ಹೈದರಾಬಾದ್: ಮದುವೆಯಾಗುವಂತೆ ತನ್ನನ್ನು ಬಲವಂತಪಡಿಸುತ್ತಿದ್ದ ಪ್ರೇಯಸಿಯನ್ನು ಕಲ್ಲಿನಿಂದ ಜಜ್ಜಿ ಹತ್ಯೆಗೈದ ಆರೋಪದಲ್ಲಿ 36 ವರ್ಷದ ಅರ್ಚಕನೊಬ್ಬನನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಕುರುಗುಂಟಿ ಅಪ್ಸರಾ ಹತ್ಯೆಯಾದ ಮಹಿಳೆ, ವಿವಾಹಿತನೆಂದು ತಿಳಿದಿದ್ದರೂ, ದೇವಾಲಯವೊಂದರ ಅರ್ಚಕ, ಆಯ್ಯಗಾರಿ ವೆಂಕಟ ಸೂರ್ಯ ಸಾಯಿಕೃಷ್ಣನ ಜೊತೆ ಆಕೆ ಪ್ರೇಮಸಂಬಂಧವಿರಿಸಿಕೊಂಡಿದ್ದಳು. ಒಂದು ವೇಳೆ ತನ್ನನ್ನು ವಿವಾಹವಾಗದೆ ಇದ್ದಲ್ಲಿ ಆತನ ಬಣ್ಣ ಬಯಲು ಮಾಡುವುದಾಗಿ ಆಕೆ ಬ್ಲ್ಯಾಕ್ಮೇಲ್ ಮಾಡುತ್ತಿದ್ದಳೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಾಯಿ ಕೃಷ್ಣಆಕೆಯನ್ನು ಕೊಲೆ ಮಾಡಿದ್ದನೆಂದು ಪೊಲೀಸರು ತಿಳಿಸಿದ್ದಾರೆ.
ಜೂನ್ 3ರಂದು ರಾತ್ರಿ ಆತ ಅಪ್ಸರಾಳನ್ನು ತನ್ನ ಮನೆಗೆ ಕರೆದೊಯ್ದು, ಅಲ್ಲಿ ಆಕೆಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ. ಆನಂತರ ಕಾರೊಂದರಲ್ಲಿ ಮೃತದೇಹವನ್ನು ತಂದು, ಅದನ್ನು ಮ್ಯಾನ್ ಹೋಲ್ನಲ್ಲಿ ಬಿಸಾಡಿದ್ದನೆಂದು ಅವರು ತಿಳಿಸಿದರು.
ಆನಂತರ ಆತ ಯುವತಿಯ ತಾಯಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ದು, ಆಕೆ ನಾಪತ್ತೆಯಾಗಿದ್ದಳೆಂದು ಸುಳ್ಳು ದೂರು ನೀಡಿದ್ದ. ಜೂ.6ರಂದು ಎರಡು ಟಿಪ್ಪರ್ಲಾರಿಗಳಷ್ಟು ಕೆಂಪುಮಣ್ಣು ತಂದು, ಅದರಿಂದ ಮ್ಯಾನ್ ಹೋಲ್ ಮುಚ್ಚಿದ್ದ. ಆಕೆಯ ಕೈಚೀಲ ಹಾಗೂ ಲಗ್ಗೇಜನ್ನು ಕೂಡಾ ಸುಟ್ಟುಹಾಕಿದ್ದ. ಆನಂತರ ಆತ ತನ್ನ ಕಾರನ್ನು ತೊಳೆದು, ಅಪಾರ್ಟ್ಮೆಂಟ್ನಲ್ಲಿ ಪಾರ್ಕ್ ಮಾಡಿದ್ದ.
ಮಾರನೆಯ ದಿನ ಮತ್ತೆ ಆತ ಮ್ಯಾನ್ಹೋಲ್ ಇರುವ ಜಾಗಕ್ಕೆ ಭೇಟಿ ನೀಡಿದ್ದ. ಅಲ್ಲಿಂದ ಕೆಟ್ಟವಾಸನೆ ಹೊರಹೊಮ್ಮುವುದನ್ನು ಗಮನಿಸಿದ ಆತ, ಕೆಲವು ಕಾರ್ಮಿಕರಿಂದ ಮ್ಯಾನ್ಹೋಲ್ನ್ನು ಕಾಂಕ್ರೀಟ್ನಿಂದ ಮುಚ್ಚಿಸಿದ. ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ, ಆರೋಪಿ ನೀಡಿದ ಹೇಳಿಕೆಯಲ್ಲಿ ದ್ವಂದ್ವಗಳಿರುವುದು ಮನವರಿಕೆಯಾಯಿತು. ಆತನನ್ನು ತೀವ್ರವಾಗಿ ವಿಚಾರಣೆಗೊಳಪಡಿಸಿದಾಗ, ತಾನು ಯುವತಿಯನ್ನು ಕೊಲೆಗೈದಿರುವುದನ್ನು ಒಪ್ಪಿಕೊಂಡಿದ್ದಾನೆಂದು ಪೊಲೀಸ್ ಪ್ರಕಟಣೆ ತಿಳಿಸಿದೆ.