ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ:ದಿಟ್ಟ ನಿರ್ಧಾರದಂತೆ ವಿದ್ಯಾರ್ಥಿಗಳ ಪರಿಶ್ರಮ ಅವಶ್ಯಕ- ವೈದ್ಯ ದೇವೇಂದ್ರ ನಾಯ್ಕ'
ಭಟ್ಕಳ: ವಿದ್ಯಾರ್ಥಿ ಜೀವನದಲ್ಲಿ ಮಕ್ಕಳು ಯಾವ ಗುರಿಯೊಂದಿದೆ ಯೋಚಿಸುತ್ತೀರೋ ಅದರಂತೆ ಕಠಿಣ ಪರಿಶ್ರಮದಿಂದ ಗುರಿ ತಲುಪುತ್ತೀರಿ ಎಂದು ಬೆಂಗಳೂರಿನ ಪ್ರತಿಷ್ಠಿತ ಪೋರ್ಟಿಸ ಆಸ್ಪತ್ರೆಯ ಅರವಳಿಕೆ ವೈದ್ಯ ಡಾ.ದೇವೇಂದ್ರ ನಾಯ್ಕ ಹೇಳಿದರು.
ಅವರು ಭಾನುವಾರದಂದು ಇಲ್ಲಿನ ಶ್ರೀ ನಿಚ್ಛಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನ ಆಸರಕೇರಿ,ಭಟ್ಕಳ, ನಾಮಧಾರಿ ಅಭಿವೃದ್ಧಿ ಸಂಘ,ಭಟ್ಕಳ ಇದರ ವತಿಯಿಂದ ಗುರುಮಠದ ವ್ಯಾಪ್ತಿಗೆ ಒಳಡುವ ಎಸ್.ಎಸ್.ಎಲ್.ಸಿ.ಯಿಂದ ಪದವಿಯ ತನಕ 2018-19ನೇ ಸಾಲಿನಲ್ಲಿ ಸಾಧನೆ ಮಾಡಿದ ನಾಮಧಾರಿ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
'ಕಲಿಕೆಯ ಅವಧಿಯಲ್ಲಿ ವೇದಿಕೆಯ ಕೆಳಗಡೆಯಿದ್ದ ನಾನು ಕಠಿಣ ಪರಿಶ್ರಮದಿಂದ ಇಂದು ವೇದಿಕೆಯಲ್ಲಿ ಕುಳಿತಿದ್ದೇನೆ. ಇವೆಲಕ್ಕೂ ಸಮಾಜ ಹಾಗೂ ಕುಟುಂಬದ ಪ್ರೋತ್ಸಾಹವೇ ಕಾರಣ. ಒಂದು ಸರಿಯಾದ ನಿರ್ಧಾರದಂತೆ ಅದನ್ನು ಪಾಲಿಸಿ ಮುನ್ನಡೆಯಬೇಕು. ಆಗ ಮಾತ್ರ ನಿಮ್ಮಿಷ್ಟದ ಜೀವನ ನಡೆಸಲು ಸಾಧ್ಯ. ನನ್ನನ್ನು ಗುರುತಿಸಿ ಸನ್ಮಾನಿಸಿದ ಸಮಾಜಕ್ಕೆ ಚಿರಋಣಿ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕನ್ನಡ ಸಾಹಿತ್ಯ ಪರಿಷತ್ ಭಟ್ಕಳ ಅಧ್ಯಕ ಗಂಗಾಧರ ನಾಯ್ಕ ಮಾತನಾಡಿ ' ಪ್ರತಿಭೆಗಳಿಗೆ ಪುರಸ್ಕಾರವು ಅವರಲ್ಲಿನ ಪ್ರತಿಭೆಗೆ ಉತ್ತೇಜನ ನೀಡಲಾಗಿದ್ದು, ಸಹಾಯಧನದ ಮೂಲಕ ಪ್ರೋತ್ಸಾಹಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ. ನಮ್ಮ ಸಮಾಜದ ಪ್ರತಿಭೆಗಳು ಎಲ್ಲಾ ರಂಗದಲ್ಲಿಯೂ ಮುನ್ನಡೆಯಬೇಕಿದೆ. ಸಮಾಜದಿಂದ ಎಲ್ಲಾ ಪುರಸ್ಕಾರ, ಪ್ರೋತ್ಸಾಹ ಪಡೆದವರು ತಾವು ನೆಲೆ ನಿಂತ ಮೇಲೆ ಮುಂದಿನ ಪೀಳಿಗೆಯ ಪ್ರತಿಭೆಗಳ ಹಾದಿಯನ್ನು ಸುಗಮಗೊಳಿಸಲು ಸಮಾಜದೊಂದಿಗೆ ಸಹಕಾರಿಯಾಗಿರಬೇಕು ಇದು ಅವರ ಕರ್ತವ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತರಾಗಿ ಶ್ರೀ ರಾಮಕ್ಷೇತ್ರ ಉಜಿರೆ ಟ್ರಸ್ಟಿ ಜೆ.ಎನ್.ನಾಯ್ಕ, ಗುರು ಮಠದ ಗೌರವಾಧ್ಯಕ್ಷ ಡಿ.ಬಿ.ನಾಯ್ಕ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಗುರುಮಠದ ಅಧ್ಯಕ್ಷ ಎಮ್.ಆರ್.ನಾಯ್ಕ ' ಈಗಿನ ಪೀಳಿಗೆಗೆ ಮೊಬೈಲ್ ಗುರು ಬ್ರಹ್ಮ ಆಗಿದೆ ಆದರೆ ಅದನ್ನು ಸೂಕ್ಷ್ಮವಾಗಿ, ಸದುಪಯೋಗ ಪಡಿಸಿಕೊಳ್ಳಬೇಕಾಗಿರುವುದು ಅವರ ಕೈಯಲಿದೆ. ಮನೆಯಲ್ಲಿ ಪಾಲಕರು ಮಕ್ಕಳಿಗೆ ಶೈಕ್ಷಣಿಕತೆಯ ಜೊತೆಗೆ ಅವರಲ್ಲಿ ಧಾರ್ಮಿಕ, ಹಾಗೂ ಕುಟುಂಬದ ಪಾರಂಪರಿಕ ಸಂಸ್ಕೃತಿಯ ಅರಿವು ಮೂಡಿಸಿ ಹೆಚ್ಚಿನ ಒತ್ತು ನೀಡಬೇಕು. ವಿದ್ಯಾರ್ಥಿಗಳು ಕಠಿಣ ಪರಿಶ್ರಮದ ಜೊತೆಗೆ ಕೆಲವೊಂದು ಬಾರಿ ಸ್ಮಾರ್ಟ ವರ್ಕ ಮೊರೆ ಹೋಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ.ಯಿಂದ ಪದವಿಯ ತನಕ 2018-19ನೇ ಸಾಲಿನಲ್ಲಿ ಸಾಧನೆ ಮಾಡಿದ ಉತ್ತಮ ಅಂಕಪಡೆದ ನಾಮಧಾರಿ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಕ್ರೀಡಾಪಟುಗಳಿಗೆ, ಸರಕಾರಿ ನೌಕರರಿಗೆ, ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಗುರುಮಠ ಉಪಾಧ್ಯಕ್ಷ ಮೋಹನ ನಾಯ್ಕ, ಪ್ರಧಾನ ಕಾರ್ಯದರ್ಶಿ ರಾಜೇಶ ನಾಯ್ಕ ಹಾಗೂ ಆಡಳಿತ ಮಂಡಳಿಯ ಸರ್ವ ಗೌರವಾನ್ವಿತ ಸದಸ್ಯರು ಉಪಸ್ಥಿತರಿದ್ದರು.
ಶಿಕ್ಷಣ ಸಮಿತಿಯ ಸಂಚಾಲಕ ಕೆ.ಆರ್.ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮವನ್ನು ನಾರಾಯಣ ನಾಯ್ಕ ಹಾಗೂ ಮಂಜುನಾಥ ನಾಯ್ಕ ನಿರೂಪಿಸಿದರೆ ಶ್ರೀಧರ ನಾಯ್ಕ ಆಸರಕೇರಿ ವಂದಿಸಿದರು.