೆರಿಗೆಗಾಗಿ ತಾಯಿ ಮಕ್ಕಳ ಆಸ್ಪತ್ರೆಗೆ ಆಗಮಿಸಿದ್ದ ತಡಕೊಡ ಗ್ರಾಮದ ಮಂಜವ್ವಾ ಕಾದ್ರೋಳಿ ಮತ್ತು ಲಕ್ಷ್ಮವ್ವ ಕಾದ್ರೋಳಿ ಅವರು ತಂದಿದ್ದ ಜೋಳದ ರೋಟ್ಟಿ, ಬದನೆಕಾಯಿ ಪಲ್ಯ, ಬಿನ್ಸ್ ಪಲ್ಯ ಮತ್ತು ಕೆಂಪುಕಾರದ ರುಚಿಯನ್ನು ಸಚಿವದ್ವಯರು ಸವಿದರು. ಮತ್ತು ಅಲ್ಲಿ ನೆರೆದಿದ್ದ ಮಹಿಳೆಯರಿಂದ ಹೆರಿಗೆ ಆಸ್ಪತ್ರೆಯ ಬಗ್ಗೆ ಅಭಿಪ್ರಾಯ ಪಡೆದರು.
ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಸಂಗಪ್ಪ ಗಾಬಿ ಅವರು ಜಿಲ್ಲಾ ಆಸ್ಪತ್ರೆಯ ವಿವಿಧ ವಿಭಾಗಗಳ ಸೌಲಭ್ಯಗಳು, ಕಾರ್ಯಚಟುವಟಿಕೆಗಳ ಕುರಿತು ಸಚಿವರಿಗೆ ವಿವರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಶಾಸಕ ಪ್ರಸಾದ ಅಬ್ಬಯ್ಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ರಣದೀಪ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಶಶಿ ಪಾಟೀಲ, ಆರ್ಸಿಎಚ್ಓ ಅಧಿಕಾರಿ ಡಾ.ಸುಜಾತಾ ಹಸವಿಮಠ ಉಪಸ್ಥಿತರಿದ್ದರು.
ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ: ಧಾರವಾಡ ಜಿಲ್ಲೇಯಲ್ಲಿ ಆರೋಗ್ಯ ಇಲಾಖೆಯಿಂದ ಅನುಷ್ಠಾನವಾಗುತ್ತಿರುವ ಯೋಜನೆಗಳ ಮತ್ತು ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯನ್ನು ಆರೋಗ್ಯ ಸಚಿವರು ಇಂದು ಮಧ್ಯಾಹ್ನ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜರುಗಿಸಿದರು.
ವಿವಿಧ ಯೋಜನೆಗಳನ್ನು ಪರಿಶೀಲಿಸಿದ ಸಚಿವರು, ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ರೋಗಗಳ ಕುರಿತು ಹಾಗೂ ಕ್ಷಯರೋಗದ ಕುರಿತು ಸರಿಯಾದ ಕ್ರಮದಲ್ಲಿ ಸ್ಕ್ಯಾನಿಂಗ್ ಮಾಡಬೇಕು ಮತ್ತು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕ್ರಮವಹಿಸಬೇಕೆಂದು ತಿಳಿಸಿದರು.
ವೇದಿಕೆಯಲ್ಲಿ ಶಾಸಕ ಪ್ರಸಾದ ಅಬ್ಬಯ್ಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ರಣದೀಪ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶಕಿ ಡಾ. ಪುಷ್ಪಲತಾ, ಆರ್ಸಿಎಚ್ ಯೋಜನಾ ನಿರ್ದೇಶಕ ಡಾ.ಜಿ.ಎನ್.ಶ್ರೀನಿವಾಸ ಇದ್ದರು.
ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಶಶಿ ಪಾಟೀಲ ಅವರು ಜಿಲ್ಲೆಯ ಆರೋಗ್ಯ ಇಲಾಖೆಯ ಪ್ರಗತಿವರದಿಯನ್ನು ಮಂಡಿಸಿ, ಸಭೆ ನಿರ್ವಹಿಸಿದರು.
ಸಭೆಯಲ್ಲಿ ಕಿಮ್ಸ್ ಅಧಿಕಾರಿಗಳು, ತಾಲೂಕಾ ಆಸ್ಪತ್ರೆಗಳ ಮುಖ್ಯ ವೈದ್ಯಾಧಿಕಾರಿಗಳು, ವೈದ್ಯಕೀಯ ಸಿಬ್ಬಂದಿಗಳು, ಜಿಲ್ಲಾ ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಅನುಷ್ಠಾನ ಅಧಿಕಾರಿಗಳು, ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ದೀಪಕ ಮಡಿವಾಳರ, ಆರ್ಸಿಎಚ್ಓ ಅಧಿಕಾರಿ ಡಾ.ಸುಜಾತಾ ಹಸವಿಮಠ ಸೇರಿದಂತೆ ಇತರರು ಉಪಸ್ಥಿತರಿದ್ದರು.