ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ದೇಶದ ವಿಪಕ್ಷಗಳ ಸಭೆಯಲ್ಲಿ ೨೪ ರಾಜಕೀಯ ಪಕ್ಷಗಳು ಭಾಗವಹಿಸಿದ್ದು ಮಂಗಳವಾರ ಸಭೆ ಮುಕ್ತಾಯಗೊಂಡಿತು. ೨೦೨೪ರಲ್ಲಿ ನಡೆಯುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಮಿತ್ರಪಕ್ಷಗಳನ್ನು ಮಣಿಸಲು ಮೈತ್ರಿಕೂಟವೊಂದು ರಚನೆಯಾಗಿದ್ದು ವಿಪಕ್ಷಗಳ ಮೈತ್ರಿಕೂಟಕ್ಕೆ INDIA (Indian National Democratic Inclusive Alliance) ಎಂದು ಹೆಸರಿಡಲಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಘೋಷಿಸಿದ್ದಾರೆ.
ಅವರು ಸಿಬಿಐ, ಈಡಿ ಸೇರಿದಂತೆ ಎಲ್ಲಾ ತನಿಖಾ ಸಂಸ್ಥೆಗಳನ್ನು ವಿಪಕ್ಷ ನಾಯಕರ ವಿರುದ್ಧ ಬಳಸುತ್ತಿದ್ದಾರೆ. ನಮಗೆ ದೇಶ ಮುಖ್ಯ, ನಮ್ಮಲ್ಲಿ ಪ್ರಾದೇಶಿಕವಾಗಿ ಹಲವು ರಾಜಕೀಯ ವಿರೋಧ ಇರಬಹುದು, ಆದರೆ, ದೇಶದ ಹಿತಾಸಕ್ತಿಗಾಗಿ ನಾವು ಒಂದಾಗುತ್ತಿದ್ದೇವೆ ಎಂದು ಹೇಳಿದ್ದಾರೆ. ದೇಶದ ಜನರ ಹಿತಾಸಕ್ತಿ, ಪ್ರಜಾಪ್ರಭುತ್ವ ರಕ್ಷಣೆಗೆ ಇದು ಪ್ರಮುಖ ಸಭೆ, ನಾವು ನಮ್ಮೊಳಗೆ ವೈರುದ್ಧಗಳಿದ್ದರೂ ಜನರ ಒಂದೇ ದನಿಯಾಗಿ ನಾವು ಹೊರ ಹೊಮ್ಮುತ್ತೇವೆ ಎಂದು ಖರ್ಗೆ ಹೇಳಿದ್ದಾರೆ. ನಮ್ಮ ಮೈತ್ರಿಕೂಟದ ಹೆಸರಿನಲ್ಲಿ ಆಳವಾದ ಅರ್ಥವಿದೆ. ಇದು ದೇಶದ ಒಳಿತಿಗಾಗಿ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.