ಹೊಸದಿಲ್ಲಿ: ಸದನದಲ್ಲಿ ಯಾರದೇ ಧರ್ಮ ಅಥವಾ ಜಾತಿಯನ್ನು ಉಲ್ಲೇಖಿಸದಂತೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಸೋಮವಾರ ಸದಸ್ಯರಿಗೆ ಎಚ್ಚರಿಕೆ ನೀಡಿದ್ದಾರೆ. ತಾನು ನಿರ್ದಿಷ್ಟ ಸಮುದಾಯವೊಂದಕ್ಕೆ ಸೇರಿರುವುದರಿಂದ ಹಿಂದಿಯಲ್ಲಿ ತನ್ನ ಪ್ರಾವೀಣ್ಯತೆಯ ಬಗ್ಗೆ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಟೀಕಿಸಿದ್ದಾರೆ ಎಂದು ಕಾಂಗ್ರೆಸ್ ಸಂಸದರೋರ್ವರು ಆರೋಪಿಸಿದ ಬಳಿಕ ಸ್ಪೀಕರ್ ರ ಈ ಎಚ್ಚರಿಕೆ ಹೊರಬಿದ್ದಿದೆ.
ಪ್ರಶೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಎ.ರೇವಂತ ರೆಡ್ಡಿಯವರು ತನ್ನ ಸ್ವಂತ ಸಾಮಾಜಿಕ ವರ್ಗವನ್ನು ಪ್ರಸ್ತಾಪಿಸಲು ಬಳಸಿದ ಪದಕ್ಕೆ ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದ ಸ್ಪೀಕರ್, ಜನರು ಲೋಕಸಭಾ ಸದಸ್ಯರನ್ನು ಅವರ ಜಾತಿ ಮತ್ತು ಧರ್ಮದ ಆಧಾರದಲ್ಲಿ ಆಯ್ಕೆ ಮಾಡಿಲ್ಲ ಎಂದು ಬೆಟ್ಟು ಮಾಡಿದರು.
ಇಲ್ಲಿರುವ ಯಾರೇ ಆದರೂ ಎಂದಿಗೂ ಇಂತಹ ಪದಗಳನ್ನು ಬಳಸಬಾರದು. ಅಂತಹ ಸದಸ್ಯರ ವಿರುದ್ಧ ತಾನು ಕ್ರಮವನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದರು.
ತಾನು ಪ್ರಶ್ನೆ ಕೇಳುತ್ತಿರುವಾಗ ಮಧ್ಯ ಪ್ರವೇಶಿಸದಂತೆ ಸ್ಪೀಕರ್ಗೆ ಸೂಚಿಸಿದ್ದಕ್ಕಾಗಿ ರೆಡ್ಡಿ ವಿರುದ್ಧವೂ ಬಿರ್ಲಾ ಗಂಭೀರ ಆಕ್ಷೇಪವನ್ನು ವ್ಯಕ್ತಪಡಿಸಿದರು. ಭವಿಷ್ಯದಲ್ಲಿ ಸ್ಪೀಕರ್ ಕುರಿತು ಎಂದಿಗೂ ಇಂತಹ ಟೀಕೆಗಳನ್ನು ಮಾಡದಂತೆ ತನ್ನ ಪಕ್ಷದ ಸದಸ್ಯರಲ್ಲಿ ಅರಿವು ಮೂಡಿಸುವಂತೆ ಬಿರ್ಲಾ ಸದನದಲ್ಲಿ ಕಾಂಗ್ರೆಸ್ ನಾಯಕ ಆಧರ್ ರಂಜನ್ ಚೌಧುರಿ ಅವರಿಗೆ ಸೂಚಿಸಿದರು.