ನೇಜಾರು ನಾಲ್ವರ ಕಗ್ಗೋಲೆ ಪ್ರಕರಣ: ಆರೋಪಿ ವಿರುದ್ಧ 2,202 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಕೆ
ಉಡುಪಿ: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ ನೇಜಾರುವಿನ ತಾಯಿ ಮತ್ತು ಮೂವರು ಮಕ್ಕಳ ಕಗ್ಗೋಲೆ ಪ್ರಕರಣದ ದೋಷಾರೋಪ ಪಟ್ಟಿಯನ್ನು ಉಡುಪಿಯ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.
ಈಗಾಗಲೇ ಪ್ರಕರಣದ ತನಿಖೆ ಪೂರ್ಣಗೊಂಡಿ ರುವ ಹಿನ್ನೆಲೆಯಲ್ಲಿ ಮತ್ತು ಚಾರ್ಜ್ ಶೀಟ್ ಸಲ್ಲಿಸಲು ಫೆ.12 ಕೊನೆಯ ದಿನವಾಗಿರುವುದರಿಂದ ಪ್ರಕರಣದ ತನಿಖಾಧಿಕಾರಿಯಾಗಿರುವ ಮಲ್ಪೆ ವೃತ್ತ ನಿರೀಕ್ಷಕ ಕೃಷ್ಣ ಎಸ್.ಕೆ. ದೋಷಾರೋಪ ಪಟ್ಟಿಯನ್ನು ಶನಿವಾರ ನ್ಯಾಯಾಧೀಶೆ ದೀಪಾ ಅವರ ಗೃಹ ಕಚೇರಿಯಲ್ಲಿ ಸಲ್ಲಿಸಿದರು.
15 ಸಂಪುಟ 2202 ಪುಟಗಳು ಕೊಲೆ ಪ್ರಕರಣದ ಆರೋಪಿ ಪ್ರವೀಣ್ ಚೌಗುಲೆ ವಿರುದ್ದ ಒಟ್ಟು 15 ಸಂಪುಟಗಳಲ್ಲಿ 2,202 ಪುಟಗಳ ದೋಷಾರೋಪ ಪಟ್ಟಿಯನ್ನು ತನಿಖಾಧಿಕಾರಿಗಳು ಸಲ್ಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ತಾಂತ್ರಿಕ ಸಾಕ್ಷ್ಯ, ವಿಶೇಷ ತಜ್ಞರ ಸಾಕ್ಷ್ಯ, ಜನರು ನೀಡಿದ ಹೇಳಿಕೆಯ ಸಾಕ್ಷ್ಯ ಸೇರಿದಂತೆ ಒಟ್ಟು 244 ಸಾಕ ಕ್ಷ್ಯಗಳನ್ನು ಸಂಗ್ರಹಿಸ ಲಾಗಿದೆ. ಇದರಲ್ಲಿ ಹಲವು ಮಂದಿ ಸಾಕ್ಷಿಗಳ ಹೇಳಿಕೆಯನ್ನು ಉಲ್ಲೇಖಿಸಲಾಗಿದೆ.
ಎಲ್ಲ ರೀತಿಯ ಸಾಕ್ಷ್ಯಗಳು ಹಾಗೂ ಎಫ್ಎಸ್ಎಲ್ ವರದಿಗಳು ಪೊಲೀಸರ ಕೈಸೇರಿರುವುದರಿಂದ ಒಂದೇ ಹಂತದಲ್ಲಿ ದೋಷಾರೋಪ ಪಟ್ಟಿಯನ್ನು ಸಲ್ಲಿಸಲಾಗಿದೆ.
ಫೆ.15ಕ್ಕೆ ಮುಂದೂಡಿಕೆ:
ದೋಷಾರೋಪ ಪಟ್ಟಿಯನ್ನು ಸ್ವೀಕರಿಸಿದ ನ್ಯಾಯಾಧೀಶರು ಸೋಮವಾರ ನ್ಯಾಯಾಲಯದಲ್ಲಿ ಈ ಕುರಿತ ದಾಖಲೆಗಳನ್ನು ಪರಿಶೀಲನೆ ನಡೆಸಿದರು. ಈ ವೇಳೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಆರೋಪಿ ಪ್ರವೀಣ್ ಚೌಗುಲೆಯನ್ನು ವೀಡಿಯೊ ಕಾನ್ಸರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಈ ಸಂಬಂಧ 188/24 ನ್ಯಾಯಾಲಯದ ಪ್ರಕರಣ ಸಂಖ್ಯೆಯನ್ನು ನೀಡ ಲಾಗಿದ್ದು, ದೋಷಾರೋಪ ಪಟ್ಟಿಯ ಮುಂದಿನ ಪರಿಶೀಲನೆಯನ್ನು ಫೆ.15ಕ್ಕೆ ಮುಂದೂಡಿ ನ್ಯಾಯಾಧೀಶರು ಆದೇಶ ನೀಡಿದರು. ಈ ಸಂದರ್ಭದಲ್ಲಿ ಪ್ರಕರಣದ ವಿಶೇಷ ಸರಕಾರಿ ಅಭಿಯೋಜಕ ಶಿವಪ್ರಸಾದ್ ಆಳ್ವ ಹಾಗೂ ಹಿರಿಯ ಸಹಾಯಕ ಸರಕಾರಿ ಅಭಿಯೋಜಕ ಎಚ್.ಎಂ.ನದಾಫ್ ಹಾಜರಿದ್ದರು.
ಕೊಲೆ ಪ್ರಕರಣದ ಹಿನ್ನೆಲೆ: ನೇಜಾರು ತೃಪ್ತಿ ಲೇಔಟ್ ನೂರ್ ಮುಹಮ್ಮದ್ ಎಂಬವರ ಪತ್ನಿ ಹಸೀನಾ (48) ಹಾಗೂ ಅವರ ಪುತ್ರಿಯರಾದ ಅಫ್ಘಾನ್ (23) ಮತ್ತು ಐನಾಝ (21) ಹಾಗೂ ಪುತ್ರ ಅಸೀಮ್ (13) ಎಂಬವರನ್ನು 2023ರ ನ.12ರಂದು ಹಾಡಹಗಲೇ ಮನೆಗೆ ನುಗ್ಗಿ ಚೂರಿಯಿಂದ ಇರಿದು ಬರ್ಬರ ಕೊಲೆಗೈಯಲಾಗಿತ್ತು. ಹಸೀನಾ ಅವರ ಅತ್ತೆ ಹಾಜಿರಾ(70) ಚೂರಿ ಇರಿತದಿಂದ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದರು.
ಈ ಗಂಭೀರ ಪ್ರಕರಣಕ್ಕೆ ಸಂಬಂಧಿಸಿ ಎಂಟು ತಂಡಗಳನ್ನು ರಚಿಸಿ ತನಿಖೆ ತೀವ್ರಗೊಳಿಸಲಾಗಿತ್ತು. ನ.14ರಂದು ಆರೋಪಿ ಮಂಗಳೂರಿನ ಏರ್ ಇಂಡಿಯಾ ಎಕ್ಸ್ಪ್ರೆಸ್ನ ಉದ್ಯೋಗಿಯಾಗಿದ್ದ ಪ್ರವೀಣ್ ಚೌಗುಲೆಯನ್ನು ಬೆಳಗಾವಿಯ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು.