ಇಂಫಾಲ: ರಾಜ್ಯಕ್ಕೆ ಎರಡು ದಿನಗಳ ಭೇಟಿ ನೀಡಿರುವ ಪ್ರತಿಪಕ್ಷ ಮೈತ್ರಿಕೂಟ 'ಇಂಡಿಯಾ'ದ ನಿಯೋಗವು ಪ್ರಧಾನಿ ನರೇಂದ್ರ ಮೋದಿಯವರ ಮೌನವು ಮಣಿಪುರದಲ್ಲಿಯ ಹಿಂಸಾಚಾರಕ್ಕೆ ಅವರ ನಿರ್ಲಜ್ಜ ಅಸಡ್ಡೆಯನ್ನು ತೋರಿಸುತ್ತಿದೆ ಎಂದು ರವಿವಾರ ರಾಜ್ಯಪಾಲ ಅನುಸೂಯಾ ಉಯಿಕೆ ಅವರಿಗೆ ತಿಳಿಸಿತು.
ನಿಯೋಗದ ಸದಸ್ಯರು ಶನಿವಾರ ಇಂಫಾಲ, ಮೊಯಿರಾಂಗ್ ಮತ್ತು ಚುರಾಚಂದ್ರಪುರದಲ್ಲಿಯ ಪರಿಹಾರ ಶಿಬಿರಗಳಿಗೆ ತೆರಳಿ ಹಿಂಸಾಚಾರ ಸಂತ್ರಸ್ತರನ್ನು ಭೇಟಿಯಾಗಿದ್ದರು.
ರವಿವಾರ ಬೆಳಗ್ಗೆ ಉಯಿಕೆ ಅವರನ್ನು ಭೇಟಿಯಾದ ಸಂಸದರು ರಾಜ್ಯದಲ್ಲಿ ಸಂಪೂರ್ಣವಾಗಿ ಕುಸಿದಿರುವ ಕಾನೂನು ಮತ್ತು ಸುವ್ಯವಸ್ಥೆ ಕುರಿತು ಕೇಂದ್ರಕ್ಕೆ ತಿಳಿಸುವಂತೆ ಹಾಗೂ ಶಾಂತಿ ಮತ್ತು ಸುವ್ಯವಸ್ಥೆಯನ್ನು ಮರುಸ್ಥಾಪಿಸುವಂತೆ ಕೇಳಿಕೊಳ್ಳುವಂತೆ ಸೂಚಿಸಿದರು.
ಕಳೆದ ಕೆಲವು ದಿನಗಳಿಂದ ನಿರಂತರ ಗುಂಡು ಹಾರಾಟ ಮತ್ತು ಮನೆಗಳಿಗೆ ಬೆಂಕಿ ಹಚ್ಚಿದ ವರದಿಗಳು ಕಳೆದ ಮೂರು ತಿಂಗಳುಗಳಿಂದಲೂ ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಸರಕಾರಗಳು ಸಂಪೂರ್ಣವಾಗಿ ವಿಫಲಗೊಂಡಿವೆ ಎನ್ನುವುದನ್ನು ಸಾಬೀತುಗೊಳಿಸಿವೆ ಎಂದೂ ಅಹವಾಲಿನಲ್ಲಿ ಹೇಳಲಾಗಿದೆ.
ಪರಿಹಾರ ಶಿಬಿರಗಳಲ್ಲಿನ ಸ್ಥಿತಿ ದಯನೀಯವಾಗಿದೆ. ಆದ್ಯತೆಯ ಆಧಾರದಲ್ಲಿ ಮಕ್ಕಳ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸುವ ಅಗತ್ಯವಿದೆ. ವಿದ್ಯಾರ್ಥಿಗಳು ಅನಿಶ್ಚಿತ ಭವಿಷ್ಯವನ್ನು ಎದುರಿಸುತ್ತಿದ್ದಾರೆ ಮತ್ತು ಇದು ರಾಜ್ಯ ಮತ್ತು ಕೇಂದ್ರ ಸರಕಾರಗಳ ಆದ್ಯತೆಯಾಗಬೇಕಿದೆ ಎಂದಿರುವ ನಿಯೋಗವು, ಕಳೆದ ಮೂರು ತಿಂಗಳುಗಳಿಂದಲೂ ಮಣಿಪುರದಲ್ಲಿ ಇಂಟರ್ನೆಟ್ ನಿರಂತರ ನಿಷೇಧವನ್ನೂ ಪ್ರಸ್ತಾವಿಸಿದೆ. ಇದು ಅಲ್ಲಸಲ್ಲದ ವದಂತಿಗಳು ಮತ್ತು ಹಾಲಿ ಇರುವ ಅಪನಂಬಿಕೆಗಳನ್ನು ಇನ್ನಷ್ಟು ಹೆಚ್ಚಿಸುತ್ತಿದೆ ಎಂದು ಹೇಳಿದೆ. ಮಂಗಳವಾರ ರಾಜ್ಯದ ಬಿಜೆಪಿ ಸರಕಾರವು ಬ್ರಾಡ್ಬ್ಯಾಂಡ್ ಇಂಟರ್ನೆಟ್ ಸೇವೆಗಳ ಮೇಲಿನ ನಿಷೇಧವನ್ನು ಷರತ್ತುಬದ್ಧವಾಗಿ ಹಿಂದೆಗೆದುಕೊಂಡಿದೆಯಾದರೂ,ವ ಮೊಬೈಲ್ ಇಂಟರ್ನೆಟ್ ನಿಷೇಧ ಈಗಲೂ ಮುಂದುವರಿದಿದೆ.